ಪುಟ:Kannadigara Karma Kathe.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ಕನ್ನಡಿಗರ ಕರ್ಮಕಥೆ

೧೬ನೆಯ ಪ್ರಕರಣ

ಸಂಬಂಧ ಸೂಚನೆ

ಹಿಂದಿನ ೧೪ನೆಯ ಪ್ರಕರಣದಲ್ಲಿ ಹೇಳಿದಂತೆ ರಾಮರಾಜನು ಕುಂಜವನದಿಂದ ಹೊರಟವನು ವಿಜಯನಗರದ ಕಡೆಗೆ ಒತ್ತರದಿಂದ ಸಾಗಿದ್ದನು; ಆದರೆ ಆತನ ಚಿತ್ತಕ್ಕೆ ಸಮಾಧಾನವಿದ್ದಿಲ್ಲ. ಆತನು ಭ್ರಮಿಷ್ಠನಂತೆ ಆಗಿದ್ದನು. ತಾನು ಕುಂಜವನದಲ್ಲಿ ಮೆಹರ್ಜಾನಳನ್ನು ನೋಡಿದಂತೆ ಭಾಸವಾದಾಗಿನಿಂದ, ಆತನಿಗೆ ೩೫ ವರ್ಷದ ಹಿಂದಿನ ತನ್ನ ಕರ್ಮಕಥೆಯೆಲ್ಲ ನೆನಪಾಗಿತ್ತು. ಅದರಲ್ಲಿ ಧನಮಲ್ಲನು ಈಗ ೩೫ ವರ್ಷಗಳ ಮೇಲೆ ಅಕಸ್ಮಾತ್ತಾಗಿ ಕುಂಜವನದಲ್ಲಿ ಅಂದೇ ಕಣ್ಣಿಗೆ ಬಿದ್ದಿದ್ದನು. ರಾಮರಾಜನು ಕುದುರೆಯ ಮೇಲೆ ಕುಳಿತು ಸಾಗಿದ್ದರೂ, ಕುದುರೆಯ ನಡಿಗೆಯ ಕಡೆಗೆ ಆತನ ಲಕ್ಷ್ಯವಿದ್ದಿಲ್ಲ. ಸುಮ್ಮನೆ ಪರಾಧೀನನಂತೆ ಕುದುರೆ ಒಯ್ದತ್ತ ಸಾಗಿದ್ದನು. ಕುದುರೆ ಹಾದಿಯನ್ನು ಹಿಡಿದಿರುವದೋ, ಅಡವಿಯನ್ನು ಬಿದ್ದಿರುವದೊ ಎಂಬದನ್ನು ಆತನು ನೋಡುತ್ತಿದ್ದಿಲ್ಲ ! ಕುದುರೆಯು ಬಹು ಸೂಕ್ಷ್ಮ ಸ್ವಭಾವದ್ದಿದ್ದದ್ದರಿಂದ ಅದು ನೆಟ್ಟಗೆ ವಿಜಯನಗರದ ಹಾದಿಯನ್ನು ಹಿಡಿದು ಸಾವಕಾಶವಾಗಿ ನಡೆದಿತ್ತು. ಆತನು ಹಲವು ವಿಚಾರಗಳ ಗುಂಗಿನಲ್ಲಿರುವಾಗ, ವಿಜಯನಗರವನ್ನು ಮುಟ್ಟಿ ತನ್ನ ಮಂದಿರವನ್ನು ಪ್ರವೇಶಿಸಿದನು; ಆತನ ಊಟ ಉಪಚಾರಗಳು ಆದವು; ಆತನ ನಿತ್ಯದ ರಾಜಕಾರಣದ ಕಾರ್ಯಗಳೂ ನಡೆದವು; ಆತನು ಜನರ ದರ್ಶನ ತಕ್ಕೊಳ್ಳಹತ್ತಿದನು; ಆಜ್ಞಾಪತ್ರಗಳನ್ನು ಕಳಿಸಹತ್ತಿದನು. ಆದರೆ ಅವೆಲ್ಲ ವ್ಯಾಪಾರಗಳು ನಿದ್ದೆಯೊಳಗಿನ ವ್ಯಾಪಾರಗಳಂತೆ ಆದವು. ಹೀಗೆ ಭ್ರಮಿಷ್ಠನಂತೆ ಆಗಿದ್ದ ರಾಮರಾಜನ ವ್ಯವಹಾರಗಳು ಮನಃಪೂರ್ವಕವಾಗಿ ನಡೆಯದೆಯಿದ್ದಾಗ, ಕುಂಜವನದಿಂದ ಒಬ್ಬ ಗುಪ್ತಚಾರನು ಬಂದಿದ್ದಾನೆಂದು ದ್ವಾರರಕ್ಷನು ಆತನಿಗೆ ಹೇಳಿದನು. ಅದನ್ನು ಕೇಳಿದ ಕೂಡಲೆ ರಾಮರಾಜನು ಆ ಚಾರನನ್ನು ಕರಿಸಿಕೊಂಡು ಸುದ್ದಿಯೇನೆಂದು ಕೇಳಲು, ಆ ಚಾರನು “ನೂರಜಹಾನಳನ್ನು ಕಳಿಸುವದಕ್ಕಾಗಿ ರಣಮಸ್ತಖಾನನು ವಿಜಾಪುರಕ್ಕೆ ಹೋದನೆಂ"ದು ಹೇಳಿದನು.