ಪುಟ:Kannadigara Karma Kathe.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶಾಭಂಗ

೨೪೯

ಇದನ್ನು ಆಕೆಯು ಮಾತಾಡತಕ್ಕವಳು, ಅಷ್ಟರಲ್ಲಿ ರಾಮರಾಜನು- “ಮಾರ್ಜೀನೆ. ನಿನ್ನ ಒಡೆಯಳು ಎಷ್ಟು ನಿಷ್ಠುರಳು! ಆಕೆಗೆ ನಿಜವಾದ ಪ್ರೇಮದ ಗುರುತೇ ಇದ್ದಂತೆ ತೋರುವದಿಲ್ಲ. ಒಂದು ಕಾರ್ಯದ ನಿಮಿತ್ತದಿಂದ ನಾನು ಮಾಡಿದ ಕಡ್ಡಿಯಷ್ಟು ತಪ್ಪನ್ನೇ ಗುಡ್ಡದಷ್ಟು ಮಾಡಿ ಆಕೆಯು ನಿರ್ದಯಳಾದಳು. ನನ್ನಿಂದಾದ ಉಪಕಾರವನ್ನೆಲ್ಲ ಮರೆತು, ನನಗೆ ಆಗದವಳಂತೆ ಆಕೆಯು ಒಮ್ಮೆಲೆ ಹೊರಟುಹೋಗಿಬಿಟ್ಟಳು, ಎಂದು ನುಡಿದನು. ಈ ಮಾತುಗಳು ಲೈಲಿಯ ಮನಸ್ಸನ್ನು ತಿರುಗಿಸಿದವು. ರಾಮರಾಜನು ತನ್ನ ಒಡೆಯಳಿಗೆ ನಿಷ್ಣುರಳೂ, ಪ್ರೇಮರಹಿತಳೂ, ನಿರ್ದಯಳೂ ಎಂದು ಹೆಸರಿಟ್ಟಿದ್ದು ಮಾರ್ಜಿನೆಯ ಮನಸ್ಸಿಗೆ ಸರಿಬರಲಿಲ್ಲ. ಅತ್ಯಂತ ಪ್ರೇಮಲ ಸ್ವಭಾವದ ತನ್ನ ಪ್ರಿಯ ಮೆಹೆರಜಾನಳು, ತನ್ನ ಕುಲಶೀಲಗಳನ್ನೂ, ಆಸ್ತೇಷ್ಟರನ್ನೂ ಲಕ್ಷಿಸದೆ, ಸರ್ವಸ್ವವನ್ನು ಈತನಿಗೆ ಒಪ್ಪಿಸಿ, ತನ್ನ ಕುತ್ತಿಗೆಯನ್ನು ಈತನ ಕೈಯಲ್ಲಿ ಕೊಟ್ಟಿರುವಾಗ, ಈತನೇ ನಿಷ್ಠುರತನದಿಂದ ಮೆಹೆರಜಾನಳ ಕುತ್ತಿಗೆಯನ್ನು ಕೊಯ್ದಿರಲು, ತಿರುಗಿ ಮೆಹೆರಜಾನಳನ್ನೇ ಈತನು ಹಳಿಯುತ್ತಾನಲ್ಲ, ಎಂದು ಆಕೆಯು ರಾಮರಾಜನ ಮೇಲೆ ಸಿಟ್ಟಾದಳು. ನಿಜವಾದ ವೃತ್ತಾಂತವನ್ನು ಈತನ ಮುಂದೆ ಹೇಳುವದಂತು ಇರಲಿ, ಈತನಿಗೆ ನಮ್ಮ ಗುರುತು ಕೂಡ ಹತ್ತಗೊಡಬಾರದೆಂದು ತಿಳಿದು, ಆಕೆಯು ಸುಮ್ಮನೆ ನಿಂತು ಕೊಂಡು ಬಿಟ್ಟಳು. ತಾನು ಇಷ್ಟು ದೈನ್ಯದಿಂದ ಹೇಳಿಕೊಂಡರೂ, ಕಣ್ಣೀರು ಹಾಕಿದರೂ ಮಾರ್ಜಿನೆಗೆ ದಯ ಹುಟ್ಟಲಿಲ್ಲೆಂದು ತಿಳಿದು, ರಾಮರಾಜನು ಸ್ವಲ್ಪ ತ್ರಾಸಗೊಂಡು ಮಾರ್ಜಿನೆಗೆ - ಯಾಕೆ ? ಸುಮ್ಮನೆ ನಿಂತೆ ? ಮಾತಾಡುವದಿಲ್ಲವೇನು? ನಾನೇನು ಕಲ್ಲಿನಮುಂದೆ ಮಾತಾಡುತ್ತಿರುವೆನೋ ? ಮಾತಾಡು, ಹೇಳು, ನಾನು ಕೇಳಿದ್ದನ್ನೆಲ್ಲ ಹೇಳು, ಎಂದು ಕೇಳಿದನು. ಅದಕ್ಕೆ ಮಾರ್ಜಿನೆಯು ತಟ್ಟನೆ ರಾಮರಾಜನನ್ನು ಕುರಿತು

ಮಾರ್ಜಿನೆ-ಏನು ಹೇಳಲಿ ? ನೀವು ಏನು ಕೇಳುತ್ತೀರೆಂಬದೇ ನನಗೆ ತಿಳಿಯಲೊಲ್ಲದು, ಅಂದಬಳಿಕ ಅದರ ಉತ್ತರವನ್ನು ನಾನು ಹ್ಯಾಗೆ ಕೊಡಬೇಕು?

ರಾಮರಾಜ- ನಿನಗೆ ತಿಳಿಯಲೊಲ್ಲದೊ ? ನಾನು ಏನು ಕೇಳುತ್ತೇನೆಂಬುದು ನಿನಗೆ ತಿಳಿಯಿಲ್ಲದೆ ಮಾರ್ಜಿನೆ, ನನಗೆ ಉಳಿದದ್ದನ್ನೇನೂ ಹೇಳಬೇಡ, ಒಂದೇಮಾತು ಹೇಳು. ಈ ರಣಮಸ್ತಖಾನನು ಅವನೇ ಏನು ? ನೀವು ಇಲ್ಲಿಂದ ಹೋದಬಳಿಕ ಈತನು ಎಷ್ಟು ದಿನಗಳ ಮೇಲೆ, ಎಲ್ಲಿ ಹುಟ್ಟಿದನು ? ಎಂದು ನುಡಿಯುತ್ತಿರಲು, ಮಾರ್ಜಿನೆಯು ನಡುವೇ ಬಾಯಿ ಹಾಕಿ