ಪುಟ:Hosa belaku.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಹೊಗೆಯಿಂದ ಹೊರಗೆ

ಕಣ್ಣೀರನ್ನು ತೆಗೆಯಬಾರದು."

ಜಸವಂತಸಿಂಗನಿಗೆ ದುಃಖ ಒಮ್ಮೆಲೇ ಉಕ್ಕಿ ಬಂತು. ದುಃಖಿತನಾಗಿಯೇ ಹೇಳಿದ: "ಕೊನೆಗೂ ನನ್ನ ತಂಗಿ ನನಗೆ ಪತ್ತೆಯಾಗಲಿಲ್ಲ. ಅವಳಿದ್ದಿದ್ದರೆ ತನ್ನ ಅಣ್ಣನ ಲಗ್ನದಲ್ಲಿ ಎಷ್ಟು ಕುಣಿಯುತ್ತಿದ್ದಳೋ, ಎಷ್ಟು ಆನಂದ ಪಡುತ್ತಿದ್ದಳೋ, ನನ್ನ ತಂಗಿ ರೂಪಕೌರ–ತುಂಬಾ......." ಜಸವಂತಸಿಂಗನ ಕಂಠ ಗದ್ಧರಿಸಿತು. ತಾಯಿ ಸಂತೈಸತೊಡಗಿದಳು.

ಅಷ್ಟರಲ್ಲಿಯೇ ಲಗ್ನದ ಮಂಟಪದಿಂದ ಕರೆ ಬಂದಿತು. ಗಂಭೀರಸಿಂಗರು ಕೂಗಿ ಹೇಳಿದರು: "ಮುಹೂರ್ತ ಮಿಕ್ಕುವದರಲ್ಲಿದೆ. ಬೇಗ ಬನ್ನಿ" ತಾಯಿ ಜಸವಂತನನ್ನು ಲಗ್ನಮಂಟಪಕ್ಕೆ ಕರೆತಂದಳು. ಮನೆಯ ಮುಂದೆ ಹಾಕಿದ ಭವ್ಯ ಹಂದರದಲ್ಲಿ ೫೦೦ಕ್ಕೆ ಮೇಲ್ಪಟ್ಟು ಜನ ನೆರೆದಿದ್ದರು. ಡಾಯರೆಕ್ಟರರ ಮಗನ ಮದುವೆ ಎಂದಮೇಲೆ ಕೇಳುವದೇನಿದೆ.

ಜಸವಂತಸಿಂಗ ಒಂದುಸಲ ಆ ಜನಸಮ್ಮರ್ದದತ್ತ ದಿಟ್ಟಿಸಿ ನೋಡಿದ. ಅವನ ವ್ಯಾಕುಲಚಿತ್ತ ತಂಗಿ ಅಲ್ಲಿ ಎಲ್ಲಾದರೂ ಇರಬಹುದೇ ಎಂದು ಹುಚ್ಚು ಭರವಸೆ ಅವನಿಗೆ ಹುಟ್ಟಿಸಿತ್ತು. ದಂಗೆಯಲ್ಲಿ ಅಡವಿಪಾಲಾದವನು ಈವರೆಗೆ ಬರಬೇಕಾದರೆ ಸಾಕಾದಾಗ, ತಂಗಿ, ಅವಳೊಂದು ಹೆಣ್ಣು ಚಿಗರೆ ಯಾರ ಕೈಗೆ ಬಿದ್ದಿತೋ ಎಂದು ತನ್ನ ಮನಸ್ಸಿನ ಹುಚ್ಚುತನವನ್ನು ಸುಧಾರಿಸಿಕೊಂಡು ಮಂಟಪದತ್ತ ನಡೆದ.

ಮಂಟಪದಲ್ಲಿ ಹುಡುಗಿಯು ಬಂದಳು. ಜಬ್ಬಲಪೂರ ನಿರ್ವಸಿತರ ಕ್ಯಾಂಪಿನ ಮ್ಯಾನೇಜರನೇ ಅವಳಿಗೆ ತಂದೆಯಾಗಿ ಬಂದಿದ್ದ.

ಇಬ್ಬರ ನಡುವೆ ಅಂತರಪಟ ಹಿಡಿದು ಗುರು ಮಂತ್ರೋಚ್ಚರಣೆ ಮಾಡತೊಡಗಿದ. ಮಂತ್ರ ಮುಗಿದಾಕ್ಷಣ ಅ೦ತರಪಟ ಬದಿಗೆ ಸರಿಯಿತು. ವಧು ಜಸವಂತಸಿಂಗನ ಕೊರಳಲ್ಲಿ ಹಾರ ಹಾಕಲ, ಕತ್ತನ್ನು ಮೇಲಕ್ಕೆತ್ತಿದಳು. ಜಸವಂತ ಅವಳನ್ನು ನೋಡಿದಾಕ್ಷಣ ಕೈಯಲ್ಲಿಯ ಮಾಲೆಯನ್ನ ಕಿತ್ತೆಸೆದು ಅವಳನ್ನು ಅಪ್ಪಿಕೊಂಡು "ನನ್ನ ತಂಗಿ ರೂಪ, ರೂಪಕೌರ" ಎಂದು ಕೂಗುತ್ತ ಹುಚ್ಚೆದ್ದವರಂತೆ ಕೊಗಾಡತೊಡಗಿದ.

ತುಂಬಿದ ಜನವೆಲ್ಲ ಆಶ್ಚರ್ಯದಿಂದ ಸ್ತಬ್ಧರಾದರೆ, ಒಮ್ಮೆಲೆ ಶಾ೦ತಿ ನಲಿಸಿತು.