ಪುಟ:Kannadigara Karma Kathe.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೪

ಕನ್ನಡಿಗರ ಕರ್ಮಕಥೆ

ಉತ್ಪನ್ನವಾಗುವದೆಂದು ಜನರು ಅಲ್ಲಲ್ಲಿ ಮಾತಾಡಹತ್ತಿದರು. ಆಗ ವಿಜಾಪುರದಲ್ಲಿ ಎಲ್ಲಿ ಹೋದರೂ ಈ ಯುದ್ಧದ ವಿಷಯವನ್ನೇ ಕುರಿತು ಜನರು ಮಾತಾಡುತ್ತಲಿದ್ದರು. ಒಬ್ಬ ಸರದಾರನ ಮಗಳ ಮಾನಖಂಡನ ಮಾಡಿದ್ದನ್ನು ಬಾದಶಹನು ಎಂದಿಗೂ ಸೈರಿಸಿಕೊಳ್ಳಲಾರನೆಂದು, ಎಲ್ಲರು ನಿಶ್ಚಯಿಸಿದ್ದರು. ಇನ್ನು ಬೇಗನೆ ವಿಜಯನಗರದ ಮೇಲೆ ಸಾಗಿಹೋಗಬೇಕಾಗುವದೆಂದು, ಪ್ರತಿಯೊಬ್ಬ ಮುಸಲ್ಮಾನನು ಸ್ಫೂರ್ತಿಗೊಂಡನು. ಪ್ರತಿಯೊಂದು ಮನೆಯಲ್ಲಿ ಮಸೀದೆಯಲ್ಲಿ ಜನರು ತಮ್ಮ ತಮ್ಮೊಳಗೆ “ಬಾದಶಹನು ಈ ಪ್ರಸಂಗದಲ್ಲಿ ಹಿಂದಕ್ಕೆ ಸರಿಯಲಾಗದೆಂ"ದು ಪ್ರತಿಯೊಬ್ಬರ ಬಾಹುಗಳು ಸ್ಪುರಿಸಹತ್ತಿದವು. ಪ್ರತಿಯೊಬ್ಬರು ಬಾಯಿಗೆ ಬಂದಂತೆ ಪೌರುಷದ ಮಾತುಗಳನ್ನು ಆಡಹತ್ತಿದರು. ವಿಜಯನಗರದಲ್ಲಿ ಅಪಾರವಾದ ಸಂಪತ್ತು ತುಂಬಿರುವದೆಂಬ ಸುದ್ದಿಯನ್ನು ಅವರು ಕೇಳಿಯೇ ಇದ್ದರು; ಆದ್ದರಿಂದ ಯುದ್ಧದ ಕೊನೆಯಲ್ಲಿ ಆ ಪಟ್ಟಣವನ್ನು ಸುಲಿಯಲಿಕ್ಕೆ ತಮಗೆ ಆಸ್ಪದ ದೊರೆಯಬೇಕೆಂದು ಪ್ರತಿ ಒಬ್ಬ ಮುಸಲ್ಮಾನ ವೀರನು ದಂಡಿನಲ್ಲಿ ಸೇರಲಿಕ್ಕೆ ಆತುರ ಪಡಹತ್ತಿದನು. ದಂಡು ಕೂಡಲಿಕ್ಕೆ ಯಾವಾಗ ಆರಂಭವಾಗುವದೋ ಎಂದು ಅವರು ಎದುರು ನೋಡಹತ್ತಿದರು. ಆದರೆ ಬಾದಶಹನು ಗುಪ್ತ ದರ್ಬಾರದಲ್ಲಿ ನಡೆಸಿದ ಆಲೋಚನೆಯ ಪರಿಣಾಮವು ಇದಕ್ಕೆ ತೀರ ವಿರುದ್ಧವಾಗಿ ಆಯಿತು. ಬಾದಶಹನು ದೊಡ್ಡ ದರ್ಬಾರ ನಡೆಸಿ, ರಾಮರಾಜನು ನೂರಜಹಾನಳ ಲಜ್ಞಾಹರಣ ಮಾಡಿದ ಯಾವತ್ತು ವೃತ್ತಾಂತವನ್ನು ದರ್ಬಾರದಲ್ಲಿ ನಿವೇದಿಸುವಂತೆ ರಣಮಸ್ತಖಾನನನ್ನು ಆಜ್ಞಾಪಿಸಿದನು. ಆಗ ರಣಮಸ್ತಖಾನನು ತನ್ನ ವಾಕ್ಚಾತುರ್ಯವನ್ನೆಲ್ಲ ಒಟ್ಟು ಗೂಡಿಸಿ, ಅತ್ಯಂತ ಆವೇಶದಿಂದ ಆ ವೃತ್ತಾಂತವನ್ನೆಲ್ಲ ನಿವೇದಿಸಿದನು. ಅದನ್ನು ಕೇಳಿ ಯಾವತ್ತು ದರ್ಬಾರದ ಜನರು ರೊಚ್ಚಿಗೆದ್ದರು. ಈಗಲೇ ರಾಮರಾಜನ ಶಾಸನ ಮಾಡಲಿಕ್ಕೆ ವಿಜಯನಗರದ ಮೇಲೆ ಸಾಗಿಹೋಗತಕ್ಕದ್ದೆಂಬ ಉದ್ಗಾರಗಳು ಅಲ್ಲಲ್ಲಿ ಹೊರಡಹತ್ತಿದವು. ಬಾದಶಹನು ಬಹು ಶಾಂತಮುದ್ರೆಯನ್ನು ತಾಳಿದ್ದನು. ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಜನರಿಗೆ ಮಾತಾಡಗೊಟ್ಟು, ಅವರು ಆಡುವ ಮಾತುಗಳನ್ನೆಲ್ಲ ಆತನು ಸಮಾಧಾನದಿಂದ ಕೇಳಿಕೊಳ್ಳುತ್ತಲಿದ್ದನು.

ಈ ಮೇರೆಗೆ ದರ್ಬಾರದಲ್ಲಿ ಒಮ್ಮೆಲೆ ಎದ್ದ ಜನರ ಉದ್ದಾರದ ತರಂಗಗಳು ಸ್ವಲ್ಪ ಶಾಂತವಾದ ಮೇಲೆ, ಬಾದಶಹನು ಆಜ್ಞಾಪಿಸಿದ್ದೇನೆಂದರೆ-ರಣಮಸ್ತಖಾನನು ವರ್ಣಿಸಿದ ಸಂಗತಿಯು ತಾಪದಾಯಕವೆಂಬುದೇನೋ ನಿಜ. ಆದರೆ ಅಷ್ಟಕ್ಕಾಗಿ ಇಷ್ಟು ರೊಚ್ಚಿಗೇಳುವದು ಸರಿಯಲ್ಲ ; ಈ ಸಂಬಂಧದಿಂದ ರಾಮರಾಜನು