ಕತ್ತಲು ಕವಿದ ಕೊಡಗು
ಜಗಲಿಯ ಗೋಡೆಯಾಚೆಗೆ ಮರೆಯಲ್ಲಿ ಗಂಗವ್ವ ಗಿರಿಜೆಯರು ಕುಳಿತರು.
ತಣ್ಣನೆ ಗಾಳಿ ಬೀಸಿತು. ಮರದೆಲೆಗಳಿಂದ ಕಚಕಚನೆ ಸದ್ಧು ಹೊರಟಿತು.
ನಂಜಯ್ಯ ನಿಟ್ಟುಸಿರುಬಿಟ್ಟು ,ನೆಲವನ್ನೆ ನೋಡುತ್ತಲಿದ್ದು ,ಬಳಿಕ ತಲೆ ಎತ್ತಿ ಆರಂಭಿಸಿದ:
"ಕೊಡಗಿನ ಕರ್ಮಕಥೆ ಕೇಳಿ ನಿಮಗೆ ಸಂಕಟವಾದೀತು. ನಾವೀಗ ಗುಲಾಮರು ಗೊತ್ತೈತಾ?ಮಾರಿ ಬೀದೀಲಿ ಹೋಗ್ತಿತ್ತು.ಅದನ್ನು ನಾವು ಮನೆಗೆ ಕರೆದ್ವಿ ..."
* * * * * * * * * * * * * * * * * * * * * * * * *
ಬೀದಿಯಲ್ಲಿ ಸಾಗುತಿತ್ತು ಮಾರಿ. ಕಲ್ಲೆಸೆದು 'ಶೂ' ಎಂದಿದ್ಧರೆ, ಹಾಗೆಯೇ ಅದು ಮುಂದಕ್ಕೆ ಹೋಗುವುದು ಸಾಧ್ಯವಿತ್ತು.ಆದರೆ ಕೊಡಗಿನ ಅರಸರು ಅದನ್ನು ಮನೆಗೆ - ಅರಮನೆಗೆ - ಕರೆದರು.
ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ, ಇಬ್ಬರನ್ನೂ ಶಕ್ತಿ ಗುಂದಿಸಿ,ಮಧ್ಯೆ ತಮ್ಮ ಬಾವುಟವನ್ನು ಭದ್ರವಾಗಿ ನೆಡುತಿದ್ದ ಸಮರ್ಥರು ಇಂಗ್ಲಿಷರು.
ಕೊಡಗಿನ ಅರಸರು ವೀರರಾಜೇಂದ್ರನೊಮ್ಮೆ ತನಗೋಸ್ಕರ ಒಂದು ಕುದುರೆಯನ್ನು ಕೊಳ್ಳಲೆಂದು ದೂತನನ್ನು ತಲಚೇರಿಗೆ ಕಳುಹಿದ. ಮುತ್ತು ಭಟ್ಟ ಕುದುರೆಯನ್ನು ಕೊಳ್ಳುವ ಯತ್ನದಲ್ಲಿದ್ದಾಗ, ಅಲ್ಲಿದ್ದ ಇಂಗ್ಲಿಷರಿಗೆ ಆ ವಿಷಯ ತಿಳಿಯಿತು. ಮುತ್ತು ಭಟ್ಟನನ್ನು ತಮ್ಮ ಅಧಿಕಾರಿಯ ಕಡೆಗೆ ನವುರು ಮಾತುಗಳ ನೆರವಿನಿಂದಲೆ ಅವರು ಕರೆದೊಯ್ಧರು.
ಆ ಅಧಿಕಾರಿ ರಾಬರ್ಟ್ ಟೇಯ್ ಲರ್. ಆತನೆಂದಃ
"ನಿಮ್ಮ ರಾಜರು ಕುಶಲವೊ?"
"ದೇವರ ಕೃಪೆಯಿಂದ ಕುಶಲ."
"ಕುದುರೆ ತಾನೆ ನಿಮ್ಮ ರಾಜರಿಗೆ ಬೇಕಾದ್ದು?"
"ಹೌದು."
"ಒಳ್ಳೇ ಅರಬ್ಬೀ ಕುದುರೆ ನಾವು ಉಚಿತವಾಗಿ ಕೊಡುತ್ತೇವೆ."