ಪುಟ:Kannadigara Karma Kathe.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತೃದ್ರೋಹೋಪಕ್ರಮ

೧೭೫

ತನ್ನ ವಿಚಾರವನ್ನು ತನ್ನ ತಾಯಿಗೆ ತಿಳಿಸಲಿಕ್ಕಿಲ್ಲೆಂದು ನಿಶ್ಚಯವನ್ನಂತು ಆತನು ಯಾವಾಗೋ ಮಾಡಿಬಿಟ್ಟನು. ಮಾಸಾಹೇಬರು ಬಂದ ಬಳಿಕ ರಣಮಸ್ತಖಾನನು ಒಮ್ಮೆ ಅವರ ದರ್ಶನಕ್ಕೆ ಹೋದನು. ಆಗ ಹೆಚ್ಚಿನ ಮಾತಿಲ್ಲ. ಕಥೆಯಿಲ್ಲ. ಸುಮ್ಮನೆ ಕುಳಿತುಕೊಂಡನು, ತಾವು ಹೋಗುವಾಗ ಮಗನ ಮೋರೆಯ ಮೇಲಿದ್ದ ವರ್ಚಸ್ಸು ಸಹ ಈಗ ಇದ್ದಂತೆ ಮಾಸಾಹೇಬರಿಗೆ ತೋರಲಿಲ್ಲ. ರಣಮಸ್ತಖಾನನು ವಿಜಾಪುರದ ಕಡೆಯ ಸುದ್ದಿಯನ್ನು ಕೇಳುವ ವಿಷಯವಾಗಿಯೂ ಆತುರವನ್ನು ತೋರಿಸದಾದನು, ಇದನ್ನು ನೋಡಿ ಮಾಸಾಹೇಬರಿಗೆ ಬಹಳ ವಿಷಾದವಾಯಿತು. ಅವರಾಗಿಯೇ ಹೇಳಿದ ನಾಲ್ಕು ಮಾತುಗಳನ್ನು ಕೇಳಿಕೊಂಡು ರಣಮಸ್ತಖಾನನು ಸುಮ್ಮನೆ ತಾಯಿಯ ಬಳಿಯಿಂದ ಹೊರಟುಹೋದನು. ಹೆಚ್ಚು ಹೊತ್ತು ಕುಳಿತು ಕೊಳ್ಳಲಿಲ್ಲ ಸಹ, ಹೀಗೆ ಮಗನ ಸ್ಥಿತಿಯು ಯಾಕೆ ಹೀಗೆ ಆಗಿರಬಹುದೆಂಬ ವಿಚಾರದಲ್ಲಿ ಮಾಸಾಹೇಬರು ಮತ್ತೆ ತೊಡಗಿದರು, ನೂರಜಹಾನಳ ಕಾಲಲ್ಲಿ ತನ್ನ ಮಗನ ಹಾಡು ಹೀಗಾಗಿದ್ದರೆ ಆಕೆಯ ಪ್ರಾಪ್ತಿಯಂತೂ ಅತ್ಯಂತ ದುರ್ಲಭವಾಗಿರುವದರಿಂದ, ಮಗನ ಪರಿಣಾಮವು ನೆಟ್ಟಗೆ ಕಾಣುವದಿಲ್ಲೆಂದು ಅವರು ಚಿಂತಿಸಹತ್ತಿದರು. ಅವರು ತಮ್ಮ ಸೇವಕರನ್ನು ಕರೆಸಿ- “ನಾವು ಊರಿಗೆ ಹೋದಬಳಿಕ ಏನು ನಡೆಯಿತು ? ಎಂದು ಕೇಳಲು, ಅವರು-ರಾಮರಾಜನು ಕುಂಜವನಕ್ಕೆ ಬಂದಂದಿನಿಂದ ಆತನು ರಣಮಸ್ತಖಾನನೊಡನೆ ಜಗಳವಾಡಿ ಸಿಟ್ಟಿನಿಂದ ಹೊರಟುಹೋದವರೆಗೆ ಯಾವತ್ತೂ ಸುದ್ದಿಯನ್ನು ಹೇಳಿ, ಮಧ್ಯರಾತ್ರಿಯಲ್ಲಿ ಒಮ್ಮೆ ಖಾನರು ವಿಜಯನಗರದ ಕಡೆಗೆ ಹೋಗುವರೆಂಬದನ್ನೂ ಹೇಳಿದರು. ಅದನ್ನು ಕೇಳಿದ ಬಳಿಕಂತು ಮಾಸಾಹೇಬರು ಮತ್ತಷ್ಟು ಸಂಶಯಗ್ರಸ್ತರಾದರು. ಅವರು ಮನಸ್ಸಿನಲ್ಲಿ, ರಾಮರಾಜನೊಡನೆ ಆದ ಜಗಳಕ್ಕೂ, ರಣಮಸ್ತಖಾನನು ಮಧ್ಯರಾತ್ರಿಯಲ್ಲಿ ವಿಜಯನಗರದ ಕಡಗೆ ಹೋಗಲಿಕ್ಕೂ ಸಂಬಂಧವೇನು ? ಮೇಲಾಗಿ ರಣಮಸ್ತಖಾನನು ದಿನಾಲು, ಇಲ್ಲವೆ ಎರಡು ದಿವಸಗಳಿಗೊಮ್ಮೆ ವಿಜಯನಗರದ ದರ್ಬಾರಕ್ಕೆ ಹೋಗುತ್ತಾನೆಂತಲೂ ಜನರು ಹೇಳುತ್ತಾರೆ. ಇದರ ಗೂಢವೇನಿರಬಹುದು ? ರಾಮರಾಜನು ತನ್ನ ಸವಿ ಮಾತುಗಳಿಂದ ಮಗನ ಮನಸ್ಸನ್ನು ಮತ್ತೆ ತಿರುಗಿಸಿ ಕೊಂಡಿರಬಹುದೇನು? ಅಥವಾ ಜಗಳವೇ ಮೋಸದ್ದಿರುವುದೋ ? ಮಧ್ಯ ರಾತ್ರಿಯಲ್ಲಿ ಮಗನು ಹೋಗಲಿಕ್ಕೆ ಗುಪ್ತ ರಾಜಕಾರಣವಾಗಲಿ, ಪರಸ್ತ್ರೀ ಲಂಪಟತ್ವವಾಗಲಿ ಕಾರಣವಾಗಿರಬೇಕು. ಆದರೆ ನೂರಜಹಾನಳ ಪ್ರಾಪ್ತಿಯು ಅವಶ್ಯವಾಗಿ ತೋರಿದ ಕೂಡಲೇ ಅನ್ಯ ಸ್ತ್ರೀಯಲ್ಲಿ ಲಂಪಟನಾಗುವಷ್ಟು ತನ್ನ ಮಗನು ಚಂಚಲ