ಪುಟ:KELAVU SANNA KATHEGALU.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

13

ಪುಷ್ಪಗಳೂ ಕಾಶ್ಮೀರದಲ್ಲಿವೆ- ಜೈನಬಿ, ಶೇಕ ಇದ್ದ ಹೊಲ ಕಳೆದುಕೊಂಡು ಕಂಗಾಲಾದ ಜನರ ಅದುಮಿಟ್ಟ ದುಃಖ ದುಮ್ಮಾನದ ಒಡಬಾಗ್ನಿ ಒಳಗೊಳಗೆ ಕುದಿದು ಹೊರಬರಲು ಅಣಿಯಾಗಿತ್ತು. ಅಂಥ ದಿನ ಬಂದೇ ಬಂತು. ಡೋಗ್ರಾ ಅರಸೊತ್ತಿಗೆಯ ವಿರುದ್ದ ಶ್ರೀನಗರದಲ್ಲಿ ಕ್ರಾಂತಿ ಆಯಿತು. ರೈತರು ಬಂಡಾಯವೆದ್ದರು. ಅಂತೆ ಕಂತೆಗಳ ಸಂತೆಮಾತು ಯುವಕರ ಧಮನಿಗಳಿಗೆ ಕಾವು ಕೊಟ್ಟಿತು.

ಸಾವಿಗೆ ಹೆದರದೆ ಮುನ್ನುಗ್ಗುವ ಹವಣಿಕೆ ಆಯಿತು. ಅವರ ಬಯಕೆಗಳಿಗೆ ಜಾತಿಗಳು ಅಡ್ಡ ಬರಲಿಲ್ಲ. ಶೇಕ, ಕಿಶನಚಂದ, ಇನ್ನೂ ಕೆಲವರು, ಒಟ್ಟು ೭೬ ಜನ ಗಂಡುಗಲಿಗಳ ದಂಡು ಒಂದು ರಾತ್ರಿ ದಂಡ ಯಾತ್ರೆಗೆಂದು ಸಂಚು ಹೂಡಿ ಹೊರಟರು. ಎಲ್ಲರೂ ತಾಯ್ ನೆಲದ ಮಮತೆಯ ಮಕ್ಕಳು. ಒಂದೇ ಗುರಿ, ಒಂದೆ ದಾರಿ. ಆರು ದೋಣಿಗಳಲ್ಲಿ ನೌಕಾಪಡೆಯಂತೆ, ಇರುಳಿನೊಡಲನ್ನು ಸೀಳಿ ಬೆಳಕಿನೆಡೆಗೆ ಧಾವಿಸುವ ಧೀರರಂತೆ ಮುನ್ನುಗ್ಗಿದರು. ಕಾಶ್ಮೀರದ ಮಹಾರಾಜನನ್ನು ಸೆರೆಹಿಡಿಯುವುದೆ, ಪರಿಸ್ಥಿತಿಯ ಅರಿವು ಮಾಡಿ ಕೊಡುವುದೆ, ಹೃದಯ ಪರಿವರ್ತನೆಗೆ ಪ್ರಯತ್ನಿಸುವುದೆ-ಭಾವನೆಗಳ ತಾಕಲಾಟ ನಡೆದಿತ್ತು. ಗುರಿಮುಟ್ಟಿ ಕಾರ್ಯ ಕೈಗೂಡುವುದು ಇನ್ನೇನು ಕೂಗಿ ನಳತೆಯಲ್ಲಿದೆ ಎಂಬಷ್ಟರಲ್ಲಿ ಗುಂಡಿನ ಸುರಿಮಳೆ, ಇಂಕ್ವಿಲಾಬ್ ಜಿಂದಾಬಾದ್ ಎಂಬ ಜಯಘೋಷಣೆ ಬಂದೂಕಿನ ಗರ್ಜನೆಯಲ್ಲಿ ಲೀನವಾಯಿತು. ಬಿಡುಗಡೆಯ ಹೋರಾಟ ಅಧಿಕಾರದ ಅಸ್ತ್ರಗಳಲ್ಲಿ ಕರಗಿಹೋಯಿತು. ಅಳಿದುಳಿದವರಷ್ಟೇ ಹಿಂತಿರುಗಿದರು. ಶೇಕನ ಸುಳಿವಿಲ್ಲ. ಮಡಿದ ವಿ೬ ಜನರಲ್ಲಿ ಶೇಕನೂ ಒಬ್ಬ, ಜನರ ಭಾವನೆಗಳು ರಕ್ತಸಿಕ್ತವಾಗಿದ್ದುವು, ವಿಹಾರ ಸರೋವರ ರಕ್ತ ಸರೋವರವಾಗಿತ್ತು.

ಯಾವುದೇ ಸ್ವಾತಂತ್ರ ಸಂಗ್ರಾಮದ ಒಡಲಾಳದಲ್ಲಿರುವ ಸಾವು ನೋವಿನ ದಾರುಣ ಚಿತ್ರ ಹೃದಯ ಬಿರಿಯುವಂತೆ ಈ ಕಥೆಯಲ್ಲಿ ಸಾರ್ವತ್ರಿಕಗೊಂಡಿದೆ. ಹಿಂದೂ ಮುಸ್ಲಿಂ ಅಂತರಗಳಿಲ್ಲದ ಸೌಹಾರ್ದಯುತ ಪರಿಸರ ಗಮನ ಸೆಳೆಯುತ್ತದೆ. ಬೇರುಬಿಟ್ಟ ವ್ಯವಸ್ಥೆಯ ಕಪಿಮುಷ್ಟಿಯನ್ನು ಬಿಡಿಸುವುದು ಎಷ್ಟು ಕಷ್ಟವಿದೆ ಎಂಬುದನ್ನು ಚೆನ್ನಾಗಿ ಮನಗಾಣಿಸಲಾಗಿದೆ. ಆಳುವ ಅರಸರ ಸುಖನಿದ್ರೆ ಮುಖ್ಯವಾದ ಸಶಸ್ತ್ರ ಪಡೆಗೆ ಪ್ರಜೆಗಳ ಹಂಬಲ ಅರ್ಥವಾಗದ್ದು ದುರಂತದ ಪ್ರಖರತೆಯನ್ನು ಹೆಚ್ಚಿಸಿದೆ.

'ಕೊನೆಯ ಗಿರಾಕಿ' ಕರುಣೆ ಕೋಡಿಯಾಗಿ ಹರಿದಿರುವ ಕಥೆ, ಓದುಗರಿಗೆ ಕರುಳು ನುಲಿದುಕೊಂಡು ಕಿತ್ತು ಬರುವ ಅನುಭವವಾಗುತ್ತದೆ. ಸಮಾಜದ ಕಾಠಿಣ್ಯಕ್ಕೆ ಒಳಗಾಗುವ ಸೋಷಿತೆ ಕಾಣಿಯ ಬದುಕಿಗೆ ಮಮ್ಮಲ ಮರುಗುತ್ತೇವೆ.