ಸಾಲ ಪರಿಹಾರ
೫೧
"ಸಾಲ ಕೊಡುವಾಗಷ್ಟೇ ನಾನು ದೇವರು. ತಿರುಗಿ ಕೇಳುವಾಗ ನಾನು ಭಸ್ಮಾಸುರ."
ಆಗಿನ ಅವರ ನಿಕಟಹಾಸ್ಯ ಅವರನ್ನು ಭಸ್ಮಾಸುರನನ್ನೇ ಹೋಲಿಸುತಿತ್ತು, ಆದರೂ ಅಂತಹ ರಕ್ಕಸನ ಕೈ ಕೆಳಗೆ ತಲೆಕೊಟ್ಟ ಹುಲ್ಲುಮಾನವನಿಗೆ ಮರಣಪರ್ಯಂತವೂ ಬದುಕಿನ ಆಸೆ ಬಿಟ್ಟಿದ್ದಲ್ಲ. ಸೋಮ ಇನ್ನೂ ಪ್ರಾರ್ಥಿಸುತ್ತಲೇ ಇದ್ದ.
"ಈ ಸಲ ನನ್ನ ಮಗಳು ಚಿನ್ನಿ ಮದ್ವೇ ಮಾಡಬೇಕು ಅಂತಾ ನಿರ್ಧಾರ ಮಾಡಿದ್ದೇನೆ ಸ್ವಾಮಿ. ಚಿನ್ನಿ ತಮ್ಮದೇ ಮಗಳು ಅಂತಾ....."
"ಅಂತಾ ಸಾಲಾ ಸೂಟ ಬಿಡಲಾ?”
"ಹಾಗೆ ಹೇಳಲಿಲ್ಲಾ ಬುದ್ಧಿ, ಇನ್ನೊಂದು ವರ್ಸ ತಡದ ಬಿಟ್ಟರೆ, ಖಂಡಿತ ತಮ್ಮದು ಅಸಲು ಬಡ್ಡಿ ಒಂದೇ ದಿನ ತಂದು ಒಪ್ಪಸ್ತೇನೆ.”
"ಒಂದು ವರ್ಸ ತಡೆದರೆ, ಮುಂದಿನ ಸಲ ಮಗಳ ಬಾಣಂತಿತನ ಅನ್ನುತ್ತಿ. ಲೋ ಸೋಮ, ಇದು ತೀರವ ವ್ಯವಹಾರ, ಸಾಲಗಾರ ಅತ್ತರೆ ಸಾವುಕಾರನ ಬಟ್ಟೆ ತೊಯ್ಯೋದಿಲ್ಲಾ, ಈ ವಾರದೊಳಗಾಗಿ ರಕಮು ಬಡ್ಡಿ ಸಹಿತ ನನ್ನ ತಿಜೋರಿ ಸೇರಬೇಕು.”
"ಕೈಯಲ್ಲಿ ಕಾಸೇ ಇಲ್ಲದಾಗ ಕೊಡೋದು ಹೇಗೆ ಸಾಮೀ ?" ಸೋಮನ ಧ್ವನಿಯಲ್ಲಿ ಕೊಂಚ ಮಾರ್ಪಾಟವಾಗಿತ್ತು, ದೈನ್ಯದ ಸುಳವನ್ನು ಕಾಠಿಣ್ಯ ವ್ಯಾಪಿಸಬಯಸುತ್ತಿತ್ತು.
ರಾಮರಾಯರು ಅಷ್ಟೇ ನಿಷ್ಫಲತೆಯಿಂದ ಉತ್ತರಿಸಿದರು.
"ಅದಕ್ಕೇ ನಿನ್ನ ಚನ್ನಪಟ್ಟಣ ಗಲ್ಲಿಯೊಳಗಿನ ಮನೆಯನ್ನು ಜಪ್ತಿಗೆ ತಂದದ್ದು. ಕಾಸಿಲ್ಲದಾಗ ಕಾಸು ಹೇಗೆ ಹುಟ್ಟುತ್ತೆ ನೋಡ್ತೇನೆ.”
ರಾಮರಾಯರ ಮಾತುಗಳಿಂದ ಸೋಮ ನಡುಗಿ ಹೋದ, ಅವನ ಯೋಚನೆಯ ಕಡಲೊಳಗೆ ಮದಗಜ ಹೊಕ್ಕು ಸರೋವರದ ಸ್ವಚ್ಛ ನೀರನ್ನು ಕದಡಿಸಿತ್ತು. ಚಿನ್ನಿಯ ಭವಿತವ್ಯ ಬೇರೆ ಅವನೆದುರು ಕುಣಿದಾಡತೊಡಗಿತು. ಸೋಮನ ಬುದ್ಧಿ ಮಂಕಾಯಿತು. ಮೈ ತುಂಬ ಬೆವರು ಹನಿ ಮೂಡಿತು. ಅದೇ ಸಮಯಕ್ಕೆ ವೇಣಕ್ಕ ಗಂಡನ ಎಲೆ ತಟ್ಟೆಯಲ್ಲಿ ಬದಾಮು ಹಾಕಲು ಒಳಮನೆಯಿಂದ ಹಜಾರಿಗೆ ಬಂದರು. ಸೋಮ ಬೆವತ