ಪುಟ:Hosa belaku.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ

೪೫

ಗಂಭೀರಸಿಂಗರ ಪತ್ನಿ ಕೂಡಲೇ ಡಾಕ್ಟರರನ್ನು ಕರೆಸಿ ಉಪಚರಿಸಿದಳು. ಜಸವಂತಸಿಂಗನಿಗೆ ಮೈ ಮೇಲೆ ಪರಿವೆಯೇ ಉಳಿದಿರಲಿಲ್ಲ. ನಡುನಡುವೆಯೇ ಬಡಬಡಿಸುತ್ತಿದ್ದ.

"ರೂಪಕೌರ, ನನ್ನ ನಿನ್ನ ಭೆಟ್ಟಿ ಇನ್ನೆಂದು? ನನಗೆ ನಿನ್ನನ್ನು ಕಾಪಾಡಲಿಕ್ಕಾಗಲಿಲ್ಲ. ನಾನು ಸಾಯುವದೇ ಲೇಸು.”

ಅವನು ಬಡಬಡಿಸುವದನ್ನು ಕಂಡು ಗಂಭೀರಸಿಂಗರ ಪತ್ನಿ ಗಾಬರಿಯಾಗಿ ಬಿಟ್ಟಳು. ಡಾಕ್ಟರರನ್ನು ಅಂಗಲಾಚಿ ಬೇಡಿಕೊಂಡಳು. ಡಾಕ್ಟರು ಅವನನ್ನು ತಪಾಸಿಸಿ–--

"ಮನಸ್ಸಿನ ಮೇಲೊಂದು ದೊಡ್ಡ ಪೆಟ್ಟು ಬಿದ್ದಿವೆ. ಮಾನಸ ಶಾಸ್ತ್ರಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಿರಿ ” ಎಂದು ಹೇಳಿ ಹೊರಟುಹೋದರು.

ಕೂಡಲೆ ಗಂಭೀರಸಿಂಗರ ಪತ್ನಿ ಮಾನಸ ಶಾಸ್ತ್ರಜ್ಞರನ್ನು ಕರೆಸಿಕೊಂಡರು. ಅವರು ಪರಿಸ್ಥಿತಿಯನ್ನು ಕೂಲಂಕಷವಾಗಿ ನಿರೀಕ್ಷಿಸಿ, ಅವನ ಪ್ರೀತಿಯ ಓಘವನ್ನು ಮತ್ತೊಂದು ಬದಿಗೆ ಎಳಿಸಿ, ಮೊದಲಿನ ಪ್ರೀತಿಯನ್ನು ಮರೆಸುವಹಾಗೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಆ ದಿನ ರಾತ್ರಿ ಗಂಡ ಹೆಂಡರಿಬ್ಬರೂ ಯೋಚಿಸತೊಡಗಿದರು. ಗಂಭೀರಸಿಂಗ ತಮ್ಮ ಪತ್ನಿಗೆ ಸೂಚನೆ ಮಾಡಿದರು.

"ನೋಡು, ಬೇಗ ಅವನ ಮದುವೆ ಮಾಡಿ ಬಿಡೋಣ.”
"ಅಂದರೆ, ಅವನು ತನ್ನ ತಂಗಿಯನ್ನು ಮರೆಯಬಹುದೇ?"
“ಮರೆಯುವದು ಸಾಧ್ಯವಾಗುತ್ತೆ.”
"ಅಧೇಗೆ ?"

"ನೀನು ಈ ಮನೆಗೆ ಬರೋ ಮೊದಲು ನಾನು ನನ್ನ ತಾಯಿಯ ಸಾವಿಗೆ ತುಂಬಾ ಕಳವಳಪಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮಾಡಿದ್ದೆ, ಆದರೆ……"

"ಆದರೆ ಮುಂದೇನು ?"

"ಆದರೆ ಅಷ್ಟರಲ್ಲಿ ನನ್ನ ಮದುವೆ ಆಯಿತು. ನೀನು ಬಂದೆ. ನಿನಗೆ ನಾನು ಮಾರು ಹೋಗಿಬಿಟ್ಟೆ."

"ಆತ್ಮಹತ್ಯೆಯಿಂದ ನಿಮ್ಮನ್ನು ಉಳಿಸಿದವಳು ನಾನೇನೋ?"