ಪುಟ:Kannadigara Karma Kathe.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಸ್ವಚ್ಚಂದವೃತ್ತಿಯು

೨೩೯

ಮಾಡಲಿ. ಈ ಬಾದಶಹನು ಆ ಬಾದಶಹನ ಮಗಳನ್ನು ಲಗ್ನಮಾಡಿಕೊಂಡರೆ, ಆ ಬಾದಶಹನು ಈ ಬಾದಶಹನ ಮಗನಿಗೆ ತನ್ನ ತಂಗಿಯನ್ನು ಕೊಟ್ಟರೆ. ಸೈನ್ಯದ ಸಾಮರ್ಥ್ಯ ಹೆಚ್ಚಿದ ಹಾಗಾಗುವದೊ ? ಆ ಮಕ್ಕಳಿಗೆ ಮಾಡಬೇಕಾಗಿದ್ದ ಒಕ್ಕಟ್ಟನ್ನು ಗಟ್ಟಿ ಮುಟ್ಟಿಯಾಗಿ ಮಾಡಿಕೊಂಡು ಒಮ್ಮೆಲೆ ಜಿಟ್ಟಿಯ ಹಿಂಡಿನಂತೆ ನಮ್ಮ ಮೇಲೆ ಸಾಗಿಬರಬೇಕೆಂದು ಹೇಳಬೇಕು. ವಿಜಯನಗರದ ರಾಯರನ್ನು ಕೆಣಕುವದು ಅವರಿಗೆ ಸುಲಭವಾಗಿ ಕಂಡಿತೆ; ಆದರೆ ಕೆಣಕಿ ನೋಡಲಿ, ಜಟ್ಟಿಗಳ ಹಿಂಡು ಬೆಂಕಿಯಲ್ಲಿ ಪಟಪಟ ಬಿದ್ದು ನಾಶವಾಗುವಂತೆ, ಅವರ ನಾಶವಾಗಬೇಕಾದೀತು” ಎಂದು ದರ್ಬಾರದ ಜನರ ಸಮಕ್ಷಮ ನುಡಿದು, ಅವರಿಂದ- “ಮಹಾಪ್ರಭೋ, ಹೌದು ಆ ಮುಸಲರ ಗತಿಯು ಹೀಗೆಯೇ ಆಗಬೇಕೆಂದು ಈಶ್ವರೀಸಂಕೇತವಿರುತ್ತದೆ. ಅಂತೇ ಅವರಿಗೆ ಅಂಥ ಬುದ್ದಿಯು ಉತ್ಪನ್ನವಾಗಿರುವದು, ಆಗಲಿ, ಒಮ್ಮೆ ಈ ಎಲ್ಲ ಮಹಮದೀಯರ ಉಚ್ಛೇದವಾಗಿ ಹೋಗಲಿ. ಅಂದರೆ, ಭರತಖಂಡದಲ್ಲಿ ಸರ್ವತ್ರ ವೈದಿಕ ಧರ್ಮದ ಪ್ರಸಾರವಾಗುವದು” ಎಂದು ಹೊಗಳಿಸಿಕೊಳ್ಳುವದರಲ್ಲಿಯೇ ಆ ರಾಯನ ಕಾಲಹರಣವಾಗಹತ್ತಿತು.

ಇದಕ್ಕೆ ವಿರುದ್ಧವಾದ ಸ್ಥಿತಿಯು ಮುಸಲ್ಮಾನ ಬಾದಶಹರಲಿತ್ತು. ವಿಜಾಪುರದ ಆದಿಲಶಹನು ಈಗ ಬಹು ದಿವಸಗಳಿಂದ ನಡೆಸಿದ್ದ ಕಪಟೋಪಾಯಗಳಿಂದ ಆತನೊಬ್ಬನೇ ವಿಜಯನಗರದ ರಾಜ್ಯವನ್ನು ಗೊತ್ತಿಗೆ ಹಚ್ಚಬಹುದಾಗಿತ್ತು. ಆದರೂ ಆತನು ಧೂರ್ತತ್ವದಿಂದ ಅಹಮ್ಮದನಗರ-ಗೋವಳಕೊಂಡಗಳ ಬಾದಶಹರ ಸಂಗಡ ಒಕ್ಕಟ್ಟು ಬೆಳೆಸಿದನು. ವಿಜಯನಗರದ ದಂಡಿನವರ ಹುಳುಕು ಬಾದಶಹನಿಗೆ ಗೊತ್ತಿದ್ದರೂ, ಆ ಪ್ರಚಂಡ ಸೈನ್ಯದಿಂದ ಎಲ್ಲಿಯಾದರೂ ತನಗೆ ಅಪಾಯ ಉಂಟಾದರೆ, ತನ್ನ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲೆಂದು ಆತನು ಜಾಗರೂಕನಾಗಿದ್ದನು. ತಾವು ಮೂವರೂ ಒಕ್ಕಟ್ಟಾಗಿಯೇ ಹಿಂದುಗಳ ಪ್ರಚಂಡ ರಾಜ್ಯವನ್ನು ನಾಶಮಾಡಬೇಕೆಂದು ಆತನು ನಿಶ್ಚಯಿಸಿದನು. ಪರಸ್ಪರರಲ್ಲಿ ವಿಶ್ವಾಸವು ಉತ್ಪನ್ನವಾಗುವದಕ್ಕಾಗಿ ಅಹಮ್ಮದನಗರದ ಹುಸೇನ ನಿಜಾಮಶಹನು, ತನ್ನ ಮಗಳಾದ ಚಾಂದಬೀಬಿ ಎಂಬವಳನ್ನು ವಿಜಾಪುರದ ಅಲಿ ಆದಿಲಶಹನಿಗೆ ಲಗ್ನಮಾಡಿಕೊಟ್ಟನು. ಅಲಿ ಆದಿಲಶಹನು ತನ್ನ ತಂಗಿಯನ್ನು ಹುಸೇನ ನಿಜಾಮಶಹನ ಮಗನಿಗೆ ಲಗ್ನಮಾಡಿ ಕೊಟ್ಟನು. ಈ ಎಲ್ಲ ಸಂಬಂಧಗಳು ಕೇವಲ ರಾಜಕಾರಣದ ಸಲುವಾಗಿಯೇ ಆದವು. ಈ ಲಗ್ನ ಸಮಾರಂಭದ ನೆವದಿಂದ ಇವರ ವಕೀಲರು ಅವರ ಕಡೆಗೆ, ಅವರ ವಕೀಲರು ಇವರ ಕಡೆಗೆ ಎಡತಾಕಹತ್ತಿದರು. ಅವರ