ಪುಟ:Kadaliya Karpoora.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರೆ

೭೧

ವಸಂತಕ ಕೌಶಿಕನ ನೆಚ್ಚಿನ ಗೆಳೆಯ. ಬಾಲ್ಯದಿಂದಲೂ ಜೊತೆಯಲ್ಲಿಯೇ ಬೆಳೆದವರು. ರಾಜಪರಿವಾರದಲ್ಲೆಲ್ಲಾ ಹೆಚ್ಚು ಪ್ರಿಯನಾದವನು. ಆತ್ಮೀಯನಾದವನು. ರಾಜನೊಡನೆ ವಿಶೇಷ ಸಲುಗೆಯುಳ್ಳವನು. ಆನೆಯ ಮೇಲೆ ಒಬ್ಬನೇ ಕುಳಿತುಕೊಂಡು ಹೋಗುವ ಬೇಸರವನ್ನು ಪರಿಹರಿಸಿಕೊಳ್ಳುವುದಕ್ಕಾಗಿ, ತನ್ನ ಗೆಳೆಯ ವಸಂತಕನನ್ನು ಕೌಶಿಕ ಮೇಲೆ ಕುಳ್ಳಿರಿಸಿಕೊಳ್ಳುತ್ತಿದ್ದ.

ಪಟ್ಟದ ಆನೆಯ ಹಿಂದೆ ಮತ್ತೆ ಕಾಲಾಳುಗಳ ಸೈನ್ಯ. ಅದರ ಹಿಂದೆ ಅಶ್ವಾರೋಹಿಗಳು. ಹೀಗೆ ಉತ್ಸವದ ಕ್ರಮ ನಡೆದಿತ್ತು. ರಾಜಬೀದಿಯೆಲ್ಲಾ ತಳಿರು ತೋರಣಗಳಿಂದ ಅಲಂಕೃತವಾಗಿ ರಾಜನನ್ನು ಸ್ವಾಗತಿಸಲು ಸಿದ್ಧವಾಗಿತ್ತು. ಉತ್ಸವ ಬರುವುದಕ್ಕೆ ಎಷ್ಟೋ ಹೊತ್ತಿಗೆ ಮುಂಚಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಜನಜಂಗುಳಿ ನಿಂತು ರಾಜನ ಬರವನ್ನು ಕಾಯುತ್ತಿದ್ದರು. ತರತರದ ಅಲಂಕಾರಗಳಿಂದ ಶೃಂಗರಿಸಿಕೊಂಡು ನಿಂತ ಹೆಂಗಸರ ಗುಂಪೇ ಅಧಿಕವಾಗಿತ್ತು. ಶ್ರೀಮಂತ ಹಮರ್ಯ್‌ಗಳ ಮಹಡಿಯ ಮೇಲೂ ಜನ ಸೇರಿದ್ದರು. ಉತ್ಸವದ ಆಗಮವನ್ನೇ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.

ಓಂಕಾರನ ಮನೆಯ ಮಹಡಿ ಮೇಲಿನ ಬಿಸಿಲುಮಚ್ಚಿನಲ್ಲಿ ಕಾತ್ಯಾಯಿನಿ ದಾಕ್ಷಾಯಿಣಿ ಮತ್ತು ಶಂಕರಿ ಸೇರಿದ್ದರು. ಇವರೊಡನೆ ಮಹಾದೇವಿಯೂ ಇದ್ದಳು. ಉತ್ಸವವನ್ನು ನೋಡಿಯೇ ತೀರಬೇಕೆಂಬ ಕುತೂಹಲವೇನೂ ಮಹಾದೇವಿಗೆ ಅಷ್ಟಾಗಿ ಇರಲಿಲ್ಲ. ಆದರೆ ಗೆಳತಿಯರೆಲ್ಲಾ ಬಹುಸಂಭ್ರಮದಿಂದ ಸೇರಿರುವಾಗ ಅವರ ಜೊತೆಯಲ್ಲಿದ್ದು ಉತ್ಸವವನ್ನು ನೋಡುವುದಕ್ಕೆ ಆಗದೇ ಇರುವಂತಹ ಆತಂಕವೇನೂ ಆಕೆಗೆ ಇರಲಿಲ್ಲ. ಅವರೊಡನೆ ನಿಂತು ಅವರ ಸಂತೋಷದಲ್ಲಿ ತಾನೂ ಭಾಗಿಯಾಗಿದ್ದಳು.

ಓಂಕಾರ - ಲಿಂಗಮ್ಮ ಕೆಳಗಡೆ ಜಗುಲಿಯ ಮೇಲೆ ನಿಂತು ಉತ್ಸವವನ್ನು ಕಾಯುತ್ತಿದ್ದರು.

ರಸ್ತೆಯ ಎರಡು ಪಕ್ಕಗಳಲ್ಲಿಯೂ ಸಿಪಾಯಿಗಳು ನಿಂತು, ರಸ್ತೆಯ ಮೇಲೆ ಜನರನ್ನು ಹಿಂದಕ್ಕೆ ತಳ್ಳುತ್ತಿದ್ದರು. ಉತ್ಸವ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲಾ ನೂಕುನುಗ್ಗಲು ಹೇಳತೀರದಂತಾಯಿತು. ದೂರದಲ್ಲಿ ಕಣ್ಣಿಗೆ ಬಿದ್ದಿತು ಬಾವುಟವನ್ನು ಹೊತ್ತ ಮೊಟ್ಟಮೊದಲನೆಯ ಆನೆ. ``ಉತ್ಸವ ಬಂತು, ಉತ್ಸವ ಬಂತು ! ಎನ್ನುತ್ತಾ ಜನಗಳೆಲ್ಲಾ ನುಗ್ಗುತ್ತಿದ್ದರು.

ಕುದುರೆಯ ಸೈನ್ಯ ಹಾದುಹೋಯಿತು, ಅನಂತರ ಕಾಲಾಳುಗಳು ತಮ್ಮ ಆಯುಧಗಳನ್ನು ಝಳಪಿಸುತ್ತಾ ಶಿಸ್ತಿನಿಂದ ಮುಂದೆ ನಡೆಯುತ್ತಿದ್ದರು. ಅಷ್ಟರಲ್ಲಿ