ಪುಟ:Kannadigara Karma Kathe.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚು

೧೬೯

ನಾನು ನನ್ನಷ್ಟಕ್ಕೆ ಈ ಮಾತಿನ ವಿಚಾರ ಮಾಡುತ್ತೇನೆಂದು ಆಗಲೆ ನಿಮಗೆ ಹೇಳಿದ್ದೆನಲ್ಲವೆ? ಆದರೆ ಈಗ ನನ್ನ ನಿಶ್ಚಯವಾಗಿರುತ್ತದೆ. ಬಾದಶಹನ ಚಾಕರಿಯಿಂದ ನನ್ನ ಗೌರವವು ಹೆಚ್ಚುವದಿಲ್ಲೆಂಬದು ನನಗೆ ಪೂರಾ ಗೊತ್ತಾಯಿತು. ಬಾದಶಹನು ನನ್ನ ಅಪಮಾನ ಮಾಡಿದ್ದಕ್ಕಾಗಿ ಆತನ ಸೇಡು ತೀರಿಸಿಕೊಳ್ಳಬೇಕೆಂಬ ಬುದ್ದಿಯು ನನ್ನಲ್ಲಿ ಉತ್ಪನ್ನವಾಗಹತ್ತಿದೆ. ಆದ್ದರಿಂದ ನಾನು ನಿಮ್ಮ ಚಾಕರಿಯನ್ನು ಮಾಡಲು ಒಪ್ಪಿಕೊಳ್ಳುತ್ತೇನೆ; ಆದರೆ ಸದ್ಯಕ್ಕೆ ನಾನು ಅದನ್ನು ಗುಪ್ತರೀತಿಯಿಂದ ಮಾಡಲು ಒಪ್ಪಿಕೊಳ್ಳುವೆನು. ಇಂದು ನಾನು ಬಾದಶಹರಿಗೆ- “ನಿಮ್ಮ ಚಾಕರಿಯನ್ನು ನಾನು ಮಾಡುವದಿಲ್ಲೆಂದು ಸ್ಪಷ್ಟವಾಗಿ ಹೇಳುವದಿಲ್ಲ. ನಾನು ಪ್ರಸಿದ್ದ ರೀತಿಯಿಂದ ಬಾದಶಹನ ಚಾಕ್ರಿಯನ್ನು ಗುಪ್ತರೀತಿಯಿಂದ ನಿಮ್ಮ ಚಾಕ್ರಿಯನ್ನು ಮಾಡುವೆನು. ಹೀಗೆ ಮಾಡದೆ ಪ್ರಸಿದ್ದ ರೀತಿಯಿಂದ ನಿಮ್ಮ ಚಾಕರಿಯನ್ನು ಮಾಡಿದರೆ ಆಗ ತಕ್ಕಷ್ಟು ಲಾಭವಾಗದು. ನಾನು ಇಲ್ಲಿ ಬಾದಶಹನ ವಕೀಲನಾಗಿ ಬಂದಿರುವ ದೃಷ್ಟಿಯಿಂದ ಆಗಬಹುದಾದ ಲಾಭಗಳನ್ನು ಮಾಡಿಕೊಂಡರೆ ನಿಮ್ಮ ಹಿತವು ಸಂಪೂರ್ಣವಾಗಿ ಸಾಧಿಸುವದು. ನಿಮ್ಮ ಹಿತಚಿಂತನ ಮಾಡಬೇಕೆಂದು ನಾನು ನಿರ್ಧರಿಸಿರುವೆನು, ಮೂವರು ಬಾದಶಹರ ಒಳಸಂಚುಗಳ ಗೊತ್ತು ನಿಮಗೆ ಹತ್ತಿದರೇ ಲಾಭವಾಗುವದು. ಇಲ್ಲದಿದ್ದರೆ ಲಾಭವೇನು ಆಗುವದು? ನಿಮ್ಮ ರಾಜ್ಯವನ್ನು ನುಂಗಿ ನೀರು ಕುಡಿದು, ಅದನ್ನು ತನ್ನೊಳಗೆ ಹಂಚಿಕೊಳ್ಳಬೇಕೆಂದು ಮೂವರೂ ಬಾದಶಹರು ಯತ್ನಿಸುತ್ತಿದ್ದಾರೆ. ಅವರ ಒಳಸಂಚುಗಳು ನನಗೆ ಗೊತ್ತಾಗುತ್ತ ಹೋದಂತೆ, ನಾನು ಅವನ್ನು ನಿಮಗೆ ತಿಳಿಸುತ್ತ ಹೋಗಿ ನಿಮ್ಮನ್ನು ಎಚ್ಚರಗೊಳಿಸುವೆನು. ಅದಲ್ಲದೆ ನಡನಡುವೆ ನನ್ನಿಂದಾಗ ಸಹಾಯವನ್ನೂ ಮಾಡುತ್ತ ಹೋಗುವೆನು. ಎಂದು ನುಡಿದು ರಣಮಸ್ತಖಾನನು ಒಮ್ಮೆಲೆ ಸುಮ್ಮನಾಗಿ ಗೂಢವಿಚಾರದಲ್ಲಿ ಮಗ್ನನಾದವನಂತೆ ಕುಳಿತು ಕೊಂಡನು.

ಇಷ್ಟು ಅನುಕೂಲವಾಗಿ ರಣಮಸ್ತಖಾನನು ಮಾತಾಡಬಹುದೆಂದು ರಾಮರಾಜನು ತಿಳಿದಿದ್ದಿಲ್ಲ. ಬಹಳವಾದರೆ ಖಾನನು ಪ್ರಸಿದ್ಧರೀತಿಯಿಂದ ತನ್ನ ಚಾಕರಿಯನ್ನು ಮಾಡಲಿಕ್ಕೆ ಒಪ್ಪಿಕೊಳ್ಳಬಹುದೆಂದು ಅತನು ತಿಳಿದಿದ್ದನು; ಆದರೆ “ಕುರುಡ ಬೇಡಿದ್ದು ಒಂದು ಕಣ್ಣು, ದೇವರು ಕೊಟ್ಟದ್ದು ಎರಡು ಕಣ್ಣು” ಎಂಬಂತೆ ರಣಮಸ್ತಖಾನನು ಈಗ ಆಡಿದ್ದನ್ನು ಕೇಳಿ ರಾಮರಾಜನಿಗೆ ಪರಮಾಶ್ಚರ್ಯವಾಯಿತು. ಹೀಗೆ ಆತನಿಗೆ ಆಶ್ಚರ್ಯವಾದದ್ದನ್ನು ತಿಳಿದೋ ಏನೋ ಅನ್ನುವಂತೆ, ರಣಮಸ್ತಖಾನನು ರಾಮರಾಜನನ್ನು ಕುರಿತು- ನನ್ನ ಮಾತನ್ನು ಕೇಳಿ ನೀವು ಆಶ್ಚರ್ಯಪಟ್ಟದ್ದು ಸೋಜಿಗವಲ್ಲ ! ಆದರೆ ನಾನು