ಪುಟ:Kannadigara Karma Kathe.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಬಂಧ ಸೂಚನೆ

೧೪೫


ಈ ಸುದ್ದಿಯನ್ನು ಕೇಳಿದಕೂಡಲೆ ರಾಮರಾಜನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ಕೆಲಹೊತ್ತಿನವರೆಗೆ ಆತನು ಆ ಗುಪ್ತಚಾರನಿಗೆ ಏನೂ ಪ್ರಶ್ನೆಮಾಡದೆ ಸುಮ್ಮನೆ ಕುಳಿತುಕೊಂಡನು. ಆ ಮೇಲೆ ಆತನು ಚಾರನನ್ನು ಕುರಿತು ರಣಮಸ್ತಖಾನನ ಸಂಗಡ ಮತ್ತೆ ಯಾರು ಹೋದರು ? ಸಂಗಡ ಎಷ್ಟು ಜನರು ಹೋಗಿರುವರು ? ಆತನ ಮನೆಯ ಜನರೂ ಹೋದರೇನು ? ಎಂದು ಕೇಳಲು, ಚಾರನು-ಇಲ್ಲ, ಅವರ ತಾಯಿಯೇ ಮೊದಲಾದವರು, ರಣಮಸ್ತಖಾನನು, ಹಾಗೂ ಅವನ ಕೆಲವು ಪರಿವಾರವು ಇಷ್ಟೇ ಜನರು ವಿಜಾಪುರಕ್ಕೆ ಹೋಗಿರುವರು, ಉಳಿದವರೆಲ್ಲ ಇಲ್ಲಿಯೇ ಇರುವರು, ಎಂದು ಹೇಳಿದನು. ಪುನಃ ರಾಮರಾಜನು ಸುಮ್ಮನೆ ಕುಳಿತುಕೊಂಡನು. ಆಮೇಲೆ ಆತನು ಮತ್ತೆ ಚಾರನನ್ನು ಕುರಿತು- “ನೀನು ನಿನ್ನ ಕೆಲಸವನ್ನು ನೆಟ್ಟಗೆ ಮಾಡುವದಿಲ್ಲೆನ್ನುವ ಹಾಗೆ ಕಾಣುತ್ತದೆ. ನಿನ್ನೆ ಮುಂಜಾನೆ ನಾನು ಅಲ್ಲಿಗೆ ಬಂದಾಗ ಒಬ್ಬ ಬಲಭೀಮನಂಥ ಲಡ್ಡ ಕರಿಯ ಮನುಷ್ಯನನ್ನು ವಕೀಲನ ಜನರು ಮುತ್ತಿ, ಆತನನ್ನು ಏನೇನೋ ಕೇಳುತ್ತಿದ್ದದ್ದನ್ನು ನಾನು ನೋಡಿದೆನು;ಆದರೆ ಆ ಕರಿಯ ಮನುಷ್ಯನು ಯಾರು ? ಅಲ್ಲಿಗೆ ಯಾವಾಗ ಬಂದನು ? ಎಂಬುದನ್ನೇನೂ ನೀನು ನನ್ನ ಮುಂದೆ ಹೇಳಲಿಲ್ಲ ? ಆ ಸುದ್ದಿಯನ್ನು ಹೇಳುವದು ನಿನ್ನ ಕೆಲಸವಲ್ಲವೊ ?” ಎಂದು ಕೇಳಲು ಆ ಚಾರನು-ಸರಕಾರ, ತಾವು ಬರುವದಕ್ಕಿಂತ ಮೊದಲು ಗಳಿಗೆ ಎರಡು ಗಳಿಗೆಯ ಸುಮಾರಕ್ಕೆ ಆ ಮನುಷ್ಯನು ಅಲ್ಲಿಗೆ ಬಂದಿದ್ದನು. ವಕೀಲನ ಜನರು ಆತನಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು ; ಆದರೆ ಆ ಬಲಭೀಮನು ಕೇವಲ ಮೂಕನಂತೆ ಸುಮ್ಮನೆ ನಿಂತು ಬಿಟ್ಟಿದ್ದನು. ಜನರ ಮಾತು ಆತನಿಗೆ ಕೇಳುತ್ತಿರುವಂತೆ ತೋರಲಿಲ್ಲ. ಆಗಿನಿಂದ ಆತನ ವೃತ್ತಾಂತವನ್ನು ತಿಳಕೊಳ್ಳಬೇಕೆಂದು ನಾನು ಬಹಳವಾಗಿ ಯತ್ನಿಸುತ್ತಿರುವೆನು; ಆದರೆ ಒಂದು ಸುದ್ದಿಯೂ ಗೊತ್ತಾಗಲಿಲ್ಲ. ಅಲ್ಲಿಯ ಜನರಿಗೇ ಅವನ ವೃತ್ತಾಂತವು ಗೊತ್ತಾಗದ ಬಳಿಕ, ಅದು ನನಗೆ ಹ್ಯಾಗೆ ಗೊತ್ತಾಗಬೇಕು ? ನಾನು ಆತನ ಬಳಿಗೆ ಹೋಗಿ, ತಮಿಳು, ತೆಲಗು, ಕನ್ನಡ, ಅರವು ಈ ನಾಲ್ಕು ಭಾಷೆಗಳಲ್ಲಿಯೂ ಕೇಳಿ ನೋಡಿದೆನು; ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅಂದಬಳಿಕ ನಾನು ನಮ್ಮ ಮುಂದೆ ಬಂದು ಏನು ಹೇಳಲಿ ? ತಾವು ಸ್ವತಃ ಆ ಮನುಷ್ಯನನ್ನು ನೋಡಿದ್ದರಿಂದ ಇಂಥ ಮನುಷ್ಯನು ಬಂದಿದ್ದಾನೆ” ಎಂದು ಹೇಳುವ ಅವಶ್ಯವು ನನಗೆ ತೋರಲಿಲ್ಲ. ಆ ಮನುಷ್ಯನ ಸಂಬಂಧದಿಂದ ವಿಶೇಷ ಸಂಗತಿಗಳೇನಾದರೂ ತಿಳಿದರೆ, ಬಂದು ಹೇಳಬೇಕೆಂದು ಬಿಟ್ಟಿದ್ದೆನು. ಅಷ್ಟರಲ್ಲಿ ಆ ವಕೀಲಸಾಹೇಬರು