ಪುಟ:Kannadigara Karma Kathe.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಉತ್ಕರ್ಷ

೯೩

ಹೇಳಬಹುದು. ಅರಮನೆಯಿಂದ ಅರಸರ ಮೆರವಣಿಗೆಯು ಹೊರಟು, ರಾಜದರ್ಬಾರಕ್ಕೆ ಬರಬೇಕೆಂದು ಗೊತ್ತಾಗಿತ್ತು. ಅದರಂತೆ ಅರಸನ ಮೆರವಣಿಗೆಯು ಅರಮನೆಯಿಂದ ಹೊರಟಿತು. ಅರಸರ ಮೆರವಣಿಗೆಯು ರಾಜಮಾರ್ಗವನ್ನು ಹಿಡಿದು ಸಾಗಿದಾಗ, ಕಣ್ಣಿಗೆ ಬೀಳುವ ವೈಭವದ ವರ್ಣನೆಗಳನ್ನು ಪ್ರಾಚೀನ ಕಾವ್ಯಗಳಲ್ಲಿ ವರ್ಣಿಸಿರುವಷ್ಟೆ ? ಆದರೆ ಆ ವರ್ಣನೆಗಳನ್ನು ಹಿಂದಕ್ಕೆ ಸರಿಸುವಂಥ ವೈಭವವು ಈಗಿನ ಮೆರವಣಿಗೆಯಲ್ಲಿ ಕಣ್ಣಿಗೆ ಬೀಳುವಂತೆ ರಾಮರಾಜನು ವ್ಯವಸ್ಥೆ ಮಾಡಿದ್ದನು. ಯಾವತ್ತು ಮುಸಲ್ಮಾನ ಬಾದಶಹರಿಂದ ಕಳಿಸಲ್ಪಟ್ಟಿದ್ದ ವಕೀಲರು, ವಿಜಯನಗರದ ಐಶ್ವರ್ಯ-ಸಾಮರ್ಥ್ಯಗಳನ್ನು ನೋಡಿ, ಬೆರಗಾದರು. ಪಟ್ಟಣದ ಯಾವತ್ತು ರಾಜಮಾರ್ಗಗಳಿಂದ ಮೆರವಣಿಗೆಯು ಸಾಗಿಹೋಯಿತು. ಮೆರವಣಿಗೆಯ ಮುಂಭಾಗದಲ್ಲಿ ಒಂದು ದೊಡ್ಡ ಆನೆಯ ಮೇಲೆ ಒಬ್ಬ ಮನುಷ್ಯನು ವಿಜಯನಗರದ ಧ್ವಜವನ್ನು ಹಿಡಕೊಂಡು ಕುಳಿತುಕೊಂಡಿದ್ದನು. ಆ ಧ್ವಜಪಟದ ಒಂದು ಮಗ್ಗಲಿಗೆ ಶ್ರೀ ವಿಠ್ಠಲ ಸ್ವಾಮಿಯ ಚಿತ್ರವೂ, ಮತ್ತೊಂದು ಮಗ್ಗಲಿಗೆ ನೃಸಿಂಹನ ಚಿತ್ರವೂ ಕಣ್ಣಿಗೆ ಬೀಳುತ್ತಿದ್ದವು. ಇಂಥ ಧ್ವಜಸ್ತಂಭವನ್ನು ಆನೆಯ ಮೇಲೆ ಅತ್ತಿತ್ತ ಉಲಕಾಡದಂತೆ ನಿಲ್ಲಿಸಿದ್ದರು. ಧ್ವಜವು ಮಾತ್ರ ಗಾಳಿಯಿಂದ ಪಟಪಟ ಸಪ್ಪಳ ಮಾಡುತ್ತ ಆಕಾಶದಲ್ಲಿ ಗಾಂಭೀರ್ಯದಿಂದ ಹೊಯ್ದಾಡುತ್ತಿತ್ತು. ಈ ಆನೆಯ ಹಿಂದೆ ನೂರಾರು ಆನೆಗಳು ಸಾಲುಗೊಂಡು ಸಾಗಿದ್ದವು. ಆಗ ವಿಜಯನಗರದ ಐಶ್ವರ್ಯದ ಸಾಕ್ಷಿಯಾಗಿ ಆ ರಾಜ್ಯದಲ್ಲಿ ಎರಡು ಸಾವಿರದವರೆಗೆ ಆನೆಗಳು ಇದ್ದವು. ಅವುಗಳಲ್ಲಿ ಆರಿಸಿ ತಂದಿದ್ದ ಈ ನೂರಾರು ಆನೆಗಳ ಹಿಂಡು ನೋಡುವವರ ಮನೋರಂಜನವನ್ನಲ್ಲದೆ, ನೋಡುವವರಲ್ಲಿ ಒಂದು ಪ್ರಕಾರದ ಭಯವನ್ನೂ ಉಂಟು ಮಾಡುತ್ತಿತ್ತು. ಆ ಮೆರವಣಿಗೆಯಲ್ಲಿ (ಗಜ) ಬೃಂಹಿತದೊಡನೆ ಕನ್ನಡಿಗರ ಹೃದಯವು ಅಭಿಮಾನಾನಂದದಿಂದ ಕಂಪಿಸಿದರೆ, ವೈರಿಗಳ ಹೃದಯವು ಮಾತ್ಸರ್ಯಯುಕ್ತ ಭಯದಿಂದ ಕಂಪಿಸುತ್ತಿರಬಹುದು ! ಆ ಆನೆಗಳ ಹಿಂದೆ ಕುದುರೆಗಳ ಸಾಲುಗಳೂ, ಅವುಗಳ ಹಿಂದಿನಿಂದ ಕಾಲಾಳುಗಳ ತಂಡಗಳೂ ಸಡಗರದಿಂದ ಸಾಗಿದ್ದವು. ಕಾಲಾಳುಗಳ ಸಂಖ್ಯೆಗೆ ಲೆಕ್ಕವಿದ್ದಿಲ್ಲ ನಟ್ಟನಡುವೆ ಭವ್ಯವಾದ ಆನೆಯ ಮೇಲೆ ಬೆಳ್ಳಿಯ ಅಂಬಾರಿಯಲ್ಲಿ ರಾಮರಾಜನ ಹಾಗು ಆತನ ಬಂಧುವಾದ ತಿರುಮಲರಾಯನ, ಅದರಂತೆ ಆತನ ಮಿತ್ರನಾದ ಶಾರ್ಜ್ಞಧರನ ಸವಾರಿಗಳು ವಿರಾಜಮಾನವಾಗಿದ್ದವು. ನಾನಾಪ್ರಕಾರದ ರಣವಾದ್ಯಗಳಾದ ಭೇರಿಗಳೂ ನಗಾರೆ-ನೌಬತ್ತುಗಳೂ, ಕಹಳೆ ತುತ್ತೂರಿಗಳೂ ಅಟ್ಟಹಾಸದಿಂದ ಧ್ವನಿಮಾಡುತ್ತಿದ್ದವು. ಅರಸನ ಸವಾರಿಯು ದರ್ಬಾರದ ಬಾಗಿಲಿಗೆ