ಪುಟ:Kannadigara Karma Kathe.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಕನ್ನಡಿಗರ ಕರ್ಮಕಥೆ

ತೀರಿಸಿಕೊಳ್ಳಬೇಕೆಂದು ಮಾಡಿದನು. ಇಬ್ರಾಹಿಂ ಆದಿಲಶಹನಾದರೂ ರಾಮರಾಜನ ಯೋಗ್ಯತೆಯನ್ನು ನೋಡಿ ಅಂಜಿ ನಡೆಯುತ್ತಿದ್ದನು. ಆತನು ರಾಮರಾಜನಿಗೆ “ನೀವು ನಿಮ್ಮ ರಾಜ್ಯಕಾರಭಾರವನ್ನು ಬೇಕಾದ ಹಾಗೆ ನಡಿಸಿರಿ, ಮಾತ್ರ ನಮ್ಮ ವಕೀಲನ ಮಾನಮರ್ಯಾದೆಗಳನ್ನು ಯೋಗ್ಯರೀತಿಯಿಂದ ನಡೆಸಿ, ಒಡಂಬಡಿಕೆಯ ಕರಾರುಗಳನ್ನು ಸರಿಯಾಗಿ ಪಾಲಿಸಿದರಾಯಿತು; ನಮಗೆ ತಿರುಮಲರಾಯನು ಕಾರಭಾರ ಮಾಡಿದರೂ ಅಷ್ಟೇ, ರಾಮರಾಜನು ಕಾರಭಾರ ಮಾಡಿದರೂ ಅಷ್ಟೇ, ಎಂದು ಹೇಳಿ ಕಳಿಸಿಕೊಡಹತ್ತಿದನು. ರಾಮರಾಜನಿಗೆ ಇಬ್ರಾಹಿಂಶಹನ ಭಯವಿದ್ದಿಲ್ಲ. ಈಗ ಆತನು ತನ್ನನ್ನು ತಡವಲಾರನೆಂಬುದು ರಾಮರಾಜನಿಗೆ ಸಂಪೂರ್ಣವಾಗಿ ಗೊತ್ತಾಗಿತ್ತು,

ದರ್ಬಾರದ ದಿವಸವು ಗೊತ್ತಾಯಿತು. ನಾಲ್ಕೂ ಕಡೆಗೆ ಪತ್ರಗಳು ಹೋದವು. ವಿಜಾಪುರ, ಗೋವಳಕೊಂಡ, ಅಮ್ಮದನಗರ, ಬೀದರ ಈ ನಾಲ್ವರು ಮುಸಲ್ಮಾನ ಬಾದಶಹರಿಗೂ, ಗೋವೆಯ ರಾಜ್ಯದ ಪೋರ್ಚುಗೀಸರಿಗೂ ನಿಮಂತ್ರಣ ಪತ್ರಿಕೆಗಳನ್ನು ಕಳಿಸಿದನು. ಸ್ವತಃ ತನ್ನ ರಾಜ್ಯದೊಳಗಿನ ಯಾವತ್ತು ಕಿಲ್ಲೆದಾರರಿಗೂ, ಠಾಣೇದಾರರಿಗೂ ಸುಭೇದಾರರಿಗೂ, ಮಾಂಡಲಿಕ ರಾಜರಿಗೂ ಸೈನ್ಯಸಹಿತವಾಗಿ ಬರಲಿಕ್ಕೆ ರಾಮರಾಜನು ಆಜ್ಞಾಪತ್ರಗಳನ್ನು ಕಳಿಸಿದನು. ತನ್ನವರಲ್ಲಿ ತನಗೆ ಅನುಕೂಲರಾದ ಜನರನ್ನೂ, ತನಗೆ ಪ್ರತಿಕೂಲರಾದ ಜನರನ್ನೂ ಕೂಡಿಯೇ ಕರಿಸಿ, ಅವರನ್ನು ಕುರಿತು- “ಈಗಿನ ಪ್ರಸಂಗವು ಕಠಿಣವಾದದ್ದು. ನಮ್ಮ ರಾಜ್ಯವನ್ನು ನುಂಗಲಿಕ್ಕೆ ನಾಲ್ವರು ಮುಸಲ್ಮಾನ ಬಾದಶಹರು ಹೊಂಚು ಹಾಕಿ ಕುಳಿತಿರುವರೆಂಬುದು ನಿಮಗೆ ಗೊತ್ತೇ ಇದೆ. ಇಂಥ ಪ್ರಸಂಗದಲ್ಲಿ ನಮ್ಮಲ್ಲಿ ಒಡಕು ಇರಲಾಗದು. ನಮ್ಮ ರಾಜ್ಯದ ಐರ್ಶವರ್ಯವನ್ನೂ, ಬಲವನ್ನೂ ಹೊರಗೆಡವಿ, ಅದರಿಂದ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಬೇಕು. ಅಂದರೆ ಎಲ್ಲರು ತೆಪ್ಪಗಾಗಿ, ನಮ್ಮ ಉಸಾಬರಿಗೆ ಬರಲಿಕ್ಕಿಲ್ಲ. ಆಮೇಲೆ ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗುವದು.” ಎಂದು ಹೇಳಲು, ಅವರೆಲ್ಲರು ಒಡಂಬಟ್ಟು ರಾಮರಾಜನ ಸೂಚನೆಯಂತೆ ದರ್ಬಾರದ ವ್ಯವಸ್ಥೆಗೆ ಅನುಕೂಲವಾದರು. ರಾಮರಾಜನ ವಿಷಯವಾಗಿ ಅವರಲ್ಲಿ ಪ್ರೇಮಾದರಗಳು ಉತ್ಪನ್ನವಾದವು. ವಿದ್ಯಾನಗರದ ಅಥವಾ ವಿಜಯನಗರದ ಐಶ್ವರ್ಯವು ಅಪಾರವಾಗಿತ್ತು. ರಾಜದರ್ಬಾರವೆಂದರೆ, ರಾಜ್ಯದ ಸಂಪತ್ತಿನ, ಹಾಗು ಸಾಮರ್ಥ್ಯದ ಒಂದು ಬಗೆಯ ಪ್ರದರ್ಶನವೇ ಆಗಿರುತ್ತಿತ್ತು. ಈ ಪ್ರಸಂಗದಲ್ಲಿಯಂತು ರಾಮರಾಜನು ಆ ಪ್ರರ್ದಶನವನ್ನು ಅತ್ಯುತ್ತಮ ರೀತಿಯಿಂದ ಮಾಡಿದನೆಂದು