ಪುಟ:Kadaliya Karpoora.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫

ಬೆಳೆಯುವ ಬೆಳಕು

ಇದನ್ನೇ ಮನಸ್ಸಿನಲ್ಲಿ ತಿರುವಿ ಹಾಕುತ್ತಾ ಓಂಕಾರ ಮುಂದಿನ ಕೆಲಸದಲ್ಲಿ ನಿರತನಾದ.

4

ಸಂಜೆ ಕಳೆದು ರಾತ್ರಿಯಾಗತೊಡಗಿತ್ತು. ಸಿದ್ಧತೆಯೆಲ್ಲಾ ಆಗಲೇ ಬಹುಪಾಲು ಮುಗಿದಿತ್ತು. ಗುರುಪಾದಪ್ಪನೇ ಮುಂದೆ ನಿಂತು ಎಲ್ಲ ಸಿದ್ಧತೆಗಳನ್ನು ಹೇಳಿ ಹೇಳಿ ಮಾಡಿಸುತ್ತಿದ್ದ. ಪೂಜಾಗೃಹ ಅಲಂಕಾರಗೊಂಡು ಅಪೂರ್ವವಾದ ಶೋಭೆಯನ್ನು ಬೀರುತ್ತಿತ್ತು. ಪೂಜಾಸಾಮಗ್ರಿಗಳೆಲ್ಲಾ ಸಿದ್ಧವಾಗಿದ್ದುವು. ದೀಕ್ಷೆಗೂ ಎಲ್ಲ ಅಣಿಯಾಗಿತ್ತು.

ಅಡುಗೆಮನೆಯಿಂದಲೂ ಬಾಯಲ್ಲಿ ನೀರೂರುವಂತಹ ರುಚಿಕರವಾದ ಕಂಪು ಹೊರಸೂಸುತ್ತಿತ್ತು. ಇಲ್ಲಿ ಮಾತ್ರ ಗುರುಪಾದಪ್ಪನ ಆಜ್ಞೆ ನಡೆಯುವಂತಿರಲಿಲ್ಲ. ಅವನ ಆಜ್ಞೆಗೆ ಹೊರತಾಗಿದ್ದ ವಲಯ ಅದು. ಅಲ್ಲಿ ಮಹಿಳೆಯರ ಮಾತಿಗೆ ಕೊನೆಯಿಲ್ಲ. ಅವರ ಇಷ್ಟವೇ ಅಲ್ಲಿ ನಡೆಯುವುದು.

ಗುರುಗಳು ಸ್ನಾನವನ್ನು ಮಾಡಿ ಪೂಜಾಗೃಹವನ್ನು ಸೇರಿದರು. ಅವರ ಪೂಜೆ ಮುಗಿಯುವ ವೇಳೆಗೆ ಪಂಚ ಮುತ್ತೈದೆಯರು ಮಹಾದೇವಿಗೂ ಮಂಗಳ ಸ್ನಾನವನ್ನು ಮಾಡಿಸಿದ್ದರು. ವಿಧ್ಯುಕ್ತವಾಗಿ ಕಾರ್ಯಗಳೆಲ್ಲಾ ನೆರವೇರಿದುವು. ಅದರಲ್ಲಿ ಕೊನೆಯದು ಮತ್ತು ಬಹಳ ಪ್ರಮುಖವಾದ ಅಂಶವೆಂದರೆ, ಮಂತ್ರೋಪದೇಶವನ್ನು ಮಾಡಿ ಇಷ್ಟಲಿಂಗವನ್ನು ಅನುಗ್ರಹಿಸುವುದು.

ಕಾವಿಯ ವಸ್ತ್ರದಲ್ಲಿ ಕಟ್ಟಿದ್ದ ಇಷ್ಟಲಿಂಗವನ್ನು ಗುರುಗಳು ಬಿಚ್ಚಿದರು. ಲಿಂಗದ ಮೇಲೆ ಹಾಕಿದ್ದ ಗೋಳಾಕಾರವಾದ ಕಪ್ಪು ಕಂಥೆ, ನಂದಾದೀಪಗಳ ಬೆಳಕಿನಲ್ಲಿ ಥಳಥಳನೆ ಹೊಳೆಯುತ್ತಿತ್ತು. ಅದನ್ನು ತೋರಿಸುತ್ತಾ ಹೇಳಿದರು ಗುರುಗಳು:

“ನೋಡು ಮಹಾದೇವಿ, ಇದು ಭಕ್ತನ ಸರ್ವ ಇಷ್ಟಾರ್ಥಗಳನ್ನು ನೆರವೇರಿಸುವ ಇಷ್ಟಲಿಂಗ. ಉಪಾಸನೆಯ ಅತ್ಯುನ್ನತವಾದ ಕಲ್ಪನೆ ಈ ಇಷ್ಟಲಿಂಗದಲ್ಲಿ ಕಾಣುತ್ತದೆ. ಈ ಕಪ್ಪು ಕಂಥೆ ಹೇಗೆ ಹೊಳೆಯುತ್ತಿದೆ ನೋಡು. ಇದರಲ್ಲಿ ನಿನ್ನ ಪ್ರತಿಬಿಂಬವೇ ಕಾಣುತ್ತಿದೆ. ನಮ್ಮತನದ ನಿಜಸ್ವರೂಪವನ್ನು ಕಾಣುವ ಕನ್ನಡಿಯಂತೆ ಈ ಲಿಂಗ. ಈ ಹೊರಗಡೆಯ ಕಂಥೆ ವಿಶ್ವದಾಕಾರವಾಗಿದೆ. ಇದರ ಒಳಗಡೆ ನಿನ್ನ ಹುಟ್ಟು ಲಿಂಗವಿದೆ. ಆ ಹುಟ್ಟು ಲಿಂಗ ಜೀವಾತ್ಮ ಸ್ವರೂಪ; ಈ ಕಂಥೆ ವಿಶ್ವಾತ್ಮರೂಪ. ವಿಶ್ವಾತ್ಮನಲ್ಲಿ ಜೀವಾತ್ಮನು ಅಡಗಿದ್ದಾನೆನ್ನುವ ಸತ್ಯದರ್ಶನಕ್ಕೆ ಈ