ಪುಟ:Kannadigara Karma Kathe.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೦

ಕನ್ನಡಿಗರ ಕರ್ಮಕಥೆ

ಆಲೋಚನೆಗಳು ಮುಗಿದವು. ಬೀದರದ ಬಾದಶಹನೆಂಬ ನಾಲ್ಕನೆಯ ಬಾದಶಹನೂ ಅವರನ್ನು ಬಂದು ಕೂಡಿದನು. ಎಲ್ಲರೂ ತಮ್ಮ ತಮ್ಮ ಸೈನ್ಯಗಳನ್ನು ತಕ್ಕೊಂಡು ವಿಜಾಪುರಕ್ಕೆ ಬರಬೇಕೆಂತಲೂ ಇಂಥ ಇಂಥವರು ಇಂಥ ಇಂಥ ಕಡೆಯಿಂದ ಸಾಗಿ ಹೋಗಬೇಕೆಂತಲೂ ಆಲೋಚನೆಗಳು ಆಗಹತ್ತಿದವು. ಇತ್ತ ರಾಮರಾಜನನ್ನು ವಿಚಾರಮಗ್ನನನ್ನಾಗಿ ಮಾಡುವುದಕ್ಕಾಗಿ ವಿಜಾಪುರದ ಬಾದಶಹನು ರಣಮಸ್ತ ಖಾನನನ್ನು ಕಳಿಸಿಕೊಡುವ ನೆವದಿಂದ ಪತ್ರಗಳನ್ನು ಓಡಾಡಿಸಹತ್ತಿದನು. ರಣಮಸ್ತಖಾನನನ್ನು ಕಳಿಸುವದಿಲ್ಲೆಂದು ರಾಮರಾಜನು ಉತ್ತರವನ್ನು ಕಳಿಸಿದ ಬಳಿಕ, ಬಾದಶಹನು ಮತ್ತೆ ತನ್ನ ವಕೀಲನನ್ನು ಕಳಿಸಿ ವಿಜಯನಗರದ ರಾಜ್ಯದ ಹದ್ದಿನಲ್ಲಿರುವ ಕೆಲವು ಕೋಟೆಗಳನ್ನು ಕೊಡಬೇಕೆಂದು ರಾಮರಾಜನನ್ನು ಕೇಳಿದನು. ತನ್ನ ವಕೀಲನನು ಅಪಮಾನಗೊಳಿಸಿ ಕಳಿಸಿಕೊಡಬೇಕೆಂತಲೇ ಬಾದಶಹನು ಹೀಗೆ ರಾಮರಾಜನ ಬಳಿಗೆ ವಕೀಲನನ್ನು ಕಳಿಸಿ ಕೊಟ್ಟಿದ್ದನು. ಯಾಕೆಂದರೆ, ಒಡಂಬಡಿಕೆಯ ಕರಾರುಗಳನ್ನು ಮುರಿಯುಲಿಕ್ಕೆ ರಾಮರಾಜನಿಂದ ಕೆಲವು ಕಾರಣಗಳು ಒದಗಿದವೆಂದು ತೋರಿಸುವದು ಬಾದಶಹನ ಉದ್ದೇಶವಾಗಿತ್ತು.

ಸಂಕಟಗಳು ಒದಗಬಹುದೆಂಬ ಸಂಶಯವಿರುವ ವರೆಗೆ ರಾಮರಾಜನು ಯಾವ ಲಕ್ಷ್ಯವಿಲ್ಲದವನಂತೆ ವರ್ತಿಸಿದನು; ಆದರೆ ಶತ್ರುಗಳ ಸೈನ್ಯಗಳು ವಿಜಾಪುರದಲ್ಲಿ ಒಟ್ಟುಗೂಡಿದವೆಂಬದನ್ನು ಕೇಳಿದ ಕೂಡಲೆ ಎಚ್ಚತ್ತು ತನ್ನ ಸೈನ್ಯವನ್ನು ವ್ಯವಸ್ಥೆಗೊಳಿಸಹತ್ತಿದನು. ಶತ್ರುಗಳ ಪ್ರಚಂಡ ಸೈನ್ಯದ ಮುಂದೆ ತನ್ನ ಸೈನ್ಯವು ತಡೆಯಲಿಕ್ಕಿಲ್ಲೆಂದು ಆತನಿಗೆ ತೋರಹತ್ತಿತು. ಅವನು ಈ ಪ್ರಸಂಗದಲ್ಲಿ ತಾನು ಕೈಕಾಲಗೆಡುವದು ಯೋಗ್ಯವಲ್ಲೆಂದು ತಿಳಿದು, ತುಂಗಭದ್ರೆಯ ಕಾಳಹೊಳೆಯಿರುವ ಕಡೆಯಿಂದ ಶತ್ರುಗಳು ಬಾರದಂತೆ ಮಾಡಿ, ಪ್ರಸಂಗ ನೋಡಿ ತಾನು ತುಂಗಭದ್ರೆಯನ್ನು ಆ ಮಾರ್ಗದಿಂದ ದಾಟಿಹೋಗಿ, ಶತ್ರುಗಳ ಮೇಲೆ ಬೀಳಬೇಕೆಂದು ಮಾಡಿದನು. ಈ ಕೆಲಸಕ್ಕಾಗಿ ತಿರುಮಲನನ್ನು ನಿಯಮಿಸಿದನು. ವೆಂಕಟಾದ್ರಿ, ಇಳೋತ್ತಮ ರಾಯರೆಂಬವರ ಕೈಯಲ್ಲಿ ದೊಡ್ಡ ದೊಡ್ಡ ಸೈನ್ಯಗಳನ್ನು ಕೊಟ್ಟು ಬೇರೆ ಬೇರೆ ಕಡೆಯಲ್ಲಿ ಶತ್ರುಗಳನ್ನು ತರಬಲು ನಿಯಮಿಸಿದನು. ತಾನು ಸ್ವತಃ ಮಧ್ಯಭಾಗದಲ್ಲಿದ್ದು, ತನ್ನ ಸಂರಕ್ಷಣಕ್ಕಾಗಿ ರಣಮಸ್ತಖಾನನಿಂದ ನಡೆಸಲ್ಪಡುತ್ತಿರುವ ಪಠಾಣ ಸೈನ್ಯವನ್ನು ಇಟ್ಟುಕೊಳ್ಳಬೇಕೆಂದು ಮಾಡಿದನು. ರಾಮರಾಜನು ರಣಮಸ್ತಖಾನನನ್ನು ಬೇರೆ ಕಡೆಗೆ ಕಳಿಸಲಿಲ್ಲ. ಪ್ರಸಂಗದಲ್ಲಿ ಈ ಸ್ವಾಮಿದ್ರೋಹಿಯಾದ ರಣಮಸ್ತನೇ ಬಾದಶಹನ ಮೇಲಿನ ಸಿಟ್ಟಿನಿಂದ ತನಗೆ