ಪುಟ:Kanakadasa darshana Vol 1 Prelim Pages.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಶ್ರೀ ಬಸವರಾಜು ಅವರಿಗೂ, ಈ ಸಂಪುಟಗಳನ್ನು ಹೊರತರಲು ಸಹಕರಿಸಿದ ಶ್ರೀ ಕಾ.ತ. ಚಿಕ್ಕಣ್ಣ, ಜಂಟಿ ನಿರ್ದೆಶಕರು (ಆಡಳಿತ), ಶ್ರೀ ಬಲವಂತರಾವ್ ಪಾಟೀಲ್, ಜಂಟಿ ನಿರ್ದೇಶಕರು (ಸು.ಕ.), ಶ್ರೀಮತಿ ವೈ.ಎಸ್, ವಿಜಯಲಕ್ಷ್ಮಿ, ಕಾರ್ಯಕ್ರಮ ಅಧಿಕಾರಿ ಮತ್ತು ಪ್ರಕಟಣಾ ಶಾಖೆಯ ಸಿಬ್ಬಂದಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮಯೂರ ಪ್ರಿಂಟ್ ಆ್ಯಡ್‌ನ ಮಾಲೀಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು. ಕನ್ನಡ ಹರಿದಾಸ ಪರಂಪರೆಯಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವುಳ್ಳ ಕನಕದಾಸರ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. ಈ ಸಂಪುಟಗಳ ಪ್ರಯೋಜನವನ್ನು ಓದುಗರು ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ. ೧೮.೦೧.೨೦೧೨ ಡಾ. ಮನು ಬಳಿಗಾರ್ ಆಯುಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಂದರದಾಸರ ಪಂಚ ಶತಮಾನೋತ್ಸವ ಜರುಗಿದ ಐದಾರು ವರ್ಷಗಳ ಅಂತರದಲ್ಲಿಯೇ ಯುಗಪುರುಷ ಕನಕದಾಸರ ಐನೂರನೆಯ ವರ್ಷದ ಉತ್ಸವವನ್ನಾಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಸರ್ಕಾರದ ಧೋರಣೆ ಸ್ವಾಗತಾರ್ಹವಾದದ್ದು. ಕನಕದಾಸರನ್ನೂ, ಅವರ ಸಾಹಿತ್ಯವನ್ನೂ ಕುರಿತ ಪ್ರಶಸ್ತಿ ಗ್ರಂಥವನ್ನು ಪ್ರಕಟಿಸುವ ಯೋಜನೆ ಆ ಕಾರ್ಯಕ್ರಮದ ಒಂದು ಭಾಗವಾಗಿದೆ. ಮೂರುವರ್ಷಗಳ ಅವಧಿಯೊಳಗೆ ಸಾಹಿತ್ಯಕೃತಿಗಳನ್ನು ಹಾಗೂ ಪ್ರಶಸ್ತಿಗ್ರಂಥವನ್ನು ಸಂಪಾದಿಸಿ ಹೊರತರುವ ಹೊಣೆಯನ್ನು ಸರ್ಕಾರ ೨೮-೪-೧೯೮೯ನೆಯ ದಿನಾಂಕದ ತನ್ನ ನಿರೂಪದ ಮೂಲಕ ಕೆಳಗಿನ ಸಂಪಾದಕ ಮಂಡಲಿಗೆ ವಹಿಸಿತು. ೧.ಡಾ. ದೇ. ಜವರೇಗೌಡ, ಅಧ್ಯಕ್ಷರು ೨.ಡಾ. ಹೆಚ್. ಜೆ. ಲಕ್ಕಪ್ಪಗೌಡ, ಸದಸ್ಯರು ೩. ಶ್ರೀ ಬರಗೂರು ರಾಮಚಂದ್ರಪ್ಪ, ಸದಸ್ಯರು ೪. ಡಾ. ಸಾ. ಶಿ. ಮರುಳಯ್ಯ, ಸದಸ್ಯರು ೫.ನಿರ್ದೆಶಕರು, ಕನ್ನಡ ಮತ್ತು ಸಂಸ್ಕತಿ ನಿರ್ದೆಶನಾಲಯ ಸದಸ್ಯ-ಕಾರ್ಯದರ್ಶಿ. ೬-೬-೧೯೮೯ರಂದು ಮಂಡಲಿಯ ಪ್ರಥಮ ಸಭೆಯು, ಸಂಪಾದನಾ ವಿಧಾನವನ್ನು ನಿರ್ಧರಿಸಿತು. ಆ ಪ್ರಕಾರ ನಿಶ್ಚಿತ ವೇಳೆಯೊಳಗೆ 'ಕನಕ ಸಾಹಿತ್ಯ ದರ್ಶನ' ಗ್ರಂಥ ಹೊರಬರುತ್ತಿರುವುದು ಸಂತೋಷದ ಸಂಗತಿ. ಯಾರೇ ಸಂಪಾದಕರಿರಲಿ, ಅವನು ಎದುರಿಸಬೇಕಾದ ಕೆಲವು ಸಮಸ್ಯೆಗಳನ್ನು ಮುಂದಿನವರ ಅವಗಾಹನೆಗಾಗಿ ಇಲ್ಲಿ ನಿರೂಪಿಸಿದರೆ ಅಪ್ರಸ್ತುತವಾಗಲಾರದೆಂದು ಭಾವಿಸಿದ್ದೇನೆ. ವಿಷಯ ಹಾಗೂ ಲೇಖಕರ ಆಯ್ಕೆ ಮತ್ತು ಹೊಂದಾಣಿಕೆ ಮೊದಲ ಸಮಸ್ಯೆ. ಈ ಅಂಶದಲ್ಲಿ ಮಂಡಲಿಯ ಒಮ್ಮತ ಅಗತ್ಯವಾದ್ದರಿಂದ, ಪ್ರಸಕ್ತ ವಿಷಯದಲ್ಲಿ ಆಸಕ್ತಿ ಇಲ್ಲದ ಕೆಲವು ಹೆಸರುಗಳು ಪಟ್ಟಿಯಲ್ಲಿ ನುಸುಳಿಕೊಳ್ಳುವುದು ಸಹಜ. ಪ್ರತ್ಯುತ್ತರಕ್ಕೆಂದು ಸ್ಟಾಂಪು ಹಚ್ಚಿದ ಲಕೋಟೆ ಕಳಿಸಿದರೂ, ಅದರ ವಾಪಸಾತಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ ; ಕೆಲವರಂತು ಉತ್ತರಿಸುವುದೇ ಇಲ್ಲ. ಲೇಖನ ಬರೆಯಲೊಪ್ಪಿಕೊಂಡವರು 'ಅನಾನುಕೂಲ'ಗಳ ದೆಸೆಯಿಂದಾಗಿ ಹೆಚ್ಚು ಹೆಚ್ಚು ಸಮಯ ಕೇಳುತ್ತಾರೆ. ಮರಾಲ್ಕು ತಿಂಗಳಾದ ನಂತರ ತಮಗೆ ಪುರಸೊತ್ತಾಗಲಿಲ್ಲವೆಂದು ಕೆಲವರು ಬರೆದು ಕೈತೊಳೆದುಕೊಳ್ಳುತ್ತಾರೆ. ಅವರನ್ನು ಕೈಬಿಟ್ಟು, ಬೇರೆಯವರಿಗೆ ಪತ್ರ ಬರೆದಾಗಲೂ ಇದೇ ಕ್ರಮ ಪುನರಾವೃತ್ತವಾಗುತ್ತದೆ.