ಪುಟ:Kalyaand-asvaami.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು ...ಬ್ಯಾಂಕು - ಹಣವನ್ನು ಸುರಕ್ಷಿತವಾಗಿಡಲು ಎಂತಹ ಏರ್ಪಾಟು ಮಾಡಿದ್ದರು ಆ ಜನ!
ಬೇಟೆಗೆಂದು ಬಂದ ಬ್ರಿಟಿಷ್ ಅಧಿಕಾರಿಯೊಬ್ಬ ಒಮ್ಮೆ ಕೇಳಿದ:
"ಮಹಾರಾಜರೇ ನಮ್ಮ ಕಂಪನಿಯ ಬ್ಯಾಂಕಿನಲ್ಲಿ ನೀವು ಯಾಕೆ ಹಣವಿಡಬಾರದು?"
ವೀರರಾಜೇಂದ್ರ ಉತ್ತರವಿತ್ತ:
"ಆಗಲಿ ಯೋಚಿಸಿ ನೋಡ್ತೀವಿ."
"ಯೋಚಿಸುವುದೇನಿದೆ?ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.ಅಲ್ಲದೆ ನಾವು ಬಡ್ಡಿಯನ್ನು ಕೊಡುತ್ತೇವೆ."
"ಆಗಲಿ ಆಗಲಿ ಬೇಗ ನಿಮ್ಮ ಬ್ಯಾಂಕಿನಲ್ಲಿ ಹಣವಿಡ್ತೀವಿ."
ಅದಕ್ಕೊಂದು ಸಂದರ್ಭವೂ ಒದಗಿ ಬಂತು ಗಂಡು ಸಂತಾನವಿಲ್ಲದೆ ಸಾಯಬೇಕಾಗಿದ್ದ ಅರಸನನ್ನುಚಿಂತೆ ಅಡರಿತು.
ಮೈಸೂರಿನ ರೆಸಿಡೆಂಟನಾದ ಕೋಲ್ ಒಮ್ಮೆ ಮಡಿಕೇರಿಗೆ ಆಗಮಿಸಿದಾಗ,ವೀರರಾಜೇಂದ್ರ ಆತನಿಗೆ ವೈಭವದ ಸತ್ಕಾರ ನೀಡಿದ.ಅರಮನೆಗೆ ಆತನನ್ನು ಕರೆದೊಯ್ದು ತನ್ನ ನಾಲ್ವರು ಹೆಣ್ಣುಮಕ್ಕಳ ಪರಿಚಯ ಮಾಡಿಸಿಕೊಟ್ಟ.
"ಈಕೆ ದೇವಮ್ಮಾಜಿ,ನನ್ನ ಹಿರಿಯ ಮಗಳು.
" "ಹೌ ಡು ಯು ಡು?"
ತಂದೆ ಮಗಳಿಗೆ ನೆನಪು ಹುಟ್ಟಸಿದ:
"ಮರೆತ್ಹೋಯ್ತಾ ಆಗ್ಲೇ ಹೇಳಿದ್ದು? ಬಗ್ಗಿ ನಮಸ್ಕಾರ ಮಾಡು."
ಕೋಮಲ ಬಳ್ಳಿಯೊಂದು ನೇರವಾಗಿ ನಿಂತಿದ್ದ ಮರದೆದುರು ತುಸು ಬಾಗಿತು.
ಕೋಲ್ ಹೇಳಿದ:
"ಸಂತೋಷ,ಸಂತೋಷ."
"ಈಕೆ ಎರಡನೆಯವಳು..."
"ಅಕ್ಕನ ಹಾಗೆ ಇವಳೂ ಸುಂದರಿ. ನಿಮ್ಮ ಮಕ್ಕಳೆಲ್ಲಾ ಸುಂದರಿಯರು..."