ಪುಟ:Kalyaand-asvaami.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦ ಕಲ್ಯಾಣಸ್ವಾಮಿ


ತನ್ನ ಮಟ್ಟಿಗೆ ಮಸಕಾಗಿದ್ದ ಬೆಳುದಿಂಗಳನ್ನು ದಿಟ್ಟಿಸುತ್ತ, ಕಾಡಿನ ಕಲರವಕ್ಕೆ ಕಿವಿಗೊಡುತ್ತ, ಗಂಗವ್ವ, ಹಳೆಯ ನೆನಪುಗಳ ಸಿಕ್ಯುಸಿಕ್ಕಾಗಿದ್ದ ಎಳೆಗಳನ್ನು ಒಂದೊಂದಾಗಿಯೆ ಬಿಡಿಸತೊಡಗಿದಳು...


-ಮೂವತ್ತು ವರುಷಗಳ ಹಿಂದೆ.


ಹಾಗೆಯೇ ಕಾದುಕುಳಿತಿದ್ದ ಅಂತಹದೇ ರಾತ್ರೆಗಳು. ಹತ್ತು ವರ್ಷ ವಯಸ್ಸಿನ ಮಗಳು ವೀರಮ್ಮ; ಪುಟ್ಟಬಸವನನ್ನು ಬಸಿರಲ್ಲಿ ಹೊತ್ತಿದ್ದ ತಾನು; ಹಾಗೂ ತನ್ನತ್ತೆ. ಗಟ್ಟಿ ಮುಟ್ಟಾಗಿದ್ದ ಜೀವ ಆ ವೃಧ್ದೆ. ಆಕೆ ತನ್ನ ಮಗನ ಹಾದಿ ನೋಡುತ್ತಿದ್ದಳು. ಆಳುತಿದ್ದ ದೊಡ್ಡ ವೀರರಾಜನ ಆಪ್ತ ಕೋಟಿಯಲ್ಲೊಬ್ಬ ಸರದಾರನಾಗಿದ್ದ ವೀರಮ್ಮನ ತಂದೆ. ಆತ ನಾಲ್ಕಾರು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ.


'ಮನೇಲಿ ಹೆಂಡತಿ ಬಸುರಿ ಅನ್ನೋ ಗಾನವಾದರೂ ಬೇಡವಾ ఇವನಿಗೆ ? ಎನ್ನುತ್ತ ರೇಗಾಡುತ್ತಿದ್ದಳು ಅತ್ತೆ, 'ನೀನಾಕೆ ಎದ್ದು ಕೂತಿದೀಯಾ? ಹೋಗಿ ಮಲಗಿಕೊ' ಎಂದು ಸೊಸೆಗೆ ಹೇಳುತ್ತಿದ್ದಳು.

ಹಾಗೆ ಎಷ್ಟೋ ಹಗಲು ಎಷ್ಟೋ ಇರುಳು ಕಳೆದ ಬಳಿಕ...

ಒಂದು ದಿನ ಆಸ್ಥಾನದಿಂದ ಓಲೆಕಾರ ಬ೦ದ. ಆತ ತ೦ದುದು ವೀರಮ್ಮನ ತಂದೆ ತೀರಿಹೋದನೆಂಬ ವಾರ್ತೆಯನ್ನು.


ಬಸವರಾಜಪ್ಪನವರು ಎರಡು ವಾರಗಳಿಗೆ ಹಿಂದೆ ಅಪಮೃತ್ಯುವಿಗೆ ಗುರಿಯಾದರು ಅವ್ವಾವರೆ.'


ಅಪಮೃತ್ಯು? ವೀರ ಸರದಾರನಿಗೆ ಅಪಮೃತ್ಯು? ಏನಾಯಿತು ? ಅರಸನಿಗೆ ಪ್ರಿಯನಾಗಿದ್ದ ಆ ಧೀರನಿಗೆ ಏನಾಯಿತು? ಯಾವ ದುಷ್ಟನ ಖಡ್ಗ ಆತನ ಮೇಲೆರಗಿತು? ಯಾವ ನೀಚನ ಗುಂಡು ಆತನಿಗೆ ತಾಕಿತು?


ಹೇಳೋಕೆ ನಾಲಗೆ ಹೊರಳೋದಿಲ್ರವ್ವಾ. ಮಹಾರಾಜರು ಒಕ್ಕಣೆ ಬರಸವ್ರೆ'


ಅರಸರು ಒಕ್ಕಣೆ ಬರೆಸಿದ್ದರು:

'ನಮ್ಮ ನೆಚ್ಚಿನ ಮಿತ್ರರಾದ ಸರದಾರ ಬಸವರಾಜಪ್ಪನವರ ತಾಯಿ ಮತ್ತು ಹೆಂಡತಿ – ಇವರಿಗೆ.'


ರಾಜಕಾರ್ಯನಿಮಿತ್ತ ಬಸವರಾಜಪ್ಪ ನಾಲ್ಕುನಾಡಿಗೆ ಹೋಗಿದ್ದ.