ಪುಟ:KELAVU SANNA KATHEGALU.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

42

ನಿರಂಜನ: ಕೆಲವು ಸಣ್ಣ ಕಥೆಗಳು

ಭಾರತೀಯ ಸಂಸ್ಕೃತಿ..."
ಆ ಮಾತುಗಳಿಗೆ ಯಾವ ಅರ್ಥವೂ ಇದ್ದಂತೆ ತೋರಲಿಲ್ಲ ತಿರುಕಣ್ಣನಿಗೆ.

...ಚುನಾವಣೆಯ ದಿನ ಬಂತು. ಯಾವ ಗದ್ದಲವೂ ಆ ಬೆಳಗ್ಗೆ
ಕೇಳಿಸಲಿಲ್ಲ.

"ಅಂತೂ ಪೀಡೆ ತೊಲಗಿತು!” ಎಂದುಕೊಂಡ ತಿರುಕಣ್ಣ. ಮಗಳ
ಮೇಲೂ, ತಾನೂ, ಮತ್ತೊಮ್ಮೆ ಕಂಬಳಿಯ ಮುಸುಕನ್ನೆಳೆದು ಮಲಗಿದ.
ಬಿಸಿಲೇರಿತು.
ತಿರುಕಣ್ಣ ಎದ್ದು ಕುಳಿತ.

ಬಹುಶಃ ತನಗಾಗಿ ಆ ದೊಡ್ಡ ಮನುಷ್ಯರೆಲ್ಲ ಹುಡುಕುತ್ತಿರಬಹುದು
ಎಂಬ ಯೋಚನೆ ಬಂತು. ಆದ್ದರಿಂದ ಒಂದು ರೀತಿಯ ಸಮಾಧಾನವೇ
ಆಯಿತು ಆತನಿಗೆ. ಭಿಕ್ಷೆ ಬೇಡಿಕೊಂಡು, ದಾನ ಕೇಳಿಕೊಂಡು, ತನ್ನ ಬಳಿಗೂ
ಬರುವವರಿದ್ದಾರಲ್ಲಾ ಎಂಬ ಹೆಮ್ಮೆ ಅವನಿಗೆ. ಆದರೆ ಅದು ಒಣ ಹೆಮ್ಮೆ.
ಅವನ ಕೆಮ್ಮು ಇದ್ದ ಹಾಗೆ.

ಆ ನೂರು ರೂಪಾಯಿ ಬರಲೇ ಇಲ್ಲ. ಆ ರಂಗೇಶಿಯ ಕಾಲು ಹಿಡಿ
ದಿದ್ದರೆ, ಅಥವಾ ಆ ಮರಕ್ಕೋ, ಗುಡಿಸಲಿಗೋ ಆತುಕೊಂಡಿದ್ದರೆ, ಅಥವಾ
ಎತ್ತಿನ ಹಿಂದೆಯಾದರೂ ಓಡಿದ್ದರೆ, ಏನಾದರೂ ಪ್ರಯೋಜನವಾಗುತ್ತಿತ್ತೋ
ಏನೋ. ಜೀವಮಾನವೆಲ್ಲ ದೇಹಶ್ರಮವನ್ನು ಮಾರಿಯೆ ಬದುಕಿದ ಆ ಜೀವಕ್ಕೆ
ಈ ಮಾರಾಟವೇನೂ ಹೊಸದಲ್ಲ. ಆದರೆ ಅವನ ಕಣ್ಣಿಗೆ ಕಾಣದೇ ಇದ್ದ,
ರಹಸ್ಯಮಯವಾದ, ಆರೋಗ್ಯಮ್ಮನ ಹೆಸರಿನ ಜತೆಯಲ್ಲೇ ಬರೆಯಲ್ಪಟ್ಟಿದ್ದ,
ತನ್ನ ಹಕ್ಕೆಂದು ಹೇಳಲಾದ ಒಂದು ಓಟನ್ನು ಮಾರಲು ಅವನ ಮನಸ್ಸು
ಒಡಂಬಡಲಿಲ್ಲ.

****

ಮಧ್ಯಾಹ್ನ ಬಂತು. ಮಗಳು ಆಗಲೇ ಹೊರಟು ಹೋಗಿದ್ದಳು.
ಹೊಟ್ಟೆ ಚುರುಕೆನ್ನುತ್ತಿತ್ತು. ಇದ್ದ ಬಿಡಿಕಾಸುಗಳನ್ನು ಜೇಬಿಗೆ ಸೇರಿಸಿ ತಿರುಕಣ್ಣ
ಹೊರಹೊರಡಲು ತೀರ್ಮಾನಿಸಿದ. ಆದರೆ ಮರುಕ್ಷಣದಲ್ಲೆ ಆತನಿಗೆ ಭಯ
ವಾಯಿತು. ಆ ಉಮೇದುವಾರರೆಲ್ಲಾದರೂ ತನ್ನನ್ನು ಕಂಡುಹಿಡಿದರೆ?....
ಯೋಚಿಸಿದಂತೆಲ್ಲ ಆ ಭಯ ಹೆಚ್ಚಿತು.

ಅಂತೂ ಹೊಟ್ಟೆ ಕೇಳದೆ ಇದ್ದಾಗ ತಿರುಕಣ್ಣ ಮೆಲ್ಲನೆ ಬೀದಿಗೆ ನುಸುಳಿ
ಆರು ಕಾಸಿನ ಕಡಲೆಕಾಯಿಯನ್ನೂ ಮೂರು ಕಾಸಿನ ಬೀಡಿಯನ್ನೂ ತಂದ.
ಕಡಲೆಕಾಯಿ ಭೋಜನವಾದ ಮೇಲೆ ಮತ್ತೊಮ್ಮೆ ನುಸುಳಿ ಹೋಗಿ ಬೀದಿ