ಪುಟ:Kannadigara Karma Kathe.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿಗ್ಗರದ ಉತ್ತರ

೨೩೧

ಸಾವಿರಾರು ಜನರ ಪ್ರಾಣವನ್ನು ಉಳಿಸುವದು ನ್ಯಾಯವು. ಇನ್ನು ವಿಜಾಪುರದ ಬಾದಶಹನಿಗಾಗಲಿ, ಬೇರೆ ಇಬ್ಬರು ಬಾದಶಹರಿಗಾಗಲಿ, ಆ ಮೂವರು ಒಟ್ಟುಗೂಡಿದ್ದರಿಂದಾಗಲಿ, ನೀವು ಅಂಜುವಿರೆಂದು ನಾನು ಹೇಳುವದಿಲ್ಲ. ಇನ್ನಿಬ್ಬರು ಬಾದಶಹರು ಒಟ್ಟುಗೂಡಿ ಬಂದರೂ ಅವರೆಲ್ಲರನ್ನು ಮುರಿಯುವದಕ್ಕೆ ನೀವು ಸಮರ್ಥರಿರುತ್ತೀರಿ, ಆ ಐವರೂ ಬಾದಶಹರು ಒಟ್ಟುಗೂಡಿ ನಾಲ್ಕು ಕಡೆಯಿಂದ ನಿಮ್ಮ ಮೇಲೆ ಏರಿಬಂದರೂ ಅವರೆಲ್ಲರನ್ನು ಗೊತ್ತಿಗೆ ಹಚ್ಚುವಷ್ಟು ಸೈನ್ಯದ ಸಿದ್ಧತೆಯು ನಿಮ್ಮಲ್ಲಿರುತ್ತದೆ. ನೀವು ಎಳ್ಳಷ್ಟು ಹೆದರುವ ಕಾರಣವಿಲ್ಲ. ನಿಮ್ಮ ಸೈನ್ಯವು ಸಂಪೂರ್ಣ ಸಿದ್ಧವಾಗಿರುವದೆಂಬದರಲ್ಲೇನೂ ಸಂಶಯವಿಲ್ಲ. ಇದಲ್ಲದೆ, ನಮ್ಮ ವಿಜಾಪುರದ ಸೈನ್ಯದಲ್ಲಿಯ ದೋಷಗಳು ನನಗೆ ಗೊತ್ತಿರುವದರಿಂದ, ಯಾವ ಕಾಲಕ್ಕೆ ಹ್ಯಾಗೆ ಅದನ್ನು ಎದುರಿಸಬೇಕು. ಯಾವ ಸ್ಥಳದಲ್ಲಿ ಹೇಗೆ ಅದನ್ನು ಹೊಡೆಯಬೇಕು ಎಂಬುದರ ಮರ್ಮವು ನನಗೆ ಗೊತ್ತಿರುತ್ತದೆ. ಹೀಗೆ ಮರ್ಮವರಿತು ಯುದ್ಧಮಾಡಿದರೆ, ಮೂವರು ಬಾದಶಹರೇ ಯಾಕೆ, ಐವರು, ಏಳುಮಂದಿ ಬಾದಶಹರು ಒಟ್ಟುಗೂಡಿ ಬಂದರೂ ಆಗುವದೆನು ? ಆದರೆ ನನ್ನನ್ನು ಬಾದಶಹರಿಗೆ ಒಪ್ಪಿಸುವದರಿಂದ ಎಲ್ಲ ಸಂಕಟಗಳ ನಿವಾರಣವಾಗುತ್ತಿದ್ದರೆ. ನೀವಾದರೂ ಯಾಕೆ ಆಗ್ರಹ ಮಾಡಬೇಕು ? ತಮ್ಮ ಸಲುವಾಗಿ ನಾನು ಮಾಡಬೇಕಾಗಿರುವ ಕೆಲಸವನ್ನು ಮಾಡಿಬಿಟ್ಟಿರುವೆನು. ಇನ್ನು ನಾನು ಹೋದರೂ...........

ಈ ಮೇರೆಗೆ ರಣಮಸ್ತಖಾನನು ನುಡಿಯುತ್ತಿರಲು, ರಾಮರಾಜನು ಆತನನ್ನು ಮುಂದಕ್ಕೆ ಮಾತನಾಡಗೊಡದೆ- “ನೀವು ಹೀಗೆ ಮಾತನಾಡಬೇಕೆಂದು ನಾನು ನಿಮ್ಮನ್ನು ಕರೆಸಿ ಪತ್ರವನ್ನು ಓದಗೊಟ್ಟಿರುವದಿಲ್ಲ. ಒಂದು ಮೋಜಿನ ಕಾಗದವೆಂದು ನಿಮ್ಮನ್ನು ಕರೆಸಿ ಪತ್ರವನ್ನು ತೋರಿಸಿದೆನು. ಏನಾದರೂ ಉತ್ತರವನ್ನು ಬರೆದು ಕಳಿಸೇನು, ಇಲ್ಲದಿದ್ದರೆ ಉತ್ತರವನ್ನೇ ಕಳಿಸಲಿಕ್ಕಿಲ್ಲ. ಪತ್ರ ತಂದವನನ್ನು ಪ್ರತಿಬಂಧದಲ್ಲಿರಿಸಿಬಿಟ್ಟೇನು, ನಿಮ್ಮಂಥವರನ್ನು ಬಾದಶಹನಿಗೆ ಒಪ್ಪಿಸುವದು ವಿಶ್ವಾಸಘಾತದ ಲಕ್ಷಣವಾಗಿರುತ್ತದೆ. ಬೆನ್ನುಬಿದ್ದವನನ್ನು ಹೊಟ್ಟೆಯ ಮಕ್ಕಳಂತೆ ನೋಡುವದು ನಮ್ಮ ಹಿಂದೂ ಜನರ ಶೀಲವಾಗಿರುವದು; ಇನ್ನು ಮೇಲೆ ಇಂಥ ಮಾತುಗಳನ್ನು ನೀವು ಆಡಲಾಗದು. ನಿಮ್ಮನ್ನು ನಾವು ನಮ್ಮವರೆಂದು ತಿಳಿದಿದ್ದೇವೆ” ಎಂದು ನುಡಿಯುತ್ತಿರಲು, ರಾಮರಾಜನಲ್ಲಿ ರಣಮಸ್ತನ ವಿಷಯವಾಗಿ ಪುತ್ರಪ್ರೇಮವು ಉಕ್ಕಿಬರಲು, ಆತನು ರಣಮಸ್ತಖಾನನ ಎರಡು ಭುಜಗಳ ಮೇಲೆ ತನ್ನ ಕೈಗಳನಿಟ್ಟು ಅತ್ಯಂತ ವಾತ್ಸಲ್ಯದಿಂದ-ರಣಮಸ್ತ, ಯಾವ