ಪುಟ:Kadaliya Karpoora.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೩೫

ಮಹಾಮನೆ. ಮಹಿಮಾನ್ವಿತವಾದ ಮೌನವನ್ನು ಬೀರುತ್ತಾ ಧಾನ್ಯಲೀನವಾದಂತಿತ್ತು. ಅಧ್ಯಯನದಲ್ಲಿ ತೊಡಗಿದ್ದ ಚನ್ನಬಸವ ಸಿದ್ಧರಾಮರು ತಮ್ಮ ಕೋಣೆಯಿಂದ ಪ್ರಭುದೇವ ಬಸವರನ್ನು ಕಂಡು ಹೊರಗೆ ಬಂದರು.

ಆ ಪ್ರಶಾಂತವಾದ ಮಂಗಳಕರ ಸನ್ನಿವೇಶದಲ್ಲಿ, ಮಂಗಳಮಯಿ ಮಹಾದೇವಿಯ ಮಹೋನ್ನತವಾದ ಸಾಕ್ಷಾತ್ಕಾರದ ಮಾತು, ಈ ಶರಣರ ಅನುಭಾವದ ವಿಷಯವಾಗಿ ಪರಿಣಮಿಸಿತು. ಇದನ್ನು ಕೇಳಿ ಧನ್ಯತೆಯ ಉದ್ಗಾರವನ್ನು ತೆಗೆಯುವಂತೆ ಚಂದ್ರ ಉತ್ಸಾಹಗೊಂಡು ದ್ವಿಗುಣವಾದ ತನ್ನ ಕಾಂತಿ ಕಿರಣಗಳನ್ನು ಸುರಿಸತೊಡಗಿದನು.

ಮಹಾದೇವಿ ಇನ್ನು ಬಹುಕಾಲ ಕಲ್ಯಾಣದಲ್ಲಿ ಇರಲಾರಳೆಂಬ ಪ್ರಭುದೇವನ ಊಹೆ ನಿಜವಾಗಿ ಪರಿಣಮಿಸಿತು. ಮರುದಿನವೇ ಆಕೆ ತನ್ನ ಆಕಾಂಕ್ಷೆಯನ್ನು ತಿಳಿಸಲು ಪ್ರಭುದೇವನ ಬಳಿಗೆ ಬಂದಳು. ಬಸವಣ್ಣ, ಚನ್ನಬಸವಣ್ಣರೂ ಆಗ ಅಲ್ಲಮನ ಬಳಿಯಲ್ಲಿದ್ದರು.

ಪ್ರಭು ಮಹಾದೇವಿಯನ್ನು ನೋಡಿ ಮಂದಹಾಸವನ್ನು ಬೀರುತ್ತಾ :

``ಬಿಂದು ಸಿಂಧುವನ್ನು ಸೇರಿದಂತಾಯಿತೇ, ಮಹಾದೇವಿ ?

``ಅಲ್ಲ ಪ್ರಭುವೇ, ನನಗನಿಸುತ್ತದೆ ಸಾಗರವು ಸಾಗರವನ್ನು ಸೇರಿದಂತಾಯಿತು ಎಂದು. ಅಕ್ಕನಿಗಿಂತ ಮೊದಲು ಚನ್ನಬಸವಣ್ಣ ಉತ್ತರಿಸಿದ.

``ಚೆನ್ನಾಗಿ ಹೇಳಿದೆ, ಚನ್ನಬಸವ. ಪ್ರಭು ಉತ್ತರಿಸಿದ.

``ಈ ಅನುಭಾವದ ಮಥನದಿಂದ ಕಲ್ಯಾಣದ ಕಡಲು ಭಕ್ತಿ ಸಾಗರದಲ್ಲಿ ಉಕ್ಕಿ ಹರಿಯುತ್ತಿದೆ ಬಸವಣ್ಣ ಮಹಾದೇವಿಯ ಸಾಧನೆಯನ್ನು ಹೊಗಳಿದ.

ಅಕ್ಕಮಹಾದೇವಿ ವಿನೀತಳಾಗಿ ಹೇಳಿದಳು: ``ಈ ಸಾಧನೆಯೆಲ್ಲಾ ನಿಮ್ಮ ಪ್ರಸಾದ

ಎನ್ನ ಭಕ್ತಿ ನಿಮ್ಮ ಧರ್ಮ.

ಎನ್ನ ಜ್ಞಾನ ಪ್ರಭುದೇವರ ಧರ್ಮ.

ಎನ್ನ ಪರಿಣಾಮ ಚನ್ನಬಸವಣ್ಣನ ಧರ್ಮ.

ಈ ಮೂವರೂ ಒಂದೊಂದು ಕೊಟ್ಟರೆನಗೆ ; ಮೂರು ಭಾವವಾಯಿತ್ತು.

ಆ ಮೂರನ್ನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ ಎನಗಾವ ಜಂಜಡವಿಲ್ಲ

ಚನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ ಕರುಣದ ಶಿಶು ನಾನು ಕಾಣಾ