ಪುಟ:Kannadigara Karma Kathe.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೦

ಕನ್ನಡಿಗರ ಕರ್ಮಕಥೆ

ಆದರೆ ನಿಮಗೆ ನನ್ನನ್ನು ಕೂಡಿದ ಬಗ್ಗೆ ಪಶ್ಚಾತ್ತಾಪವಾಗುತ್ತಿದ್ದರೆ, ಮತ್ತು ಈತನ ಸಂಗತಿಯಿಂದ ನಾನು ಕೆಟ್ಟೆನೆಂದು ನೀವು ಭಾವಿಸುತ್ತಿದ್ದರೆ, ನನಗೆ ನೀವು ಸ್ಪಷ್ಟವಾಗಿ ಹೇಳಿರಿ; ಸಂಕೋಚಪಡಬೇಡಿರಿ. ನಿಮಗೆ ನಾನು ಯಾವ ಬಗೆಯ ಉಪದ್ರವವನ್ನೂ ಕೊಡುವದಿಲ್ಲ. ನಿಮ್ಮ ಮನಸ್ಸಿನೊಳಗಿನ ಆ ವಿಚಾರಗಳು ನಷ್ಟವಾಗುವವರೆಗೆ ಸ್ವಸ್ಥವಾಗಿ ಇರಬೇಕೆಂದು ನಾನು ನಿಮಗೆ ಹೇಳತಕ್ಕವನು.

ಈ ಮೇರೆಗೆ ರಾಮರಾಜನ ಹಾಗೂ ರಣಮಸ್ತಖಾನನ ಸಂಭಾಷಣಗಳಾದ ಬಳಿಕ ಕೆಲವು ಹೊತ್ತಿನ ಮೇಲೆ ರಣಮಸ್ತಖಾನನು ರಾಮರಾಜನ ಅಂಗರಕ್ಷಕನಾಗಲು ಒಪ್ಪಿಕೊಂಡು, ಆತನು ರಾಮರಾಜನನ್ನು ಕುರಿತು-ಮಹಾರಾಜರೇ, ನೀವು ಈಗ ನನಗೊಪ್ಪಿಸಿದ ಚಾಕರಿಯು ನನಗೆ ಬಹಳ ಸೇರುತ್ತದೆ; ಯಾಕೆಂದರೆ, ನಾನು ಅಂಗರಕ್ಷಕನಾಗಿರುವಾಗ ನಾನು ಮಾಡುವ ಕೆಲಸವು ಮಹಾರಾಜರ ಕಣ್ಣಿಗೆ ಬಿದ್ದಂತೆ, ಬೇರೆ ಯಾವ ಪ್ರಸಂಗದಲ್ಲಿಯೂ ನನ್ನ ಕೆಲಸವು ಕಣ್ಣಿಗೆ ಬೀಳಲಾರದು; ಆದರೆ ನಾನು ತಮ್ಮ ಕಡೆಗೆ ಬಂದಕೂಡಲೇ ನನ್ನನ್ನು ಹೀಗೆ ಅಂಗರಕ್ಷಕನಾಗಿ ನಿಯಮಿಸಿದರೆ, ನಿಮ್ಮ ಜನರು ಏನಂದಾರೆಂಬುದನ್ನು ತಾವು ವಿಚಾರ ಮಾಡತಕ್ಕದ್ದು. ನಾನು ಆರಂಭದಿಂದಲೇ ಅವರ ಕಣ್ಣಲ್ಲಿ ಒತ್ತುವದು ಸರಿಯಲ್ಲ ಎಷ್ಟಾದರೂ ನಾನು ಪಿತೂರಿಯಾಗಿ ಬಂದವನು; ಅಂದಬಳಿಕ ಒಮ್ಮೆಲೆ ಎಲ್ಲರು ನನ್ನ ಮೇಲೆ ಹ್ಯಾಗೆ ವಿಶ್ವಾಸವಿಟ್ಟಾರು? ಆದ್ದರಿಂದ ಕ್ರಮಕ್ರಮವಾಗಿ ನನ್ನನ್ನು ಈ ಕೆಲಸದಲ್ಲಿ ಯೋಜಿಸಬೇಕೆಂದು ನಾನು ಹೇಳಿಕೊಳ್ಳುವೆನು. ಸದ್ಯಕ್ಕೆ ನಾನು ನಿಮ್ಮ ಸೈನ್ಯದೊಳಗಿನ ಪಠಾಣ ಜನರ ಗುರುತು ಪರಿಚಯ ಮಾಡಿಕೊಳ್ಳುವೆನು. ಸೈನ್ಯದಲ್ಲಿ ಪಠಾಣರ ಸಂಖ್ಯೆಯು ಎಷ್ಟು ಇರುವದು? ಅವರ ವ್ಯವಸ್ಥೆಯು ಹ್ಯಾಗಿರವದು? ಅವರ ಗೊಣಗುಟ್ಟುವಿಕೆಯೂ, ತಕರಾರುಗಳೂ ಏನಾದರೂ ಇರುವವೋ ಹ್ಯಾಗೆ? ಅವರು ಬಹುದಿವಸ ಕೆಲಸವಿಲ್ಲದೆ ಕುಳಿತುಕೊಂಡಿರುವದರಿಂದ ಅವರಲ್ಲಿ ಆಲಸ್ಯವೂ, ಕೂಳಬಾಕತನವೂ ಸೇರಿರುವವೋ ಹ್ಯಾಗೆ? ಇವನ್ನು ಮೊದಲು ನಾನು ಪರೀಕ್ಷಿಸುವೆನು. ಬೇರೆ ನೌಕರರಂತೆ ನಾನು ದಿನಾಲು ಮಾಡಿದ ಕೆಲಸವನ್ನು ಹೇಳಲಿಕ್ಕೆ ತಮ್ಮ ಬಳಿಗೆ ಬರುತ್ತ ಹೋಗುವೆನು. ಹೀಗೆ ನಾನು ಬರುತ್ತಿರುವಾಗ ಮೆಲ್ಲಮೆಲ್ಲನೆ ನನ್ನನ್ನು ಏರಿಸುತ್ತ ಕಡೆಗೆ ಈ ಕೆಲಸವನ್ನು ಕೊಟ್ಟರೆ ನೆಟ್ಟಗಾಗುವುದು, ಇದರ ಮೇಲೆ ತಮ್ಮ ಅಪ್ಪಣೆಯಂತೆ ನಾನು ನಡೆದುಕೊಳ್ಳಲು ಸಿದ್ಧನಾಗಿರುವೆಂದು ನಾನು ಆಡಿತೋರಿಸುವ ಕಾರಣವಿಲ್ಲ ಎಂದು ಹೇಳಿದನು. ರಾಮರಾಜನು ರಣಮಸ್ತಖಾನನ ಈ ಮಾತುಗಳನ್ನು ಕೇಳಿ ಕೌತುಕಪಟ್ಟನು. ಈತನು