ಪುಟ:Hosa belaku.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ಹೊಗೆಯಿಂದ ಹೊರಗೆ

ಕತೆ ಮುಗಿದಾಕ್ಷಣ ಡಾಯರೆಕ್ಟರ ಗಂಭೀರಸಿಂಗರ ಪತ್ನಿ ಜಸವಂತನ ಹೆಗಲಮೇಲೆ ಕೈಯಾಡಿಸಿ ಮೃದುಸ್ವರದಲ್ಲಿ ಸಾಂತ್ವನಗೊಳಿಸ ತೊಡಗಿದರು. ಹಾಗೆ ಕೈಯಾಡಿಸುತ್ತಿರುವಂತೆ ಅವರ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಂಡಿತು. ತನ್ನ ಸತಿಯತ್ತ ಹೊರಳಿ---

"ನೋಡಿ, ನನ್ನ ಕಳೆದು ಹೋದ ಮಗ ಸಿಕ್ಕಷ್ಟು ಆನಂದವಾಗಿದೆ ನನಗೆ"
"ನನಗೆ ಅಂತ ಏಕೆ ಹೇಳುತ್ತೀ, ನಮಗೆ ಅಂತ ಹೇಳು"



ಜಸವಂತಸಿಂಗ ಈಗ ನಿರ್ವಸಿತರ ಕ್ಯಾಂಪಿನಲ್ಲಿಲ್ಲ. ಅವನನ್ನು ಈಗಾಗಲೇ ಗಂಭೀರಸಿಂಗರು ತಮ್ಮ ಪುತ್ರನನ್ನಾಗಿ ಸ್ವೀಕರಿಸಿ ಬಿಟ್ಟರು. ಗಂಭೀರಸಿಂಗ ಮತ್ತು ಅವರ ಪತ್ನಿ ಇಬ್ಬರೂ ತಮ್ಮ ಗತಿಸಿದ ಮಗನನ್ನು ಮರೆತು ಇವನನ್ನೇ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನೆಂದು ಭಾವಿಸಿ ಇರತೊಡಗಿದರು. ಆ ಮರುವಿನಲ್ಲಿ ಅವರಿಗೆ ಆನಂದ ಲಭಿಸುತ್ತಿದ್ದರೂ ಜಸವಂತಸಿಂಗನ ಉದಾಸೀನ ಮುಖಮುದ್ರೆಯನ್ನು ನೋಡಿ ಮಮ್ಮಲ ಮರಗುತ್ತಿದ್ದರು. ತಂಗಿಗಾಗಿ ಪಡುತ್ತಿದ್ದ ಅವನ ದುಃಖದ ಅರಿವು ಆ ದಂಪತಿಗಳಿಗಿಬ್ಬರಿಗೂ ಆಗುತ್ತಿತ್ತು. ಆದರೆ……?

ಮುಂದೆ ಜಸವಂತನ ವಿದ್ಯಾಭ್ಯಾಸ ಅಡೆತಡೆಯಿಲ್ಲದೆ ಸಾಗುತ್ತಿತ್ತು. ಆದರೂ ತಂಗಿ ರೂಪಕೌರಳ ನೆನಹು ಅವನನ್ನು ಒಮ್ಮೊಮ್ಮೆ ತೀರ ಹುಚ್ಚನನ್ನಾಗಿ ಮಾಡಿಬಿಡುತ್ತಿತ್ತು.

ಉತ್ತರ ಹಿಂದುಸ್ಥಾನದಲ್ಲಿ ರಕ್ಷಾಬಂಧನದ ಹಬ್ಬಕ್ಕೆ ವಿಶೇಷ ಮಹತ್ವ. ಆ ಹಬ್ಬವೂ ತನ್ನ ನಿಯಮಿತ ಕಾಲಕ್ಕೇನೇ ಬಂದಿತು. ದೆಹಲಿಯಲ್ಲಿ ಪ್ರತಿ ಮನೆಯಲ್ಲಿ ಹಬ್ಬ ಒಳ್ಳೆ ವಿಜೃಂಭಣೆಯಿಂದ ಸಾಂಗವಾಗತೊಡಗಿತ್ತು. ಮನೆಮನೆಯಲ್ಲಿ ತಂಗಿ ಅಣ್ಣನಿಗೆ ರಕ್ಷಾಬಂಧನ ಕಟ್ಟುತ್ತಿರುವ ದೃಶ್ಯ ನೋಡುತ್ತಿದ್ದ ಜಸವಂತಸಿಂಗನಿಗೆ ದುಃಖ ಉಮ್ಮಳಿಸಿ ಬಂದಿತು. ಆ ದುಃಖದ ಭರದಲ್ಲಿ ಮನೆಗೆ ಬಂದವನೇ ಮೂರ್ಛೆ ಬಂದು ಬಿದ್ದು ಬಿಟ್ಟ.