ಪುಟ:Kannadigara Karma Kathe.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಸ್ವಚ್ಚಂದವೃತ್ತಿಯು

೨೩೭

ಹೋಗುತ್ತಿದ್ದವು; ಆದರೆ ದುರ್ದೈವದಿಂದ ಹಾಗಾಗಲಿಲ್ಲ. ಆತನನ್ನು ಉನ್ಮತ್ತತನವು ಸಂಪೂರ್ಣವಾಗಿ ಮುಸುಕಿಬಿಟ್ಟಿತು. ತನ್ನ ವಿರುದ್ದವಾಗಿ ಮೂವರು ನಾಲ್ವರು ಬಾದಶಹರು ಒಟ್ಟಾಗುತ್ತಿರುವರೆಂಬ ಸುದ್ದಿಯು ಆತನಿಗೆ ಗೊತ್ತಾಗಿದ್ದರು, ಅದರ ಮಹತ್ವವು ಆತನಿಗೆ ಅರಿವಾದಂತೆ ತೋರಲಿಲ್ಲ. ಹದಿನೆಂಟು ಮಂದಿ ಬಾದಶಹರು ಒಟ್ಟಾದರೇನಾಯಿತು ? ಅವರೆಲ್ಲರ ಮಗ್ಗಲು ಮುರಿಯೋಣವೆಂದು ಆತನು ಭಾವಿಸಹತ್ತಿದನು. ಹೀಗೆ ಬರಿಯ ಭಾವಿಸುತ್ತಿದ್ದನೆಂಬುದಿಷ್ಟೇ ಅಲ್ಲ, ಇಂಥ ಪ್ರಸಂಗವು ಒಮ್ಮೆ ಬಂದು ಹೋಗಲೆಂದು ಆತನು ಇಚ್ಚಿಸಹತ್ತಿದನು ! ಹೀಗೆ ಈ ಎಲ್ಲ ಬಾದಶಹರ ಎಲಬು ದುಂಡಗೆ ಮಾಡಿದೆನೆಂದರೆ, ಮುಂದೆ ಉತ್ತರದ ಕಡೆಗೆ ಸಹ ತನ್ನ ರಾಜ್ಯವನ್ನು ಹಬ್ಬಿಸಲಿಕ್ಕೆ ಪ್ರತಿಬಂಧವಾಗದೆಂದು ಆತನು ತಿಳದಿದ್ದನು.

ರಾಮರಾಜನ ಈ ವಿಚಾರವು ಅಯೋಗ್ಯವಾದದ್ದೆಂದು ಹೇಳುವ ಹಾಗಿದ್ದಿಲ್ಲ. ಒಂದು ದೃಷ್ಟಿಯಿಂದ ಅದು ಯೋಗ್ಯವಾದದ್ದಾಗಿತ್ತು; ಆದರೆ ತನ್ನ ಸಾಮರ್ಥ್ಯದ ವಿಷಯವಾಗಿ ಇದ್ದ ಆತನ ವಿಶ್ವಾಸವು ಇರುವಷ್ಟಕ್ಕಿಂತ ಬಹಳ ಹೆಚ್ಚು ಇತ್ತು. ಆತನ ಸೈನ್ಯವು ಬಹು ಪ್ರಚಂಡವಾದದ್ದೆಂಬುದೇನೋ ನಿಜ, ಆದರೆ ಆ ಸೈನ್ಯದಲ್ಲಿ ಈಗ ವ್ಯವಸ್ಥೆಯಿದ್ದಿಲ್ಲ. ಸೈನಿಕರು ಸೋಮಾರಿಗಳೂ, ಡಾಂಭಿಕರೂ ಚಕ್ಕಂದಕ್ಕೆ ಮೆಚ್ಚಿದವರೂ ಆಗಿದ್ದರು. ಈ ಸ್ಥಿತಿಯ ಜ್ಞಾನವು ರಾಮರಾಜನಿಗೆ ಆಗಿದ್ದಿಲ್ಲ. ತಾರುಣ್ಯದಲ್ಲಿಯು ಸಾಮರ್ಥ್ಯದ ಯೋಗದಿಂದ ಬಹು ದಿವಸಗಳವರೆಗೆ ವಿಜಯವನ್ನು ಸಂಪಾದಿಸುತ್ತ ಬಂದಿದ್ದ ಒಬ್ಬಾನೊಬ್ಬ ವೃದ್ದನು, ಮೊದಲಿನಂತೆ ಈಗಲಾದರೂ ತನ್ನ ಶರೀರ ಸಾಮರ್ಥ್ಯದ ಸಹಾಯದಿಂದ ಜಯವನ್ನು ಸಂಪಾದಿಸುವೆನೆಂದು ವಿಶ್ವಾಸವಿಡುವಂತೆ ರಾಮರಾಜನ ಸ್ಥಿತಿಯು ಆಗಿತ್ತು. ವಿಜಯನಗರದ ರಾಜ್ಯವು ಸ್ಥಾಪಿಸಲ್ಪಟ್ಟು ಎರಡೂವರೇ ನೂರು ವರ್ಷಗಳು ಆಗುತ್ತ ಬಂದಿದ್ದವು. ಇಷ್ಟು ದಿವಸ ಅದು ಮುಸಲ್ಮಾನರ ಅಬ್ಬರಕ್ಕೆ ಸೊಪ್ಪುಹಾಕದೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಭರದಿಂದ ಬೆಳೆಯುತ್ತ ಬಂದಿತ್ತು ಆದರೆ ಸೃಷ್ಟಿಕ್ರಮವಿಡಿದು ಬಹುದಿವಸ ಅವಾಡವ್ಯವಾಗಿ ಬೆಳೆದವೃಕ್ಷವೂ ಒಳಗಿಂದೊಳಗೆ ಟೊಕಳಿಹಾಯುವಂತೆ ದಕ್ಷಿಣದಲ್ಲಿ ಇಷ್ಟುವರ್ಷ ವಿಸ್ತರಿಸಿದ್ದ ವಿಜಯನಗರದ ರಾಜ್ಯವು ಒಳಗಿಂದೊಳಗೆ ಶಿಥಿಲವಾಗಿತ್ತೆಂದು ಹೇಳಬಹುದು. ದೊಡ್ಡ ವೃಕ್ಷದ ನೆರಳೆಂದು ಬಹುಜನರು ಆಶ್ರಯಿಸಿದ್ದರೂ, ಗಿಡವು ಬಿರುಗಾಳಿಯಿಂದ ಬೀಳುವಾಗ ಗಿಡದ ಬುಡದಲ್ಲಿರುವವರು ತಪ್ಪಿಸಿಕೊಂಡು ಹೋಗುವಂತೆ, ವಿಜಯನಗರದ ದಂಡಿನಲ್ಲಿ ಸೇರಿಕೊಂಡಿದ್ದ ಜನರಲ್ಲಿ ಪ್ರಸಂಗದೊಳಗೆ ಕಾಲುವೆಗೆಯುವವರೇ