ಪುಟ:Kannadigara Karma Kathe.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೩

೧೫ ನೆಯ ಪ್ರಕರಣ

ಪ್ರತಿಜ್ಞೆ

ಈ ತರುಣ ಸ್ತ್ರೀಯು ಹೀಗೆ ಗಾಬರಿಯಾಗಿ ನಿಂತಳಷ್ಟೇ ಅಲ್ಲ, ಆಕೆಯು ಥರಥರ ನಡುಗಹತ್ತಿದಳು. ಅದನ್ನು ನೋಡಿದ ಕೂಡಲೆ ರಣಮಸ್ತಖಾನನು ಆಶ್ಚರ್ಯಮಗ್ನನಾದನು. ತರುಣಿಯು ಆನಂದ ವೃತ್ತಿಯವಳಿದ್ದು, ಆಕೆಯು ಕುಂಜವನದಲ್ಲಿ ಈಗ ಉಲ್ಲಾಸದಿಂದ ಗಾಯನ ಮಾಡುತ್ತ, ರಮಿಸಹತ್ತಿರ ಬಹುದೆಂದು ಆತನು ಆ ವೃದ್ಧದಾಸಿಯ ಮಾತಿನ ಮೇಲಿಂದ ತಿಳಿದಿದ್ದನು; ಆದರೆ ಅದರ ವಿರುದ್ಧ ಸ್ಥಿತಿಯು ರಣಮಸ್ತಖಾನನ ಕಣ್ಣಿಗೆ ಬಿದ್ದಿತು. ಆತನು ಆಕೆಯ ಮುಂದೆ ನಿಂತುಕೊಂಡಿದ್ದನು, ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು; ಅವಳು ನೆಲವನ್ನು ನೋಡುತ್ತಿದ್ದಳು ಆತನು ಆಕೆಯ ಬಾಡಿದ ಮೋರೆಯನ್ನು ನೋಡುತ್ತಿದ್ದನು. ತನ್ನ ಕಣ್ಣೊಳಗಿಂದ ಹೊರಸೂಸುವ ನೀರುಗಳು ಆತನ ಕಣ್ಣಿಗೆ ಬೀಳಬಾರದೆಂದು ಆಕೆಯು ಯತ್ನಿಸುತ್ತಿದ್ದಳು. ಆತನಾದರೂ ತನ್ನ ಕಣ್ಣೊಳಗಿಂದ ನೀರುಗಳು ಬರಬಾರದೆಂದು ಪ್ರಯತ್ನ ಮಾಡುತ್ತಿದ್ದನು. ಆಕೆಯ ದೇಹವು ಥರಥರ ನಡುಗುತ್ತಿತ್ತು, ಆತನ ಹೃದಯವು ಕಂಪಿಸತೊಡಗಿತ್ತು. ಮಾತಾಡುವ ಇಚ್ಛೆಯ ಅವಳಿಗಿತ್ತೋ ಇಲ್ಲವೋ ದೇವರಿಗೆ ಗೊತ್ತು. ಈತನು ಮಾತ್ರ ಯಾವಾಗ ಮಾತಾಡೇನೆಂದು ಆತುರಪಡುತ್ತಲಿದ್ದನು. ನೂರಜಹಾನಳು ಬಹಳ ಸುಂದರಿಯಿದ್ದಳು. ರಾಮರಾಜನ ದರ್ಬಾರದಲ್ಲಿ ಆಕೆಯು ಸಂತಪ್ತ ಮುದ್ರೆಯಿಂದಾಗ್ಯೂ ಆಕೆಯ ಸೌಂದರ್ಯದಲ್ಲಿ ಕೊರತೆಯುಂಟಾಗಿದ್ದಿಲ್ಲ. ಈಗ ಮನಸ್ಸಿನ ವ್ಯಾಕುಲತೆಯಿಂದ ಅತ್ಯಂತ ಮ್ಲಾನವದನಳಾಗಿದ್ದರೂ, ಆಕೆಯು ಸೌಂದರ್ಯದಲ್ಲಿ ಈಗಲೂ ಕೊರತೆಯುಂಟಾಗಿದ್ದಿಲ್ಲ. ಸ್ವಾಭಾವಿಕವಾಗಿಯೇ ಸುಂದರವಾಗಿದ್ದ ಅಪ್ಪರೆಯು, ಕ್ರೋಧದಿಂದ ಸಂತಪ್ತಳಾಗಿರಲಿ, ದುಃಖದಿಂದ ದಗ್ಧಳಾಗಿರಲಿ ಆಕೆಯ ಸೌಂದರ್ಯದಲ್ಲಿ ಕೊರತೆಯು ಹ್ಯಾಗೆ ಉಂಟಾಗಬೇಕು? ಬೇರೆ ಬೇರೆ ವಿಕಾರಗಳಿಂದ ಆ ಸೌಂದರ್ಯದ ಬೇರೆ ಬೇರೆ ಮನೋಹರ ದ್ರವ್ಯಸ್ವರೂಪಗಳು ಪ್ರಾಪ್ತವಾಗುತ್ತಿರುವವಷ್ಟೇ ? ನೂರಜಹಾನಳ ಸ್ಥಿತಿಯಾದರೂ