ಪುಟ:Hosa belaku.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಹೊಗೆಯಿಂದ ಹೊರಗೆ

ಯಲ್ಲಿ ಬೀಸು, ಅಡಿಗೆ, ದುಡಿತ ಮಾಡಿ ಇಬ್ಬರನ್ನೂ ಬೆಳಿಸಿದಳು. ಬಡತನವಿದ್ದರೂ ಮಕ್ಕಳಿಬ್ಬರೂ ಲಕ್ಷಣವಾಗಿ ಬೆಳೆದಿದ್ದರು.

"ರಾಜ್ಯಸಿರಿವಳಿದೊಡೆ ಪೂರ್ವಗುಣವುಳಿವುದೇ" ಎ೦ದು ರಾಘವಾಂಕ ಹೇಳಿದ ಹಾಗೆ, ಈ ಕುಟುಂಬಕ್ಕೆ ಈಗ ಬಡತನ ಬಂದಿತ್ತು. ಇಲ್ಲವಾದರೆ ಜಮೀನುದಾರರ ಮನೆಯಲ್ಲಿಯೇ ಬೆಳೆಯುತ್ತಿದ್ದುವು ಹುಡುಗರು. ರೂಪಕೌರಳಂತೂ ಹೆಸರಿಗೆ ತಕ್ಕ ಹಾಗೇ ಬೆಳೆದಿದ್ದು, ಸಾವಿರ ಜನ ಹೆಂಗುಸರಲ್ಲಿ ಅವಳನ್ನು ಒಮ್ಮೆಲೆ ಗುರುತಿಸುವದು ಅತಿ ಸುಲಭವಾದ ಮಾತಾಗಿತ್ತು. ಅವಳ ಆ ರಾಶಿ ಕೂದಲು, ಅವಳ ತುಂಬು ಮೈ ಕೈ, ಪ್ರಮಾಣಬದ್ಧ ಸ್ತನ, ಇವೆಲ್ಲ ಅವಳ ಸುಂದರ ಮೈ ಬಣ್ಣಕ್ಕೆ ಮೆರುಗು ಕೊಟ್ಟಿತ್ತು.

೧೯೪೬ ನೇ ಇಸವಿ ಕೊನೆಯಲ್ಲಿ ಪಂಜಾಬದಲ್ಲಿ ಪ್ರಾರಂಭವಾಯಿತು ಕುರುಕ್ಷೇತ್ರದ ಕದನ. ನಿರಪರಾಧಿ ಜೀವಿಗಳೆಷ್ಟೋ ಈ ಬೆಂಕಿಯಲ್ಲಿ ಸುಟ್ಟುಭಸ್ಮವಾದುವು. ಜಸವಂತ ತನ್ನ ತಾಯಿಯನ್ನೂ ತಂಗಿಯನ್ನೂ ಕರೆದುಕೊಂಡು ಭಾರತದ ಕಡೆ ನಡೆದ. ಪಾಕಿಸ್ತಾನದ ಗಡಿಯನ್ನು ಬಿಟ್ಟು ಭಾರತದ ಗಡಿ ಸೇರುವವರೆಗೂ ಆತನಿಗೆ ನೆಮ್ಮದಿ ಇರಲಿಲ್ಲ.

ಫ್ರಂಟಿಯರ ಎಕ್ಸ್‌ಪ್ರೆಸ್‌ ಪೇಶಾವರದಿಂದ ಬೊ೦ಬಾಯಿಗೆ ಹೋಗುವ ಈ ಗಾಡಿಯಲ್ಲಿ ಗುರುದಾಸಪೂರದಿಂದ ಕುಳಿತವರೆಂದರೆ ಜಸವಂತಸಿಂಗ, ಅವನ ತಾಯಿ, ಅವನ ತಂಗಿ ರೂಪಕೌರ. ಗಾಡಿ ಗುರುದಾಸಪೂರ ಸ್ಟೇಶನ ಬಿಟ್ಟಿತು. ಗಾಡಿಯ ಸಪ್ಪಳದಷ್ಟೇ, ಜಸವಂತನ ಎದೆ ಹೊಡೆದುಕೊಳ್ಳುತ್ತಿತ್ತು. ಒಂದೊಂದು ಸಲ ತುಂಬಾ ಧೈರ್ಯವನ್ನು ತಂದುಕೊಳ್ಳುತಿದ್ದ. ಗಾಡಿಯಲ್ಲಿದ್ದವರ ಸಂರಕ್ಷಣೆಗಾಗಿ ಬಲೂಚ ರೆಜಿಮೆಂಟ ಸುಸಜ್ಜಾಗಿ ಗಾರ್ಡನ ಬದಿ ಡಬ್ಬಿಯಲ್ಲಿ ಕುಳಿತಿತ್ತು.

ಗಾಡಿ ಗುರುದಾಸಪೂರದ ಮುಂದಿರುವ ಮೊದಲನೇ ಹಳ್ಳಿಯ ಸ್ಟೇಶನ್ನಿಗೆ ಹಠಾತ್ತಾಗಿ ನಿಂತುಹೋಯಿತು. ಫ್ರಂಟಿಯರ ಎಕ್ಸ್‌ಪ್ರೆಸ್ ಅಲ್ಲಿ ಮೊದಲೆಂದೂ ನಿಲ್ಲುತ್ತಿರಲಿಲ್ಲ. ಗಾಡಿ ನಿಂತಾಕ್ಷಣ, ಜಸವಂತಸಿಂಗ ಯೋಚನೆಯಲ್ಲಿ ಮುಳುಗಿದ. ತಂಗಿ ರೂಪಕೌರ ಗಾಬರಿಯಾಗಿ ಬಿಟ್ಟಳು. ಅವರು ಯೋಚಿಸುತ್ತಿರುವ ಮೊದಲೇ ಎರಡು ಮೂರು ರಾಯಫಲ್ಲಿನ ಸಪ್ಪಳ ಕೇಳಿಸಿತು. ಆ ಸಪ್ಪಳದ ಜತೆಯಲ್ಲಿ ಜನತಂಡದ ಜಯಜಯಕಾರ ಕೇಳಿಸಿತು.