ಪುಟ:Kadaliya Karpoora.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮

ಕದಳಿಯ ಕರ್ಪೂರ

ಮೀರಿ ನಡೆಯಲಾರರು. ಹಾಗೆ ಅವರಿಗೆ ಆಜ್ಞಾಪಿಸಿದ್ದೇನೆ.

``ಸರಿ, ಹಾಗಾದರೆ ನಾನು ಬರುತ್ತೇನೆ ಎಂದು ಮಹಾದೇವಿ ಹೊರಟಳು. ನಡೆಯುತ್ತಾ ಅಲ್ಲ, ಕುಣಿಯುತ್ತಾ ಹೋದಂತೆ ಕಾಣಸಿತು ಕೌಶಿಕನಿಗೆ. ಜಂಗಮ ಭಕ್ತಿಯ ಅವಳ ಉತ್ಸಾಹವನ್ನು ಕೌಶಿಕ ತನಗೆ ಅನುಗುಣವಾದ ದೃಷ್ಟಿಯಿಂದ ವಿಮರ್ಶಿಸಿದ. ತನ್ನ ರೊಟ್ಟಿಜಾರಿ ತುಪ್ಪದಲ್ಲಿ ಬಿದ್ದಿತೆಂದು ತಿಳಿದ. ನೆನ್ನೆಯ ದಿನದ ಘಟನೆಯಿಂದ ಅವಳಿಗೆ ಉಂಟಾದ ಕೋಪ ತಾತ್ಕಾಲಿಕವಾದುದೆಂದೂ, ಇಂದಿನ ಈ ಉತ್ಸಾಹ, ಸಮ್ಮತಿಸೂಚಕವಾದ ಸಂಕೇತವೆಂದೂ ಭಾವಿಸಿದ. ಇನ್ನೇನು ಇಂದೋ ನಾಳೆಯೋ ಮಹಾದೇವಿ ತನ್ನವಳಾಗುವ ಸಮ್ಮತಿಯನ್ನೀಯುವಳೆಂದು ಕನಸು ಕಟ್ಟಿದ. ಆ ಕನಸಿನ ಆಶಾಗೋಪುರದಲ್ಲಿಯೇ ವಿಹರಿಸುತ್ತಾ ಆ ದಿನವು ಉರುಳುವುದನ್ನೇ ಕಾಯತೊಡಗಿದ.

ಇತ್ತ ಮಹಾದೇವಿ ಜಂಗಮರ ಸತ್ಕಾರಕ್ಕೆ ಎಲ್ಲ ವ್ಯವಸ್ಥೆಯನ್ನೂ ಮಾಡಿದಳು. ರಸವಂತಿಯೂ ಅವಳಿಗೆ ಉತ್ಸಾಹದಿಂದ ನೆರವಾದಳು. ಜಂಗಮರು ಬರುತ್ತಿರುವುದನ್ನು ಕಂಡೊಡನೆಯೇ ತನಗೆ ತಿಳಿಸುವಂತೆ ರಸವಂತಿಯನ್ನು ನೇಮಿಸಿದಳು. ರಸವಂತಿ ಇನ್ನೂ ಒಬ್ಬಿಬ್ಬರು ದಾಸಿಯರೊಡನೆ ಹೆಬ್ಬಾಗಿಲಿನಲ್ಲಿಯೇ ನಿಂತಳು. ಜಂಗಮರನ್ನು ನಿರೀಕ್ಷಿಸುತ್ತಾ.

ಜಂಗಮರು ಬರುತ್ತಿರುವುದನ್ನು ಕೇಳಿದೊಡನೆಯೇ ಮಹಾದೇವಿ ಸಂಭ್ರಮದಿಂದ ಓಡಿದಳು ಹೆಬ್ಬಾಗಿಲಿನ ಬಳಿಗೆ. ಕೆಲವು ದಾಸಿಯರೂ ಅವಳನ್ನು ಹಿಂಬಾಲಿಸಿದರು. ದ್ವಾರಪಾಲಕರೆಲ್ಲಾ ತಮ್ಮ ಭಾವೀ ಮಹಾರಾಣಿ ಬರುತ್ತಿರುವುದರ ಗೌರವಸೂಚಕವಾಗಿ ವಿನಯದಿಂದ ದೂರಸರಿದು ನಿಂತಿದ್ದರು.

ಮಹಾದೇವಿ ಜಂಗಮರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಒಳಗೆ ಕರೆದೊಯ್ಯತೊಡಗಿದಳು.

ಜಂಗಮರು ಅರಮನೆಯನ್ನು ಪ್ರವೇಶಿಸಿದರು. ಅರಮನೆಯಲ್ಲಿ ದೊರೆತ ಆದರದ ಆತಿಥ್ಯವನ್ನು ಕಂಡು ಅವರಿಗೇ ಆಶ್ಚರ್ಯವಾಯಿತು. ಎಲ್ಲವೂ ಸಾಂಗವಾಗಿ, ಯಥಾಕ್ರಮವಾಗಿ ನಡೆದ ಮೇಲೆ ಜಂಗಮರಲ್ಲಿ ಹಿರಿಯರಾದ ಸಂಗಮದೇವರು ಹೇಳಿದರು :

``ಏನಮ್ಮಾ, ಅದ್ಭುತವಾದ ರಾಜಾತಿಥ್ಯವನ್ನು ನಡೆಸಿಬಿಟ್ಟೆ !

``ನಾನೇನೂ ಅರಿಯೆ, ಮಹಾಸ್ವಾಮಿ, ಇದೆಲ್ಲಾ ಚನ್ನಮಲ್ಲಿಕಾರ್ಜುನನ ವಿಚಿತ್ರ ಲೀಲೆ. ರಾಜಸಂಪತ್ತಿನಿಂದ ನಡೆದಿರುವ ಇದರ ಫಲವೆಲ್ಲಾ ಇದರ ಒಡೆಯರಾದ ಕೌಶಿಕ ಮಹಾರಾಜರಿಗೆ ಸಲ್ಲಲಿ. ಅದರಿಂದಲಾದರೂ ಅವರ