ಪುಟ:Kannadigara Karma Kathe.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತೃದ್ರೋಹೋಪಕ್ರಮ

೧೭೭

ಆತನಿಗೆ ನಿದ್ದೆ ಬರಲಿಲ್ಲ. ಕೂಡಲೇ ಆತನು ತನ್ನ ಕುದುರೆಗೆ ಜೀನು ಹಾಕಿಸಿ ತರಿಸಿ ವಿಜಯನಗರದ ಕಡೆಗೆ ಒಬ್ಬನೇ ಹೋದವನು ಬೆಳಗುಮುಂಜಾನೆ ಬಂದು ಮಲಗಿಕೊಂಡಿದ್ದನು. ಎರಡು ತಾಸು ಹೊತ್ತು ಏರಿದರೂ ಆತನಿಗೆ ಎಚ್ಚರವಾಗಲಿಲ್ಲ. ಇತ್ತ ಮಾಸಾಹೇಬರಂತು, ಮಗನು ಯಾವಾಗ ಎದ್ದಾನೆಂದು ಚಡಪಡಿಸಹತ್ತಿದರು. ಅವರು ಮಗನು ಎದ್ದಿರುವನೋ ಇಲ್ಲವೋ ನೋಡಿ ಬರಲಿಕ್ಕೆ ಒಂದು ತಾಸಿನಲ್ಲಿ ನಾಲ್ಕು ಸಾರೆ ಸೇವಕರನ್ನು ಓಡಾಡಿಸಿದರು; ಆದರೆ ಆತನು ಇನ್ನೂ ಎದ್ದಿದ್ದಿಲ್ಲ. ವಾಸಾಹೇಬರು ಅತ್ಯಂತ ಆತುರರಾಗಿದ್ದರು. ಅವರ ಮನಸ್ಸಿಗೆ ಸಮಾಧಾನವಾಗಲೊಲ್ಲದು. ಇನ್ನು ಆತನು ಏಳುವ ಹಾದಿಯನ್ನು ನೋಡದೆ ತಾವೇ ಆತನ ಕೋಣೆಯವರೆಗೆ ಹೋಗಿ ಆತನನ್ನು ಎಬ್ಬಿಸಿ, ಹೇಳುವದನ್ನು ಹೇಳಿಬಿಡೋಣ ಎಂದು ನಿಶ್ಚಯಿಸಿ, ಆತನ ಕೋಣೆಯ ಕಡೆಗೆ ಹೊರಟರು. ಇಂದಿನವರೆಗೆ ಮಾಸಾಹೇಬರು ಹೀಗೆ ಎಂದೂ ಮಾಡಿದ್ದಿಲ್ಲ. ಅವರು ರಣಮಸ್ತಖಾನನ ಮಲಗುವ ಕೊನೆಯ ಬಾಗಿಲಿಗೆ ಹೋಗಿ ಅಲ್ಲಿದ್ದ ಸೇವಕನಿಗೆ “ನಿಮ್ಮ ಖಾನರನ್ನು ಎಬ್ಬಿಸಿ, ನಾನು ಬಂದಿದ್ದೇನೆಂದು ಅವರಿಗೆ ಹೇಳು” ಎಂದು ಸೂಚಿಸಿದರು. ಮಾಸಾಹೇಬರು ಬಳಿಯಲ್ಲಿರದಿದ್ರೆ ಕೂಗಿ ಎಬ್ಬಿಸುವ ಧೈರ್ಯವು ಆ ಸೇವಕನಿಗೆ ಎಂದೂ ಆಗುತ್ತಿದ್ದಿಲ್ಲ. ಸೇವಕನು ಮಾಸಾಹೇಬರು ಬಂದಿದ್ದಾರೆಂಬ ಧೈರ್ಯದಿಂದ ರಣಮಸ್ತಖಾನನನ್ನು ಗಟ್ಟಿಯಾಗಿ ಕೂಗಿ ಎಬ್ಬಿಸಿ “ಮಾಸಾಹೇಬರು ತಮ್ಮನ್ನು ಕಾಣಲಿಕ್ಕೆ ಬಂದಿದ್ದಾರೆಂದು” ಕೂಗಿ ಹೇಳಿದನು. “ಮಾಸಾಹೇಬರು ಬಂದಿದ್ದಾರೆಂಬ ಶಬ್ದವು ಕಿವಿಗೆ ಬಿದ್ದ ಕೂಡಲೇ ರಣಮಸ್ತಖಾನನು ತನ್ನ ಪಲ್ಲಂಗದಿಂದ ಕೆಳಗೆ ಬಂದುನಿಂತು- “ಬಂದೆನು, ಈಗ ಬಂದೆನು, ನಾನು ಅವರ ಕೋಣೆಗೆ ಬರುತ್ತೇನೆಂದು ಹೇಳು. ಅವರು ಇಲ್ಲಿಯವರೆಗೆ ಬರುವ ಆಯಾಸವನ್ನು ಯಾಕೆ ಮಾಡಿಕೊಂಡರು? ಅವರು ತಮ್ಮ ಕೋಣೆಯನ್ನು ಮುಟ್ಟುವದರೊಳಗಾಗಿ, ನಾನು ಬಂದೆನೆಂದು ಹೇಳು” ಎಂದು ಗಟ್ಟಿಯಾಗಿ ನುಡಿದು, ಹತ್ತಿರ ಹೂಜಿಯಲ್ಲಿಟ್ಟಿದ್ದ ನೀರಿನಿಂದ ಬಾಯಿಮುಕ್ಕಳಿಸಿಕೊಂಡು ಮೋರೆಯನ್ನು ತೊಳಕೊಂಡನು.

ರಣಮಸ್ತಖಾನನು ತನ್ನ ಸೇವಕನಿಗೆ ಹೇಳಿದ್ದನ್ನು ಮಾಸಾಹೇಬರು ಕೇಳಿ ಕ್ಷಣಮಾತ್ರ ವಿಚಾರಮಗ್ನನಾದರು. ತಾವು ಇಲ್ಲಿಯೇ ಇರಬೇಕೊ, ತಮ್ಮ ಕೋಣೆಗೆ ಹೋಗಬೇಕೋ ಎಂದು ಅವರು ಆಲೋಚಿಸತೊಡಗಿದರು. ಕಡೆಗೆ ಅವರು ತಮ್ಮ ಕೋಣೆಗೆ ಹೋಗುವದೇ ನೆಟ್ಟಗೆ, ಅಲ್ಲಿ ಸಮಾಧಾನದಿಂದ ಮಾತಾಡಲಿಕ್ಕೆ ಅನುಕೂಲವಾದಂತೆ ಬೇರೆ ಸ್ಥಳದಲ್ಲಿ ಆಗಲಿಕ್ಕಿಲ್ಲ. ಎಂದು ನಿಶ್ಚಯಿಸಿ