ಪುಟ:Kadaliya Karpoora.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬

ಕದಳಿಯ ಕರ್ಪೂರ

ಓಂಕಾರ ಮಹಾದೇವಿಯರು ನಾಲ್ಕು ಹೆಜ್ಜೆ ಮುಂದೆ ಹೋಗಿದ್ದರು. ಅಷ್ಟರಲ್ಲಿ ಎದುರಿನಿಂದ ಬಂದ ಮಾರ್ತಾಂಡಪ್ಪ. ಮಾಡಲು ಕೆಲಸವಿಲ್ಲದೆ, ಹಿರಿಯರ ಆಸ್ತಿಯನ್ನು ತಿಂದು ತಿರುಗುತ್ತಿದ್ದವನು ಅವನು. ಊರಿನ ಅಂಥದೇ ಒಂದು ಸಣ್ಣ ಗುಂಪಿಗೆ ಮುಖಂಡನಾಗಿದ್ದ. ಓಂಕಾರನನ್ನೂ ಮಹಾದೇವಿಯನ್ನೂ ಕಂಡು ಕೇಳಿದ :

``ಏನು ಓಂಕಾರ ಶೆಟ್ಟರೇ, ಈಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀರೋ ? ನಿಮಗೆ ಇದೊಂದು ಕೆಲಸವೇ ಆಗಿಹೋಯಿತಲ್ಲವೇ?” ಎಂದು ವ್ಯಂಗ್ಯವಾಗಿ ನಗುತ್ತಾ ಮಹಾದೇವಿಯತ್ತ ನೋಡಿ ಮುಂದೆ ನಡೆದ.

ಸ್ವಲ್ಪ ದೂರ ಮೌನವಾಗಿ ನಡೆದರು ತಂದೆ ಮಕ್ಕಳು. ನಂತರ ಓಂಕಾರ ಹೇಳಿದ :

``ಮಠದಲ್ಲಿ ನೀನು ಇಷ್ಟುಹೊತ್ತು ಇರಬಾರದಮ್ಮಾ. ನೀನೇನು ಹಿಂದಿನ ಹಾಗೆ ಚಿಕ್ಕವಳಲ್ಲ. ಅನ್ನುವವರಿಗೆ ಆಡಿಕೊಳ್ಳುವವರಿಗೆ ಒಂದು ಅವಕಾಶವಾಗುತ್ತದೆ.”

ಈ ಮಾತು ಮಹಾದೇವಿಯನ್ನು ಮೌನವನ್ನಾಗಿ ಮಾಡಿತು. ಈ ಮಾತಿನ ಸತ್ಯ ಈಗ ಹೆಜ್ಜೆ ಹೆಜ್ಜೆಗೂ ಅನುಭವಕ್ಕೆ ಬರತೊಡಗಿತ್ತು ಮಹಾದೇವಿಗೆ.

``ಇನ್ನೂ ಚಿಕ್ಕ ಹುಡುಗಿಯಂತೆ ಆಡುತ್ತಾಳೆ. ಮದುವೆಯಾಗಿದ್ದರೆ ಮೂರು ಮಕ್ಕಳಾಗುತ್ತಿದ್ದುವು."

``ಇನ್ನೂ ಮಠಕ್ಕೆ ಹೋಗುತ್ತಾಳೆ ? ಹೆಂಗಸರಿಗೇಕಮ್ಮ ಅದೆಲ್ಲಾ ?”

``ಅವಳದೇನು ತಪ್ಪು, ಇನ್ನೂ ಮದುವೆ ಮಾಡದೆ ಹಾಗೆ ಬಿಟ್ಟಿದ್ದಾರಲ್ಲ, ಅವರಿಗೇನು ಹೇಳಬೇಕು ?” - ಇಂತಹ ಅನೇಕ ಮಾತುಗಳು ಆಗಾಗ ಅವಳ ಕಿವಿಯ ಮೇಲೆ ಬೀಳುತ್ತಿದ್ದುವು.

ನಿಜ, ಮಹಾದೇವಿಯ ಗೆಳತಿಯರೆಲ್ಲರಿಗೂ ಆಗಲೇ ಮದುವೆಯಾಗಿದೆ. ಶಂಕರಿಗೆ ಈ ವರ್ಷ ಮದುವೆಯಾಯಿತು. ಆದರೆ ಇನ್ನೂ ತವರು ಮನೆಯನ್ನು ಬಿಟ್ಟಿಲ್ಲ. ಆಷಾಡಮಾಸ ಕಳೆಯುವುದನ್ನೇ ಕಾಯುತ್ತಿದ್ದಾನೆ. ಕಾತ್ಯಾಯಿನಿ ಹೋದ ವರ್ಷವೇ ಗಂಡನ ಮನೆಗೆ ಹೋದವಳು ಈ ವರ್ಷ ತಾಯಾಗುವ ಸಂತೋಷದಿಂದ ಬಂದಿದ್ದಾಳೆ ತವರೂರಿಗೆ. ದಾಕ್ಷಾಯಿಣಿಯಂತೂ ಈಗಾಗಲೇ ಒಂದು ಮಗುವಿನ ತಾಯಿ.

ಮೊನ್ನೆಯ ದಿನ ಆಕೆ ಮಹಾದೇವಿಯನ್ನು ನೋಡಲು ಬಂದಾಗ ಮಗುವನ್ನೆತ್ತಿಕೊಂಡೇ ಬಂದಿದ್ದಳು. ಅವಳ ಮಗುವನ್ನೆತ್ತಿಕೊಂಡು ಆಟವಾಡುತ್ತಿರುವಾಗ ದಾಕ್ಷಾಯಿಣಿ ಕೇಳಿದ್ದಳು :