ಪುಟ:Kannadigara Karma Kathe.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೩

೨೦ನೆಯ ಪ್ರಕರಣ

ದುಃಸ್ವಪ್ನವು

ವಾಚಕರು ಮಾಸಾಹೇಬರ ಇಲ್ಲಿಯವರೆಗಿನ ಆಚರಣೆಯನ್ನು ನೋಡಿರುವದರಿಂದ, ಅವರ ಯೋಗ್ಯತೆಯನ್ನು ಕುರಿತು ಹೆಚ್ಚಿಗೆ ಬರೆಯಲವಶ್ಯವಿಲ್ಲ. ಮಾಸಾಹೇಬರು ಒಮ್ಮೆ ನಿಶ್ಚಯ ಮಾಡಿದರೆಂದರೆ, ತಿರುಗಿ ಹಿಂದಕ್ಕೆ ಸರಿಯುತ್ತಿದ್ದಿಲ್ಲ. ತಮ್ಮ ಮಗನ ಕೃತಿಗಳನ್ನು ಗುಪ್ತರೀತಿಯಿಂದ ನೋಡಿ ಆತನ ಒಳಸಂಚಿನ ಸ್ವರೂಪವನ್ನು ತಿಳಿದುಕೊಳ್ಳಬೇಕೆಂದು ನಿಶ್ಚಯಿಸಿದ ಕೂಡಲೆ ಅವರು ರಣಮಸ್ತಖಾನನ ನಂಬಿಗೆಯ ಸೇವಕನಾದ ನಜೀರನ್ನು ಕರೆಯಿಸಿ ಆತನಿಂದ ಆಣೆಮಾಡಿಸಿ, ಆತನಿಗೆ ತಮ್ಮ ಆಣೆಯನ್ನಿಟ್ಟು ಆತನನ್ನು ಕುರಿತು, “ನಜೀರ, ನಾನು ಈಗ ಹೇಳುವ ಕೆಲಸವನ್ನು ರಣಮಸ್ತಖಾನನಿಗೆ ಗೊತ್ತಾಗಂತೆ ನೀನು ಮಾಡತಕ್ಕದ್ದು” ಎಂದು ಹೇಳಿದರು ಮಾಸಾಹೇಬರ ಮೇಲೆ ಎಲ್ಲ ಜನರ ಭಕ್ತಿಯು. ಅವರ ಆಜ್ಞೆಗಳನ್ನು ಪಾಲಿಸಲಿಕ್ಕೆ ಎಲ್ಲರೂ ಆತುರರು. ಬಹಳವೇಕೆ, ಅವರ ಅಪ್ಪಣೆಯನ್ನು ಪಾಲಿಸುವ ಪ್ರಸಂಗವು ಬರಬಹುದೋ ಎಂದು ಎಲ್ಲರೂ ಹಾದಿಯನ್ನೇ ನೋಡತ್ತಿದ್ದರೆಂದು ಹೇಳಬಹುದು. ಅಂದಬಳಿಕ ನಜೀರನು ಮಾಸಾಹೇಬರ ಅಪ್ಪಣೆಯನ್ನು, ಅದರಲ್ಲೂ ಅವರು ಆಣೆಯಿಟ್ಟು ಮಾಡಿದ ಅಪ್ಪಣೆಯನ್ನು ಈಗ ಹ್ಯಾಗೆ ಪಾಲಿಸದೆಯಿದ್ದಾನು ? ಆತನು ಸಾಹೇಬರನ್ನು ಕುರಿತು - “ಮಾಸಾಹೇಬರೇ, ತಾವು ಹೇಳಿದರೆ ಪ್ರಾಣವನ್ನರ್ಪಿಸಲಿಕ್ಕೂ ನಾನು ಸಿದ್ದನಿರುವಾಗ, ಉಳಿದ ಕೆಲಸಗಳ ಪಾಡೇನು ? ತಾವು ಹೇಳುವದೊಂದೇ ತಡ. ಇನ್ನು ಗೌಪ್ಯವಾಗಿಡುವ ಸಂಬಂಧದಿಂದ ಕೇಳಿದರೆ, ಈ ನಾಲಗೆಯು ಆ ಮಾತನ್ನು ಎಂದಿಗೂ ಉಚ್ಚರಿಸಲಿಕ್ಕಿಲ್ಲ. ಬೇಕಾದರೆ ನಿಮ್ಮ ನಂಬಿಕೆಗಾಗಿ ನನ್ನ ನಾಲಗೆಯನ್ನು ಕಿತ್ತು ಈಗ ನಿಮ್ಮ ಮುಂದೆ ಇಡುತ್ತೇನೆ” ಎಂದು ಹೇಳಿದನು. ನಜೀರನ ಈ ಮಾತುಗಳನ್ನು ಕೇಳಿ ಮಾಸಾಹೇಬರಿಗೆ ಬಹಳ ಸಂತೋಷವಾಯಿತು. ಅವರು ನಜೀರನಿಗೆ- “ನೀನು ಅಂಥ ಮನುಷ್ಯನೆಂತಲೇ ನಿನ್ನನ್ನು ಕರೆಸಿದ್ದೇನೆ. ಕೆಲಸವೇನು, ಬಹಳವಿಲ್ಲ. ಇಂದಿನ ರಾತ್ರಿಯಲ್ಲಿ ಅಥವಾ ನಾಳಿನ ರಾತ್ರಿಯಲ್ಲಿ