ಪುಟ:Kannadigara Karma Kathe.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ಕನ್ನಡಿಗರ ಕರ್ಮಕಥೆ

ಇಲ್ಲಿಯವರೆಗೆ ರಾಮರಾಜನು ಮುಂಗಡ ಸೂಚನೆಯನ್ನು ಕಳಿಸದೆ ಎಂದೂ ಬಂದಿದ್ದಿಲ್ಲ. ನಿಜವಾಗಿ ನೋಡಿದರೆ, ಆಗಿನ ಕಾಲದಲ್ಲಿ ಶತ್ರುಗಳ ಬಿಡಾರವನ್ನು ರಾಮರಾಜನಂಥವರು, ಸಂಗಡ ಒಬ್ಬ ಸೇವಕನನ್ನು ಕರಕೊಂಡು ಹೋಗುವದು ಪರಮಸಾಹಸದ ಕಾರ್ಯವೆಂದು ಹೇಳಬಹುದಾಗಿತ್ತು. ಮುಸಲ್ಮಾನ ವಕೀಲನ ಭಾವಣಿಯಲ್ಲಿಯೇ ಆಗಲೊಲ್ಲದೇಕೆ, ತನ್ನ ಜೀವನವನ್ನು ತನ್ನ ಶತ್ರುವಿನ ಕೈಯಲ್ಲಿ ಒಪ್ಪಿಸುವದು ಚಮತ್ಕಾರದ ಸಂಗತಿಯೇ ಸರಿ; ಅದರಲ್ಲಿ ನಿನ್ನಿನ ದರ್ಬಾರದಲ್ಲಿ ವಿಲಕ್ಷಣ ಪ್ರಸಂಗ ಒದಗಿತ್ತು. ಆದರೆ, ರಾಮರಾಜನ ಮನಸ್ಸಿನಲ್ಲಿ ಯಾವ ವಿಚಾರವು ಉತ್ಪನ್ನವಾಯಿತೋ, ಆತನು ಇಂಥ ಸಾಹಸವನ್ನು ಯಾಕೆ ಮಾಡಿದನೋ ದೇವರಿಗೇ ಗೊತ್ತು, ಬಂದವನು ರಾಮರಾಜನೇ ಎಂಬ ನಂಬಿಗೆಯು ಸೇವಕನಿಗಿದ್ದದ್ದರಿಂದ ಆತನು ನೆಟ್ಟಗೆ ಹೋಗಿ ರಣಮಸ್ತಖಾನನಿಗೆ ಸುದ್ದಿಯನ್ನು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನಿಗೂ ಪರಮಾಶ್ಚರ್ಯವಾಯಿತು. ಆತನು ಸ್ವಲ್ಪ ಹೊತ್ತಿನ ಮೇಲೆ ತನ್ನ ಮನಸ್ಸಿನಲ್ಲಿ-ತಂದು, ತನ್ನಿಂದಾದ ಉದ್ದಟತನಕ್ಕೆ ಭಯಪಟ್ಟು ನನಗೆ ಹೇಳಿಕೊಳ್ಳಲಿಕ್ಕೆ ಬಂದಿರಬಹುದೆಂದು ಕಾಣುತ್ತದೆ. ಆ ಮಾತಿನ ಸಲುವಾಗಿ ಪಶ್ಚಾತ್ತಾಪವಾಗಿರಲು, ಆ ಪಶ್ಚಾತ್ತಾಪದ ಭರದಲ್ಲಿ ಸವಾರಿಯು ಹೊರಟುಬಂದಿರಬಹುದು, ಎಂದು ಕಲ್ಪಿಸಿ, ಆತನು ಮನಸ್ಸಿನಲ್ಲಿ ಉಬ್ಬಿದನು. ಹ್ಯಾಗೇ ಇರಲಿ, ಈಗ ತಾನು ಆತನನ್ನು ಕಾಣಲಿಕ್ಕೆ ಬೇಕೆಂದು ತಿಳಿದು, ರಣಮಸ್ತಖಾನನ ಸೇವಕನಿಗೆ- “ಹೋಗು ನಾನು ಎದುರಿಗೆ ಬರುವೆನು ನೀನು ಅವರನ್ನು ಒಳಗೆ ಬರಗೊಡು,” ಎಂದು ಹೇಳಿ, ತಾನು ಪೋಷಾಕು ಹಾಕಿಕೊಂಡು ಹೊರಡಲನುವಾದನು. ಇತ್ತ ರಾಮರಾಜನು ಸೇವಕನ ವಿಜ್ಞಾಪನೆಯಂತೆ ಕುಂಜವನವನ್ನು ಪ್ರವೇಶಿಸಿದನು. ಆತನು ಕೆಲವು ಹಂತವನ್ನು ಕ್ರಮಿಸಿ ಹೋಗುತ್ತಿರಲು, ಅಲ್ಲಿ ಆತನ ಧನಮಲ್ಲನು ರಣಮಸ್ತಖಾನನ ಸೇವಕರಿಂದ ಸುತ್ತುಗಟ್ಟಲ್ಪಟ್ಟವನಾಗಿ ಅಕಸ್ಮಾತ್ ಅವನ ಕಣ್ಣಿಗೆ ಬಿದ್ದನು. ಈಗ ೩೦ ವರ್ಷಗಳ ಮೇಲೆ ಹೀಗೆ ಅಕಸ್ಮಾತ್ ಧನಮಲ್ಲನು ಕಣ್ಣಿಗೆ ಬಿದ್ದದ್ದನ್ನು ನೋಡಿ ರಾಮರಾಜನು ಆಶ್ಚರ್ಯಪಟ್ಟನು. ಆತನು ತನ್ನ ಕುದುರೆಯ ಕಡಿವಾಣವನ್ನು ಬಿಗಿಹಿಡಿದು ನಿಲ್ಲಿಸಲು, ಆ ಸ್ವಾಮಿ ಸೇವಕರು ಪರಸ್ಪರ ಒಬ್ಬರನ್ನೊಬ್ಬರು ನೋಡಿದರು. ಧನಮಲ್ಲನು ಆಶ್ಚರ್ಯಚಕಿತನಾಗಿ ಎದ್ದು ನಿಂತನು. ರಣಮಸ್ತಖಾನನ ಸೇವಕರು ಇವರೆಲ್ಲರನ್ನು ನೋಡುತ್ತ ಸುಮ್ಮನೆ ನಿಂತುಕೊಂಡರು. ಐದು ಪಳವಾಯಿತು, ಹತ್ತು ಪಳವಾಯಿತು, ಗಳಿಗೆಯಾಯಿತು; ಆದರೂ ಅವರಿಬ್ಬರು ಸುಮ್ಮನೆ ಒಬ್ಬರನ್ನೊಬ್ಬರು ನೋಡುತ್ತ ನಿಂತುಕೊಂಡರು. ರಣಮಸ್ತಖಾನನ ಸೇವಕರು,