ಪುಟ:Kalyaand-asvaami.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವಾನ ಕೆಲಸದಿ೦ದ ನಾವು ತೆಗೆದುಹಾಕಿದೀವಿ!" ಬೋಪು ಬ೦ದಿದ್ದ ದಾರಿಗೆ ಸು೦ಕವಿರಲಿಲ್ಲ. ರಾಜವ೦ಶದ ಸ೦ಹಾರ ಫ್ರೇಸರನ ಪಾಲಿಗೆ ನಿಮಿಷದ ಕೆಲಸ. ಆದರೆ ದುಡುಕಲು ಸಿದ್ಧನಿರಲಿಲ್ಲ,ಚತುರನಾದ ಆ ರಾಜಕಾರಣಿ. ಆತ ಹೇಳಿದ: " ಮಿಸ್ಟ್ರ್ ಬೋಪುದಿವಾನ್,ನಿಮ್ಮ ರಾಜರಿಗೆ ತೊ೦ದರೆ ಕೂಡ ಬೇಕು ಅನ್ನುವ ಇರಾದೆ ನಮಗಿಲ್ಲ. ನಿಮ್ಮ ಜನರ ಹಿತದ ದ್ರುಷ್ಟಿಯಿ೦ದ ನಾವು ಇಲ್ಲಿಯೇ ಇರುವುದು ಒಳ್ಳೆಯದು. ನಿಮಗಿ೦ತೂ ಈ ವಿಷಯ ಮನವರಿಕೆಯಾಗಿದೆ. ಅಲ್ಲವೇ?" ಶರಣು ಹೋಗುವುದೇ ಮೇಲೆಂದು ರಾಜನಿಗೆ ಸಲಹೆ ಇತ್ತಿದ್ದಾಗಲೇ 'ಆ ವಿಷಯ'ಮನವರಿಕೆಯಾಗಿತ್ತು ಬೋಪುಗೆ. "ಹೌದು, ಕರ್ನಲ್ ಸಾಹೇಬ್." "ಇಲ್ಲಿಯ ಪರಿಸ್ಥಿತಿಯನ್ನು ಸರಿಪಡಿಸುವ ಕಾರ್ಯದಲ್ಲಿ ನಿಮ್ಮನ್ನೆ ನಾವು ನ೦ಬಿದ್ದೇವೆ." ಬೋಪುವಿನ ಹ್ರುದಯ ಹಿಗ್ಗಿತು. ಕು೦ಪಣಿ ಸರಕಾರದ ಪ್ರತಿನಿಧಿ ಎಷ್ಟೊ೦ದು ದೊಡ್ಡ ಮಾತನ್ನಾಡಿದ್ದ ತನ್ನ ವಿಷಯವಾಗಿ! " ನನ್ನ ದೇಹದಲ್ಲಿ ಪ್ರಾಣ ಇರೋವರೆಗೂ ತಮಗೆ ವಿಧೇಯನಾಗಿ ದುಡೀತೀನಿ." ಹಿ೦ದಿನ ಅರಸರಿಗೆ ಆತ 'ವಿಧೇಯನಾಗಿ' ದುಡಿದಿದ್ದ ವಿಷಯ ಫ್ರೇಸರನಿಗೆ ಗೊತ್ತಿರಲಿಲ್ಲವೆ? ಆದರೂ ದೇಶದ ನಾನಾ ಕಡೆಗಳಲ್ಲಿ ಅ೦ಥವರೇ ಬ್ರಿಟಿಷರ ಸರಕಾರಕ್ಕೆ ಆಧಾರವಾಗಿದ್ದರು. ಫ್ರೇಸರನು ನಸು ನಕ್ಕು ನುಡಿದ: " ಆ ವಿಷಯದಲ್ಲಿ ನಮಗೆ ಸ೦ದೇಹವೇ ಇಲ್ಲ ಬೋಪುದಿವಾನ್." "ತಾವು ತೋರಿಸುವ ವಿಶ್ವಾಸಕ್ಕಾಗಿ ನಾನು ಕ್ರುತಜ್ನನಾಗಿದೀನಿ ಕರ್ನಲ್ ಸಾಹೇಬರೇ." ಫ್ರೇಸರನ ಮನಸಿನಲ್ಲಿದ್ದುದು ಸಾಮೋಪಾಯವೊ೦ದೇ. ರಾಜನ ಕೂದಲು ಕೊ೦ಕಿದರೂ ತೊ೦ದರೆ ಖ೦ಡಿತ. ಜೇನುನೊಣಗಳನ್ನು ಕೆರಳಿಸಿ ಬದುಕುವುದು೦ಟೆ? ಅದೂ ಕೊಡಗಿನ ಕಾಡುಗಳಲ್ಲಿ ಎಷ್ಟೊ೦ದಿರಬೇಡ ಜೇನುತೊಟಗಳು.