ಪುಟ:Kannadigara Karma Kathe.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೬

ಕನ್ನಡಿಗರ ಕರ್ಮಕಥೆ

ತಾನು ಅತ್ಯಂತ ಬಲಾಡ್ಯನಾದ ಮುಸಲ್ಮಾನ ಬಾದಶಹರ ಮಗ್ಗಲು ಮುರಿಯಬೇಕೆಂದು ಹವಣಿಸುತ್ತಿದ್ದನು. ಇಂಥ ಪ್ರಸಂಗದಲ್ಲಿ ರಣಮಸ್ತಖಾನನಂಥ ತರುಣ ವೀರನು ತನ್ನ ಪಕ್ಷವನ್ನು ಸ್ವೀಕರಿಸಿದ್ದು ಆ ಮಹತ್ವಾಕಾಂಕ್ಷಿಯಾದ ಹಿಂದೂ ರಾಜನ ಪರಮಾನಂದಕ್ಕೆ ಕಾರಣವಾಯಿತು.

ಕರೀಮಬಕ್ಷನನ್ನು ಕುಂಜವನಕ್ಕೆ ಕಳಿಸಿದ ಬಳಿಕ ರಾಮರಾಜನೂ, ರಣಮಸ್ತಖಾನನೂ ಏಕಾಂತದಲ್ಲಿ ಬಹಳಹೊತ್ತು ಮಾತಾಡಿದರು. ಇನ್ನು ಎಲ್ಲ ಮಾತಿನ ನಿರ್ಣಯವಾದ ಮೇಲೆ ಬಾದಶಹನ ಮುಂದೆಯಾದರೂ ಮುಸುಕು ಯಾಕೆಯೆಂದು ರಣಮಸ್ತಖಾನನು ವಿಜಾಪುರದ ಬಾದಶಹನಿಗೊಂದು ಪತ್ರವನ್ನು ಬರೆದು ಅದನ್ನು ಬೇಕಾದ ಒಬ್ಬ ಸೇವಕನ ಸಂಗಡ ಕಳಿಸಿಕೊಡಬೇಕೆಂದು ರಾಮರಾಜನಿಗೆ ಹೇಳಿದನು. ಆ ಪತ್ರದಲ್ಲಿ ರಣಮಸ್ತಖಾನನು ಬಾದಶಹನಿಗೆ ನಾನು ಈಗ ಹಿಂದೂ ರಾಜನ ನೌಕರನಾಗಿರುವೆನು. ನಾನು ಕುಂಜವನವನ್ನು ಬಿಟ್ಟು ವಿಜಯನಗರದಲ್ಲಿ ಈಗ ಇರಹತ್ತಿದ್ದೇನೆ. ಈ ಹೊತ್ತಿನಿಂದ ನಾನು ನಿಮ್ಮ ನೌಕರನಲ್ಲ, ತಮ್ಮ ಶತ್ರುವಿನ ನೌಕರನು. ಎಂದು ಸ್ಪಷ್ಟವಾಗಿ ಬರೆದಿದ್ದನು. ಇದನ್ನು ನೋಡಿಯಂತು ರಾಮರಾಜನಿಗೆ ಬಹಳ ಸಮಾಧಾನವಾಯಿತು. ನಾನು ಸಂಪೂರ್ಣವಾಗಿ ಗೆದ್ದೆನೆಂದು ಆತನು ಸಂತೋಷಪಡಹತ್ತಿದನು. ರಣಮಸ್ತಖಾನನು ಹೀಗೆ ಪ್ರಸಿದ್ಧ ರೀತಿಯಿಂದ ತನ್ನನ್ನ ಕೂಡುವದಕ್ಕಿಂತ ಗುಪ್ತರೀತಿಯಿಂದ ತನಗೆ ಸಹಾಯ ಮಾಡುವದು ನೆಟ್ಟಗಾಗಬಹುದೆಂದು ಒಮ್ಮೆ ರಾಮರಾಜನು ಯೋಚಿಸಿದನು; ಆದರೆ ಗೌಪ್ಯವು ಬಹುದಿವಸ ಉಳಿಯಲಾರದೆಂತಲೂ, ರಣಮಸ್ತಖಾನನ ಸಹಾಯದಿಂದ ತನ್ನ ಸೈನ್ಯವನ್ನು ತಿದ್ದಬೇಕಾಗಿದ್ದಾಗ ಗೌಪ್ಯವು ಕೆಲಸದಲ್ಲವೆಂತಲೂ ಆತನು ತಿಳಿದು, ರಣಮಸ್ತಖಾನನ ಪತ್ರವನ್ನು ವಿಜಾಪುರದ ಬಾದಶಹನ ಕಡೆಗೆ ಕಳಿಸಿಬಿಟ್ಟನು. ಇನ್ನು ಮೇಲೆ ವಿಜಾಪುರ, ಗೋವಳಗೊಂಡ, ಅಹಮ್ಮದನಗರ ಈ ಮೂವರು ಬಾದಶಹರನ್ನು ಪೀಡಿಸಿ, ಅವರೆಲ್ಲ ಒಟ್ಟಾಗುವಂತೆ ಮಾಡಿ, ಒಟ್ಟಾಗಿ ತನ್ನ ಮೇಲೆ ಸಾಗಿಬಂದ ಅವರನ್ನು ಬಗ್ಗುಬಡಿಯಬೇಕೆಂದು ರಾಮರಾಜನು ನಿಶ್ಚಯಿಸಿದನು. ಹೀಗೆ ಮಾಡದಿದ್ರೆ ಮಸಲ್ಮಾನ ಬಾದಶಹರ ಸೊಕ್ಕು ಇಳಿಯದೆಂತಲೂ, ಅವರ ಸೊಕ್ಕು ಇಳಿಸುವ ಕಾರ್ಯದ ಅಸ್ತಿವಾರವನ್ನು ತಾನು ಬಹಳ ಚೆನ್ನಾಗಿ ಹಾಕಿದನೆಂತಲೂ ಆತನು ಆನಂದ ಪಡಹತ್ತಿದನು.

ಆದರೆ ಸಂಸಾರದಲ್ಲಿ ಪರಿಶುದ್ಧಾನಂದವು ಮನುಷ್ಯನಿಗೆ ದೊರೆಯುವದು ದುರ್ಲಭವೆಂತಲೇ ಹೇಳಬೇಕಾಗುವದು. ಆನಂದದ ಭರವು ಕುಗ್ಗಿದ ಮೇಲೆ ಆ ಆನಂದದಲ್ಲಿ ಚಿಂತೆ, ಶಂಕೆ ಮೊದಲಾದ ದುಃಖ ಬೀಜಗಳ ಮೊಳಕೆಯೊಡೆದದ್ದು