ಈ ಪುಟವನ್ನು ಪರಿಶೀಲಿಸಲಾಗಿದೆ
ಕಲ್ಯಾಣಸ್ವಾಮಿ
"ಅಡುಗೆ ಏನೇನು ಮಾಡಿಸೋಣ ನಂಜಯ್ಯನವರೆ?"
ನಂಜಯ್ಯನೆಂದ:
"ನೀವೂ ಸರಿ ಮನೆಯವರೇ ಆಗಿ ಹೋದಿರಿ. ಅತಿಥಿ ಸತ್ಕಾರದ ಯೋಚನೆಯೆ? ದಯವಿಟ್ಟು ಅಂಥದೊಂದೂ ಮಾಡ್ಬೇಡಿ."
ಚೆಟ್ಟ ಕುಡಿಯನೂ ಧ್ವನಿ ಕೂಡಿಸಿದ :
- ಬರೇ ಅನ್ನ ಸಾರು ಸಾಕು ಅಣ್ಣ"
--ಮಗನ ಅಭಿಪ್ರಾಯವನ್ನು ತಿಳಿದಾಗ ಗಂಗವ್ವ ಮೆಲ್ಲನೆ ನಿಟ್ಟುಸಿರು ಬಿಟ್ಟಳು.
ಮಧ್ಯಾಹ್ನದ ಊಟವಾದ ಬಳಿಕ ಪುನಃ ನಿದ್ದೆ ಹೋಗಲು ಯಾರೂ ಇಷ್ಟಪಡಲಿಲ್ಲ.
ಪುಟ್ಟಬಸವ ಹೇಳಿದ:
" ಇಲ್ಲೇ ಪಕ್ಕದ ಹಳ್ಳಿಗೆ ಹೋಗಿಬರ್ತೀನಿ. ಕೂಗಳತೆ ದೂರದಲ್ಲಿ ಬೇರೆಯೂ ಒಂದೆರಡು ಮನೆಗಳು ಇದಾವೆ. ಅವರನ್ನೆಲ್ಲಾ ನೋಡ್ಕೋಂಡು ಬರ್ತೀನಿ."
"ನಾನೂ ಬರ್ಲೇನು?" ಎಂದು ಕೇಳಿದ ನಂಜಯ್ಯ.
"ಬೇಡ. ನೀವೆಲ್ಲಾ ಇಲ್ಲೇ ಇರಿ."
"ಒಂದಷ್ಟು ಜನರನ್ನು ಕರಕೊಂಡು ಬಂದ್ಬಿಡಿ."
"ನಾನು ಕರಿಯೋದೇನು? ಅವರಾಗೇ ಬರ್ತಾರೆ. ನೋಡ್ತಿರಿ."
ಪುಟ್ಟಬಸವ ಹೋದ ಬಳಿಕ ನಂಜಯ್ಯ ಗಂಗವ್ವನೊಡನೆ ಮಾತನಾಡಿದ. ಕರ್ತುಕುಡಿಯ ಕುದುರೆಗಳಿಗೆ ಮಾಲೀಸು ಮಾಡಿದ, ಚಿಟ್ಟಿಯೊಬ್ಬನೇ ಬಂದೂಕನ್ನು ಹೆಗಲ ಮೇಲಿರಿಸಿ ಸುತ್ತುಮುತ್ತಲ ಕಾಡಿನ ಪರಿಚಯ ಮಾಡಿಕೊಳ್ಳಲೆಂದು ಕಾಲುಹಾಕಿದ.