ಪುಟ:Kannadigara Karma Kathe.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ಕನ್ನಡಿಗರ ಕರ್ಮಕಥೆ

ನಿಮ್ಮ ಒಡೆಯನು ಹೊರಬಿದ್ದ ಕೂಡಲೆ, ನೀನು ಆತನಿಗೆ ಗೊತ್ತಾಗದಂತೆ ಬೆನ್ನುಹತ್ತಿಹೋಗಿ ಆತನು ಯಾವ ದಿಕ್ಕಿಗೆ ಹೋಗುತ್ತಾನೆಂಬುದನ್ನು ನನಗೆ ಬಂದು ಹೇಳು. ಆತನು ಕುದುರೆಯು ಮೇಲಿಂದ ಹೋಗುವವನು, ನೀನು ಕಾಲಲ್ಲಿ ನಡೆದು ಹೋಗುವವನು; ಅದರಿಂದ ದಿಕ್ಕು ನೋಡಿಕೊಂಡು ಬರುವದರ ಹೊರತು ಹೆಚ್ಚಿನ ಕೆಲಸವೇನೂ ನಿನ್ನಿಂದ ಆಗಲಿಕ್ಕಿಲ್ಲ; ಕುದುರೆ ಹತ್ತಿ ಹೋಗುವಂತೆ ನಿನಗೆ ನಾನು ವ್ಯವಸ್ಥೆ ಮಾಡಿಕೊಡುತ್ತಿದ್ದನು. ಆದರೆ ರಾತ್ರಿಯಲ್ಲಿ ಅದು ರಣಮಸ್ತಖಾನನಿಗೆ ಗೊತ್ತಾಗದೆ ಹೋಗಲಿಕ್ಕಿಲ್ಲ. ಅದರಿಂದ ಕಾಲಿನಿಂದ ನಡೆದು ಹೋಗಲಿಕ್ಕೆ ಶಕ್ಯವಿದ್ದಮಟ್ಟಿಗೆ ನೀನು ನಡೆದುಹೋಗಿ, ದಿಕ್ಕನಷ್ಟು ತಿಳಿದುಕೊಂಡು ಬಾ, ಆಮೇಲೆ ಏನು ಮಾಡಬೇಕೆಂಬದನ್ನು ನಿನಗೆ ಹೇಳುತ್ತೇನೆ” ಎಂದು ಹೇಳಿದರು.

ನಜೀರನು ಮಾಸಾಹೇಬರ ಮಾತಿಗೆ ಸಂತೋಷದಿಂದ ಒಪ್ಪಿಕೊಂಡು ಹೋದನು; ಆದರೆ ಮಾಸಾಹೇಬರು ಅಷ್ಟಕ್ಕೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ ನಜೀರನು ಹೇಳುವ ಸುದ್ದಿಯು ನಿಜವೆಂಬುದನ್ನು ಬೇರೆ ಸಾಕ್ಷಿಯಿಂದ ಮನಗಾಣುವದು ಅವಶ್ಯವೆಂದು ತಿಳಿದು, ಅವರು ತಮ್ಮ ಸೇವಕರಲ್ಲಿ ನಂಬಿಗೆಯವನಾದ ಕರೀಮಬಕ್ಷನೆಂಬವನನ್ನು ಕರೆದು ಅವನಿಗೊಂದು ಕೆಲಸವನ್ನು ಒಪ್ಪಿಸಿದರು. ಆತನು ಈ ದಿನ ಸಂಜೆಗೇ ವಿಜಯನಗರದ ಅರ್ಧ ಹಾದಿಯ ಮೇಲೆ ಎಲ್ಲಿಯಾದರೂ ಕುಳಿತು, ರಣಮಸ್ತಖಾನನು ರಾತ್ರಿ ಆ ಹಾದಿಯಿಂದ ಹೋಗುವನೋ ಹೇಗೆಂಬದನ್ನು ತಿಳಿದು ಬಂದು ಮಾಸಾಹೇಬರಿಗೆ ಹೇಳಬೇಕಾಯಿತು. ಕರೀಮಬಕ್ಷನೂ ಮಾಸಾಹೇಬರ ಮಾತಿಗೆ ಸಂತೋಷದಿಂದ ಒಪ್ಪಿಕೊಂಡು, ಇಳಿಯ ಹೊತ್ತಾದ ಕೂಡಲೆ ವಿಜಯನಗರದ ಹಾದಿಯನ್ನು ಹಿಡಿದನು. ಇವರಿಬ್ಬರೂ ತಮ್ಮ ಮಾತಿಗೆ ಒಪ್ಪಿಕೊಂಡದ್ದಕ್ಕಾಗಿ ಮಾಸಾಹೇಬರಿಗೆ ಬಹಳ ಸಂತೋಷವಾಯಿತು. ಯಾವಾಗ ಹೊತ್ತು ಮುಳುಗೀತೆಂದು ಅವರು ಹಾದಿಯನ್ನು ನೋಡುತ್ತ ಕುಳಿತುಕೊಂಡರು. ಇಂದು ಅವರ ಜಪ-ತಪಗಳೆಲ್ಲ ಹಿಂದಕ್ಕೆ ಬಿದ್ದುವು. ಪುತ್ರದೇವನ ಮುಂದೆ ಯಾವ ದೇವರೂ ಸುಳಿಯದಾದರು! ಮಗನು ರಾಮರಾಜನ ಪಾಶದಲ್ಲಿ ಸಿಕ್ಕಿಕೊಂಡನೆಂದು ಅವರು ತಿಳಿದುಕೊಂಡು ಬಿಟ್ಟಿದ್ದರು. ಅದನ್ನು ಪರೀಕ್ಷಿಸಿ ನೋಡಲಿಕ್ಕೆ ಅವರು ಆತುರಪಡುತ್ತಲಿದ್ದರು. ಅವರ ಮನಸ್ಸು ಬಹಳ ಚಂಚಲವಾಯಿತು. ಅವರ ಮನಸ್ಸಿನ ಈ ಸ್ಥಿತ್ಯಂತರವು ಲೈಲಿಗೆ ಗೊತ್ತಾಯಿತು; ಆದರೆ ಕಾರಣವನ್ನು ಈಗೆಯೇ ಯಾಕೆ ಕೇಳಬೇಕು. ಸಂಜೆಗಿಂಜೆ ಮುಂದೆ ಮಾಸಾಹೇಬರನ್ನು ಕೇಳೊಣವೆಂದು ಆಕೆಯು