ಪುಟ:Kadaliya Karpoora.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೧೧೩

ಸಮುದ್ರದಲ್ಲಿ ಕ್ಷಣಕಾಲ ಮಾತ್ರ ಎದ್ದ ತೆರೆ. ಅದು ಮೇಲೆಮೇಲೆ ತೇಲುತ್ತಿದ್ದ ಬೆಳ್ನೊರೆಯೇ ಹೊರತು ಅಂತರಂಗದ ರತ್ನವಲ್ಲ. ಆ ತಪ್ಪನ್ನೇ ಒಪ್ಪು ಎಂದು ಮುಚ್ಚಿಕೊಳ್ಳುವ ಇಷ್ಟ ನನಗಿಲ್ಲ. ನನಗೇಕೆ ಮದುವೆ ? ನನಗೇಕೆ ಕೌಶಿಕ ?'

ಎನಗೇಕಯ್ಯ ಸಾವ ಪ್ರಪಂಚಿನ ಪುತ್ತಳಿ ?

ಮಾಯಕದ ಮಲಭಾಂಡ, ಆತುರದ ಭವನಿಳಯ ಎನಗೇಕಯ್ಯ?

ಬೆರಳಿಂ ತಾಳ ಹಣ್ಣ ಹಿಸುಕಿದೊಡೆ ಮೆಲಲುಂಟೇ ?

ಎನ್ನ ತಪ್ಪು ಒಪ್ಪುಗೊಳ್ಳಾ ಚೆನ್ನಮಲ್ಲಿಕಾರ್ಜುನದೇವಾ.

`ಕ್ಷಣಕಾಲದ ದೌರ್ಬಲ್ಯಕ್ಕೆ ತನ್ನ ಮನಸ್ಸು ಒಳಗಾದರೂ ಆ ತಪ್ಪನ್ನು ಒಪ್ಪಿಕೊಂಡು ನನ್ನನ್ನು ಕ್ಷಮಿಸು" ಎಂದು ಮುಂತಾಗಿ ತನ್ನ ಪತಿ ಚೆನ್ನಮಲ್ಲಿಕಾರ್ಜುನನನ್ನು ಮೊರೆಹೊಕ್ಕಳು.

ಮುಂದೆ ಈ ಭಾವನೆ ಅವಳಲ್ಲಿ ಬಲವತ್ತರವಾಗುತ್ತಾ ನಡೆದಿತ್ತು. ಅಪೂರ್ವವಾದ ಪ್ರಗತಿ ಅವಳ ಭಕ್ತಿಸಾಧನೆಯಲ್ಲಿ ಕಂಡುಬರುತ್ತಿತ್ತು.

ಕೌಶಿಕನಿಗೆ ಸತಿಯಾಗಲು ಮಹಾದೇವಿ ಅರಮನೆಯನ್ನು ಪ್ರವೇಶಿಸಿದಳೆಂದು ಹೊರಗಿನ ಲೋಕ ತಿಳಿದಿದ್ದರೆ, ಆಕೆ ಚೆನ್ನಮಲ್ಲಿಕಾರ್ಜುನನ ಸಾಕ್ಷಾತ್ ಸತಿಯಾಗಿ ಮಧುರಭಕ್ತಿಯ ಪರಾಕಾಷ್ಠತೆಯನ್ನು ಮುಟ್ಟಿದಳು :

ತನ್ನ ವಿರಹದುರಿಯನ್ನು ರಸವಂತಿಯ ಮುಂದೆ ಹಾಡಿ ತೋರಿಸುತ್ತಿದ್ದಳು:

ಕಳವಳದ ಮನವು ತಲೆಕೆಳಗಾದುದವ್ವ !

ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವಾ ;

ಬೆಳದಿಂಗಳು ಬಿಸಿಲಾಯಿತ್ತು ಕೆಳದಿ,

ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ !

ತಿಳಿಹೌ ಬುದ್ಧಿಯ, ಹೇಳಿ ಕರೆತಾರೆಲಗೌ

ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ.

`ಈ ಗಂಡನನ್ನು ನನಗೆ ತಂದು ಕೊಡಿಸು, ನಿನ್ನ ರಾಜ ಕೌಶಿಕನನ್ನಲ್ಲ. ನಾನು ಮೊಟ್ಟ ಮೊದಲು ಒಲಿದ ಈ ಲಿಂಗಪತಿ, ನನ್ನನ್ನು ಸ್ವೀಕರಿಸಲಿ - ಎಂದು ಒಮ್ಮೆ ಕಾಮನ ಕಾಲನ್ನು ಹಿಡಿಯುತ್ತೇನೆ ; ಒಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುತ್ತೇನೆ. ವಿರಹದುಃಖದ ಉರಿಯಿಂದ ಬೇಯುತ್ತಿದ್ದೇನೆ. ಆದರೆ ಮಲ್ಲಿಕಾರ್ಜುನ ಒಲ್ಲದ ಕಾರಣ ಎಲ್ಲರಿಗೂ ಹಂಗಿತಿಯಾದೆ.

ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು

ದೇವಾಂಗವನುಟ್ಟು, ಪುರುಷ ಬಾರಾ !