26
೫
ಕೊನೆಯ ಗಿರಾಕಿ
ಆ ಸರ್ಕಲಿನಾಚೆ ಯಾರೂ ಹೋಗಲೊಲ್ಲರು. ಕಟ್ಟಡಗಳ ಅಡೆತಡೆಯಿಲ್ಲದ ವಿಸ್ತಾರ ಭೂಮಿಯ ಮೇಲಿಂದ ಬೀಸುತ್ತಿದ್ದ ತಂಗಾಳಿ ದುರ್ಗಂಧವನ್ನು ತರುತ್ತಿತ್ತು. ಜನ ಗುಜುಗುಜು ಮಾತಾಡುತ್ತಿದ್ದರು. ಅದೆಲ್ಲ ಅಸ್ಪಷ್ಟ ಕಲರವ.
ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣ ಹೊರಳಿಸಿ,
ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು..................ನಿಲ್ಲುವವರು ಯಾರ ಇರಲಿಲ್ಲ..........
ನಿಧಾನವಾಗಿ ಪುರಸಭೆಗೆ ವರದಿ ಹೋಯಿತು.
****
ಅದೊಂದು ದಿನ ಬೆಳಗ್ಗೆ ಕಾಣಿ ಎದ್ದು ನೋಡುತ್ತಾಳೆ-ರಾತ್ರಿ ಜತೆಯಲ್ಲಿ ಮಲಗಿದ್ದ ಸಂಗಡಿಗನಿಲ್ಲ. ಹದಿನಾರರ ಆ ಹುಡುಗಿ ಹತ್ತು ದಿನಗಳ ಹಿಂದೆ ಅವನ ಬೆಂಬತ್ತಿ ಕರ್ನಾಟಕದ ರಾಜಧಾನಿಗೆ ಓಡಿಬಂದಿದ್ದಳು-ತಮಿಳುನಾಡಿ ನೊಂದು ಊರಿಂದ.ತಿರುಪೆ ಎತ್ತುವ ಗರೀಬ ಆತ.ಒಂದು ಕೈ ಮೊಂಡು. ಆದರೆ ಒಂದು ರಾತ್ರೆ, ಇನ್ನೊಂದು ತೋಳಿನಿಂದ ಆಕೆಯನ್ನು ಆತ ಬಳಸಿ ಬರ ಸೆಳೆದಿದ್ದ. ಕಂಪಿಸುತ್ತಿದ್ದ ಹೃದಯದಿಂದ ಆಕೆ ಆತನನ್ನು ನೋಡಿದಳು; ಆ ಬಲಿಷ್ಟ ತೋಳನ್ನು ನೋಡಿದಳು. ಎರಡು ಕೈಗಳ ಶಕ್ತಿಯೂ ಇತ್ತದಕ್ಕೆ.
ಅಲ್ಲಿಂದ ಆ ರಾತ್ರೆಯೇ ಅವರು ಓಡಿಹೋದರು.
ಮನೆ ಇತ್ತು ಆಕೆಗೆ-ಚಿಕ್ಕ ಗುಡಿಸಲು.ಹೊಲವಿತ್ತು ಆಕೆಯ ತಾಯ್ತಂದೆಯರಿಗೆ-ಒಕ್ಕಲುತನದ ಒಂದಿಷ್ಟು ಹೊಲ. ಆ ವರ್ಷವೇ ಕೈಬಿಟ್ಟುವು; ಎಲ್ಲವೂ ಹೊರಟುಹೋದವು! ದೇಶಪ್ರೇಮಿಯಾದ ಆ ಹಿರಿಯ ಜಮೀನ್ದಾರ ಹೆಚ್ಚುಗೇಣಿ ಕೇಳಿದ. ಕೊಡದೆ ಹೋದರೆ ಹೊಸ ಒಕ್ಕಲನ್ನು ಹುಡುಕುವುದಾಗಿ ಹೇಳಿದ. ಹಾಗೆಯೇ ಆಯಿತು. ಕಾಣಿಯ ತಾಯ್ತಂದೆಯರು ಹೊಲ ಕಳೆದು ಕೊಂಡರು.ಮಡಿಕೆ ಕುಡಿಕೆಗಳೊಡನೆ ಗುಳೆ ಹೊರಟಿತು ಆ ಸಂಸಾರ.ಹಿರಿಯ