ಪುಟ:Kannadigara Karma Kathe.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೨

ಕನ್ನಡಿಗರ ಕರ್ಮಕಥೆ

ಅವರು ಇಂದು ಕಣ್ಣಿನಿಂದ ನೋಡಿದರು, ಕಿವಿಯಿಂದ ಕೇಳಿದರು, ಮನಸ್ಸಿನಿಂದ ಅನುಭವಿಸಿದರು. ಅವರು ಅತ್ಯಂತ ಶೂನ್ಯಹೃದಯರಾದದ್ದರಿಂದ ಮಗನು ಹೊರಟುಹೋದದ್ದು ಸಹ ಅವರಿಗೆ ಗೊತ್ತಾಗಲಿಲ್ಲ. ಐದು ಪಳವಾಯಿತು, ಹತ್ತು ಪಳವಾಯಿತು, ಗಳಿಗೆಯಾಯಿತು, ನಾಲ್ಕು ಗಳಿಗೆಯಾಯಿತು, ಆದರೂ ಅವರು ಹಾಗೆಯೇ ಸ್ತಬ್ದವಾಗಿ ಕುಳಿತಿದ್ದರು. ಮುಂದೆ ಅವರು ಎಚ್ಚತ್ತು ಮಗನ ಸ್ಥಿತಿಯನ್ನು ಕುರಿತು ಆಲೋಚಿಸತೊಡಗಿದರು. ಮಾಸಾಹೇಬರು ಒಳ್ಳೆ ಚತುರರು, ಬಹು ವಿಚಾರವಂತರು, ದೂರದರ್ಶಿಗಳು; ಶಾಂತಸ್ವಭಾವದವರು. ಅವರು ವಿಚಾರದ ಕೊನೆಯಲ್ಲಿ ತಮ್ಮ ಮಗನು ಬಾದಶಹನ ಸೇಡು ತೀರಿಸಿಕೊಳ್ಳುವದಕ್ಕಾಗಿ ರಾಮರಾಜನ ಸಂಗಡ ಒಳಸಂಚು ನಡೆಸಿರುವದೇ ನಿಶ್ಚಯವೆಂದು ತರ್ಕಿಸಿ, ಅದರ ಶೋಧದ ಉಪಾಯಗಳನ್ನು ಯೋಚಿಸಹತ್ತಿದರು !

****