ಪುಟ:Kannadigara Karma Kathe.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೮

ಕನ್ನಡಿಗರ ಕರ್ಮಕಥೆ

ನೋಡಿದಾಗ ಆತನ ಆ ಸಂಶಯವು ಮತ್ತಷ್ಟು ದೃಢವಾಯಿತು. ಮುಂದೆ ತನ್ನ ಸೇವಕರ ಸಹಾಯದಿಂದ ಧನಮಲ್ಲನನ್ನು ಹಿಡತರಿಸಿ ವಿಚಾರಿಸಿದಾಗ ಆತನ ಸಂಶಯವು ನಿವಾರಣವಾಗಿ, ಮಾಸಾಹೇಬರೆನಿಸಿಕೊಳ್ಳುವವರು ತನ್ನ ಪ್ರಿಯ ಮೆಹರ್ಜಾನಳೇ ಎಂತಲೂ, ಲೈಲಿಯೆನಿಸಿ ಕೊಳ್ಳುವವಳು ಆಕೆಯ ದಾಸಿಯಾದ ಮಾರ್ಜಿನೆಯೆಂತಲೂ ಆತನು ನಿಶ್ಚಯಿಸಿದನು. ಆದರೆ ರಣಸಮಖಾನನು ಕುಂಜವನದಲ್ಲಿರುವವರೆಗೆ ಮೆಹೆರ್ಜಾನಳನ್ನು ಕಾಣಲಿಕ್ಕೆ ರಾಮರಾಜನಿಗೆ ಧೈರ್ಯವಾಗಿದ್ದಿಲ್ಲ. ಈ ದಿನ ರಣಮಸ್ತಖಾನನು ತನ್ನ ಕೈಯಲ್ಲಿ ಪೂರ್ಣವಾಗಿ ಸಿಕ್ಕು ಹೋಗಿರುವದರಿಂದ ಒಬ್ಬನೇ ಕುಂಜವನದಲ್ಲಿರುವ ಮೆಹರ್ಜಾನಳನ್ನು ಕಾಣುವದು ಸುಲಭವೆಂದು ಭಾವಿಸಿ, ಆತನು ಕುಂಜವನಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಮೆಹರ್ಜಾನಳನ್ನು ತಾನು ಕಂಡರೆ, ಆಕೆಯು ತನ್ನನ್ನು ಪ್ರೀತಿಸಬಹುದೊ, ನಿರಾಕರಿಸಬಹುದೋ ಎಂಬದು ರಾಮರಾಜನಿಗೆ ತಿಳಿಯದಾಯಿತು. ಮೆಹರ್ಜಾನಳಿಗೆ ತನ್ನ ಮೇಲೆ ಪ್ರೀತಿಯೇ ಇಲ್ಲದಿದ್ದರೆ ಆಕೆಯು ಇಷ್ಟು ವರ್ಷಗಳ ಮೇಲೆ ಮಗನನ್ನು ಕಟ್ಟಿಕೊಂಡು ಬಂದು ತಾನು ಮೊದಲು ಇರುತ್ತಿದ್ದ ಕುಂಜವನದಲ್ಲಿಯೇ ಬಂದು ಇರುತ್ತಿದ್ದಿಲ್ಲೆಂದು ಭಾವಿಸಿ, ಮೆಹರ್ಜಾನಳ ಪ್ರೇಮವು ತನ್ನ ಮೇಲೆ ಇರುವದೆಂದು ಆತನು ಕಲ್ಪಿಸಿದನು. ಹಾಗೆ ಪ್ರೇಮವಿದ್ದ ಪಕ್ಷದಲ್ಲಿ ಆಕೆಯು ಇಷ್ಟು ದಿವಸ ಯಾವದೊಂದು ನೆವದಿಂದ ಯಾಕೆ ತನ್ನನ್ನು ಕಂಡಿರಲಿಕ್ಕಿಲ್ಲೆಂದು ಶಂಕಿಸಿ, ತನ್ನ ಮೇಲೆ ಆಕೆಯ ಪ್ರೇಮವಿರುವದೋ ಇಲ್ಲವೋ ಎಂದು ಆತನು ಆತಂಕಪಟ್ಟನು. ತನ್ನ ಮಗನ ಮುಂದೆ ತನ್ನ ಚರಿತ್ರವನ್ನು ಹೇಳಲಿಕ್ಕೆ ಹೆದರಿ ಹೀಗೆ ಸುಮ್ಮನಿರಬಹುದಾದ್ದರಿಂದ, ಹೀಗೆ ತಾನು ಆಕೆಯ ಮಗನಿಲ್ಲದಾಗ ಹೋಗಿ ಮಾತಾಡಿಸಿ ಹೇಳಿಕೊಂಡರೆ, ಆಕೆಯು ಪ್ರಸನ್ನಳಾದರೂ ಆಗಬಹುದೆಂದು ಆತನು ಆಸೆಪಟ್ಟನು ಹೀಗೆ ವಿಚಾರ ಮಾಡುತ್ತಿರುವಾಗ ರಾಮರಾಜನಿಗೆ ಅಂದಿನ ರಾತ್ರಿ ನಿದ್ರೆಯು ಹತ್ತಿತು, ಮರುದಿನ ಬೆಳಗಾಗಲು ಅದೇ ವಿಚಾರಗಳು ಆತನ ಮನಸ್ಸಿನಲ್ಲಿ ಹುಟ್ಟಿ ಬಾಧಿಸಹತ್ತಿದವು. ಅಂದಿನ ರಾತ್ರಿ ಆತನು ಕುಂಜವನಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಸಂಗಡ ಯಾರನ್ನು ಕರಕೊಂಡು ಹೋಗಬೇಕೆಂದು ಆತನು ಆಲೋಚಿಸುತ್ತಿರಲು, ರಣಮಸ್ತಖಾನನು ಬಂದನೆಂದು ಸೇವಕನು ಅರಿಕೆ ಮಾಡಿಕೊಂಡನು. ಕೂಡಲೇ ರಾಮರಾಜನು ಆತನನ್ನು ಬರಮಾಡಿಕೊಳ್ಳಲು, ಅವರಿಬ್ಬರ ನಡುವೆ ಹಿತಗೋಷ್ಟಿ ಆರಂಭವಾಯಿತು.

ಈ ಹೊತ್ತಿನವರೆಗೆ ಇವರಿಬ್ಬರ ಭೆಟ್ಟಿಯು ಹಲವು ಸಾರೆ ಆಗಿತ್ತು ; ಆದರೆ ಇಂದಿನ ಭೆಟ್ಟಿಯಲ್ಲಿ ರಣಮಸ್ತಖಾನನನ್ನು ನೋಡಿ ರಾಮರಾಜನ