ಪುಟ:KELAVU SANNA KATHEGALU.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

14

ತನ್ನವೇ ಆದ ಸಂವೇದನೆಗಳಿದ್ದರೂ ಅವನ್ನು ಹೇಳಿಕೊಳ್ಳಲಾಗದ ಕಾಣಿಯ ದುಸ್ಥಿತಿಗಾಗಿ ಮೂಕವೇದನೆಯೊಂದೇ ಉತ್ತರವಾಗಲಾರದು. ನಮ್ಮ ಸುತ್ತ ಒಂದು ತಪ್ತ ಬದುಕು ಹೇಗೆ ಸಾಗಿದೆ ಎಂಬುದರ ಅರಿವೂ ಇರಬೇಕು. ಜತೆಯ ಜನರೇ ನಮ್ಮ ಸಹಮಾನವರ ಶೋಷಣೆಯಲ್ಲಿ ನಿರತರಾಗಿರುತ್ತಾರೆಂಬುದು ದುರಂತದ ತೀವ್ರತೆಯನ್ನು ಮತ್ತಷ್ಟು ಮೊನಚಾಗಿಸುತ್ತದೆ. ನುಗ್ಗೆ ಕಾಣಿಗೆ ಲೋಕಜ್ಞಾನ ಕಡಿಮೆ. ಹಣಕಾಸು ಎಣಿಕೆಯೂ ತಿಳಿಯದು. ನೋಟಿನ ನಿರ್ದಿಷ್ಟ ಬೆಲೆ ಎಷ್ಟೆಂಬುದು ತಿಳಿಯದಾದರೂ ಅದರ ಮಹತ್ವ ಮಾತ್ರ ಗೊತ್ತಾದದ್ದು ಬದುಕಿನ ಅನಿವಾರ ಪಾಠಕಲಿಸಿದಾಗ, ಮನುಷ್ಯನಿಗೆ ಮಾಂಸದ ಹಸಿವು ಎಷ್ಟು ಗಾಢ! ಹರೆಯ ಇರುವ ಹೆಣ್ಣಾದರೆ ಆಯಿತು. ಆಕೆ ಮೂಕಿಯೊ ಟಾಕಿಯೊ ಯಾರಾದರೂ ನಡೆದೀತು. ಹಾಸಿಗೆಯ ಸುಖ ಕೊಡುವ ಹೆಣ್ಣಿಗೂ ಹೃದಯವಿದೆ, ನೋವು ನಲಿವುಗಳಿವೆ, ಸಂವೇದನೆ ಕನಸುಗಳಿವೆ ಎಂಬ ಭಾವನೆ ಕಿಂಚಿತ್ತೂ ಇಲ್ಲದ ಕಾಮತೃಷೆಯ ಜನರ ಮೈದಾಳಿಗೆ ಬಾಡಿಹೋದ ಬದುಕು ಕಾಣಿಯದು. ದಳ್ಳಾಳಿಯೊಬ್ಬ ಈಕೆಯ ದೇಹವನ್ನೇ ಅಂಗಡಿ ಮಾಡಿ ಇಂದ್ರಿಯ ವ್ಯಾಪಾರಕ್ಕೆ ಇದು ಕಾಣಿಗೂ ದೇಹಮಾರಿ ದುಡ್ಡು ಸಂಪಾದಿಸುವ ದಾರಿ ತೋರಿಸಿದ್ದ. ಆದರೆ ಕಾಣಿಯ ಕೊನೆಯ ಉಸಿರು ಎಳೆಯುವ ಕಡೆಯ ದಿನಗಳ ದುಃಖ ದುಮ್ಮಾನ ಹಗೆಗಳಿಗೂ ಬೇಡ, ತನ್ನವರೆನ್ನುವವರು ಯಾರೂ ಇಲ್ಲ. ಇದ್ದವರನ್ನೂ ಎಂದೋ ತಾನೇ ತೊರೆದು ಬಂದಿದ್ದಳು. ಅಂದು ಹಸಿಬಿಸಿ ಮಾಂಸ ತಬ್ಬಿ ಬಂದ ತರುಣನೂ ಇಲ್ಲ. ತನ್ನ ತಾರುಣ್ಯ ಬಾಚಿಕೊಳ್ಳಲು ಪಾಳಿಯಲ್ಲಿ ನಿಂತು ದಾಳಿ ಮಾಡಿ ಖುಶಿಪಡೆದವರಲ್ಲಿ ಯಾರೊಬ್ಬನೂ ಇಲ್ಲ. ಕಾಣಿಯ ಸಾವು ಅನಾಥರ ಶೋಷಿತರ ಸಾವು, ಚಿಮಿಣಿ ಎಣ್ಣೆ ಕಥೆಯ ಸೋಮನ ಸಾವಿನೊಡನೆ ಕಾಣಿಯ ಸಾವನ್ನು ತೂಗಿ ನೋಡಬಹುದು. ವಸ್ತು ಸರಳವಾಗಿದ್ದರೂ ಯಾವುದೊ ಪ್ರಸಂಗವೊಂದಕ್ಕೆ ಸ್ಪಂದಿಸಿದ ಕಥೆಗಾರರ ಆಲೋಚನೆ ಸಂಕೀರ್ಣ ವಾಗಿ ಕೆನೆಗಟ್ಟಿರುವುದು ಕಾಣಿಯ ವಾಸ್ತವಿಕ ಪಾತ್ರ ಚಿತ್ರಣದಲ್ಲಿ,

'ತಿರುಕಣ್ಣನ ಮತದಾನ' ಚುನಾವಣೆಯ ನಾಟಕವನ್ನು ಚೆನ್ನಾಗಿ ವಿಡಂಬಿಸಿರುವ ಹೃದ್ಯವಾದ ಕಥೆ, ಮತದಾನದ ಮಹಿಮೆಯನ್ನು ವಿಶ್ಲೇಷಿಸಿರುವ ಈ ಕಥೆ ಒಂದು ಪ್ರಹಸನದಂತಿದೆ. ಓಟು ಕೀಳುವ ಸಲುವಾಗಿ ಅಭ್ಯರ್ಥಿಗಳು ಮತದಾರರಿಗೆ ಒಡ್ಡುವ ಆಸೆ ಆಮಿಷಗಳ ಬಣ್ಣದ ದೊಡ್ಡ ಬಲೆ, ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆ ಹೆಚ್ಚುತ್ತಾ ಹೋಗುವ ಪ್ರಚಾರದ ಕಾವು, ಹುಸಿ ಆಶ್ವಾಸನೆಗಳ ಸುರಿಮಳೆ, ಕೃತಕ ಸೌಜನ್ಯದ