ಪುಟ:KELAVU SANNA KATHEGALU.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

16

ನಿರಂಜನರು ವೈಜ್ಞಾನಿಕ ದೃಷ್ಟಿಕೋನದವರು. ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುವವರು. ರೂಢಮೂಲವಾದ ಅರ್ಥಹೀನ ಮೂಢನಂಬಿಕೆಗಳ ಗುಹೆಗಳಿಂದ ಬೆಳಕಿನೆಡೆಗೆ, ವಿಜ್ಞಾನ ಕರುಣಿಸಿದ ಅನುಕೂಲಗಳು ನಮ್ಮ ವಿಚಾರಗಳನ್ನು ಹೊರಳಿಸುವ ಕಥೆ 'ಒಂಟಿ ನಕ್ಷತ್ರ ನಕ್ಕಿತು.' ಭಾರೀ ಆಣೆಕಟ್ಟುಗಳು ನಿರ್ಮಾಣವಾಗುವಾಗ ನೆಲ-ಹೊಲ, ಮನೆ, ಮಠ, ಮಂದಿರ, ಗುಡಿ ಗೋಪುರ, ಊರು ಕೇರಿಗಳು ಮುಳುಗಬೇಕಾಗಬಹುದು. ಆಗ ಜನಕ್ಕೆ ಸರಕಾರ ಮುನ್ಸೂಚನೆ ಮತ್ತು ತಕ್ಕಷ್ಟು ಪರಿಹಾರ ಕೊಡುತ್ತದೆ. ದೊಡ್ಡ ಸುಖಕ್ಕಾಗಿ ಸಣ್ಣ ಪುಟ್ಟ ತೊಂದರೆಗಳು ಅನಿವಾರ್ಯವಾದಲ್ಲಿ ಜನ ಅದಕ್ಕೆ ಸಿದ್ಧರಾಗಬೇಕು.

ಆದರೆ ಕೆಲವರಿಗೆ ಬದಲಾವಣೆ ಪ್ರಿಯವಾಗುವುದಿಲ್ಲ. ಒಂದು ರೀತಿಯ ಜೀವನ ವಿಧಾನಕ್ಕೆ ಒಗ್ಗಿದ ಮನಸ್ಸುಗಳಿಗೆ ಪರಿವರ್ತನೆಗೆ ಹೊಂದಿಕೊಳ್ಳುವುದಕ್ಕೆ ಹಿಂಜರಿಕೆ. ರಾಮನ ತಂದೆ ಹಿರಿಯ ಅಂಥವನು. ಆತ ಹಳೆಯ ತಲೆ ಮಾರಿನವನು. ಹಿಂದಿನ ಕಾಲದ ನಂಬಿಕೆಗಳಿಗೆ ಮುಗಿಬಿದ್ದವನು. ಅಪ್ಪ ನೆಟ್ಟ ಆಲಕ್ಕೆ ಕೈಮುಗಿದವನು. ಹುಟ್ಟಿದ ಹಳ್ಳಿ ಬಿಡುವುದೆಂದರೆ ಪ್ರಾಣ ಬಿಟ್ಟಂತೆ ದೈವನಿಷ್ಠ ಸಮಾಜದ ಅವಿಭಾಜ್ಯ ಅಂಗವಾದ ಆತನಿಗೆ ತಾನು ಬಲವಾಗಿ ಬಾಲ್ಯದಿಂದ ನಂಬಿದ ದೈವ ಇರುವ ಗ್ರಾಮ ನೀರಿನಲ್ಲಿ ಮುಳುಗಿ ಹೋಗುವುದೆಂದರೆ ಊಹೆಗೂ ನಿಲುಕದ್ದು. ಆದರೆ ಸತ್ಯ ಮತ್ತು ವಾಸ್ತವ ತುಂಬ ವಿಚಿತ್ರವಾಗಿರುತ್ತದೆ. ಗುಡಿಯ ಮುಳುಗಿತ್ತು. ಹನುಮಂತರಾಯನೂ ಮುಳುಗಿದ. ಪ್ರಳಯ ಮಾತ್ರ ಆಗಲಿಲ್ಲ. ಹಿರಿಯಜ್ಜನ ಕಲ್ಪನೆ ತತ್ತರಿಸಿತು, ವಿಚಾರ ಶಕ್ತಿಗೆ ಹಿಡಿದಿದ್ದ ತುಕ್ಕು ಕಳಚಿತು, ಕಣ್ಣಿನ ಪೊರೆ ಬಿಟ್ಟಂತೆ ಕಣ್ಣೆದುರಿನಲ್ಲೇ ಧುತ್ತೆಂದು ಸಾಕ್ಷಾತ್ಕಾರವಾದ ಆಣೆಕಟ್ಟಿನ ಸೌಲಭ್ಯಕ್ಕೆ ಮನಸ್ಸು ಸ್ವಾಗತಗೀತೆ ಹಾಡುತ್ತದೆ. ಅತ್ತ ಆಣೆಕಟ್ಟಿನಲ್ಲಿ ನೀರು ತುಂಬಿ ತೆರೆದ ತೂಬುಗಳಿಂದ ಜಲಧಾರೆ ನುಗ್ಗಿ ಹರಿಯಿತು; ಇತ್ತ ತನ್ನ ಮನೆಯಲ್ಲೂ ಹೊಸ ಜೀವ ಹುಟ್ಟಿತ್ತು, ಹೊಸ ಅರಿವಿನ ಬಾಗಿಲು ತೆರೆದಿತ್ತು. ಚಲನಶೀಲ ಬದುಕಿನ ಸ್ಥಿತ್ಯಂತರಗಳನ್ನು ಕನ್ನಡಿಸುವ ಈ ಕಥೆ ಹಳೆಯ ನಂಬಿಕೆಗಳಿಂದ ಬಿಡಿಸಿಕೊಳ್ಳುವುದರಲ್ಲಿ ಇರುವ ಮೌಡ್ಯದ ತೊಡರನ್ನು ಸೂಕ್ಷ್ಮವಾಗಿ ಸೆರೆಹಿಡಿದಿದೆ.

ಇಡೀ ಸಂಕಲನದಲ್ಲಿ ತನ್ನ ಸಾವಯವ ಸಮಗ್ರತೆಯಿಂದ ಕಲಾತ್ಮಕವಾಗಿ ಯಶಸ್ವಿಯಾಗಿರುವ ಚಲೋ ಕಥೆ 'ಹಮಾಲ ಇಮಾಮ್‌ಸಾಬಿ', ಅಜ್ಞಾತನೊಬ್ಬನ ಅಚ್ಚುಕಟ್ಟಾದ ಒಂದು ಪುಟ್ಟ ಜೀವನಚರಿತ್ರೆಯಂತಿರುವ ಈ ಕಥೆ ದಂತದ ಕೆತ್ತನೆಯಂತೆ ಸುಂದರವಾಗಿದೆ. ಹಮಾಲ ಇಮಾಮ ಈ ಇಂಡಿಯಾದ