ಪುಟ:Kannadigara Karma Kathe.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೮

ಕನ್ನಡಿಗರ ಕರ್ಮಕಥೆ

ಕಾರಾಗೃಹವಾಸವು ಅತ್ಯಂತ ದುಸ್ಸಹವಾಗಿರುವದು. ನನ್ನನ್ನು ಬಂಧನದಿಂದ ಮುಕ್ತಳನ್ನಾಗಿಯಾದರೂ ಮಾಡು. ಇಲ್ಲವೆ ಇದೇ ಈ ನಿನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಹಿಚಿಕಿ ನನ್ನ ಹೆಣವನ್ನು ಈ ಪುಷ್ಕರಣಿಯಲ್ಲಿ ಚಲ್ಲಿಯಾದರೂ ಬಿಡು. ನನಗೆ ಈ ಕಾರಾಗೃಹವಾಸವು ಸಾಕು. ಯಾಕೆ, ಮಾತಾಡು, ಏನು ಮಾಡುತ್ತೀಯೆಂಬದನ್ನು ಸ್ಪಷ್ಟವಾಗಿ ಹೇಳು, ಎಂದು ನುಡಿದು ಆಕೆಯು ತನ್ನ ಮೈಮೇಲಿನ ಬುರುಕಿಯನ್ನು ದೂರ ಚಲ್ಲಿಕೊಟ್ಟು ಆತನ ಎದುರಿಗೆ ಹೋಗಿ ನಿಂತುಕೊಂಡಳು. ಆಗ ಧನ ಮಲ್ಲನು ಸೌಮ್ಯರೂಪದಿಂದ-ಏನು ? ಈ ಕೈಯಿಂದ ನಿನ್ನ ಕುತ್ತಿಗೆಯನ್ನು ಹಿಚಕಲಾ ? ನೀವು ನನ್ನನ್ನು ಇಲ್ಲಿಯವರೆಗೆ ಕೃಷ್ಣಸರ್ಪವೆಂದು ತಿಳಿಯುತ್ತ ಬಂದಿರುವಿರಿ. ನಾನು ಕೃಷ್ಣಸರ್ಪದಂತೆ ನಡೆದದ್ದೂ ನಿಜವು; ಆದರೆ ನಿಮ್ಮನು ಕಡಿಯಲಿಕ್ಕೆಂದು ಹಾಗೆ ನಾನು ನಡೆಯಲಿಲ್ಲ. ನಿಮಗೆ ಸುತ್ತು ಹಾಕಿ ಆ ಆನಂದಲ್ಲಿ

ಈ ಮಾತುಗಳನ್ನು ಕೇಳಿದಕೂಡಲೇ ಮೆಹೆರ್ಜಾನಳು ಮೆಟ್ಟಿಬಿದ್ದು, ದೂರ ಸರಿದು ನಿಂತುಕೊಂಡಳು. ಕೂಡಲೆ ಧನಮಲ್ಲನು ಮೆಹೆರ್ಜಾನಳಿಗೆ-ಯಾಕೆ, ಹೀಗೆ ಈಗ ಮೆಟ್ಟಿಬೀಳುವದೇಕೆ ? ನಾನು ಕಚ್ಚಿ ಪ್ರಾಣಹರಣ ಮಾಡುವದು ನಿಮ್ಮನ್ನಲ್ಲ ! ಬೇರೊಬ್ಬರನ್ನು ! ಆದರೆ ನಿಮ್ಮನ್ನು ನಾನು ಸುತ್ತು ಹಾಕಿ ಆನಂದಪಡತಕ್ಕವನು. ನಿಮ್ಮನ್ನು ಹುಡಕಲಿಕ್ಕೆ ನಾನು ಎಷ್ಟು ಕಷ್ಟ ಪಟ್ಟೆನು ? ಮೂವತ್ತು-ಮೂವತ್ತೈದು ವರ್ಷಗಳವರೆಗೆ ಹಿಂದುಸ್ತಾನವನ್ನೆಲ್ಲ ತಿರುಗಿದೆನು. ಸಾವಿರಾರು ಸ್ಥಳಗಳಲ್ಲಿ ನಿಮ್ಮನ್ನು ಹುಡುಕಿದೆನು. ಕಡೆಗೆ ಹುಡುಕುತ್ತ, ಹುಡುಕುತ್ತ ನೀವು ವಿಜಾಪುರಕ್ಕೆ ಹೋಗಿರುವಿರೆಂಬ ಸುದ್ದಿಯನ್ನು ಕೇಳಿ ಅಲ್ಲಿಗೆ ಹೋದೆನು. ಅಲ್ಲಿಗೆ ನಾನು ಹೋಗುವದರೊಳಗಾಗಿ ನೀವು ಇಲ್ಲಿಗೆ ಬಂದಿದ್ದಿರಿ. ಆಗ ನಾನು ಇಲ್ಲಿಗೆ ಬಂದೆನು. ನಿಮ್ಮ ಬಳಿಯಲ್ಲಿಯೇ ಇರಬೇಕೆನ್ನುವ ಹಾಗೆ ನನಗೆ ಆಗುತ್ತದೆ. ನಾನು ಕೃಷ್ಣಸರ್ಪವೇನೋ ನಿಜ, ಆದರೆ ಆ ಸರ್ಪವು ಕಡಿಯುವದು ಬೇರೊಬ್ಬನನ್ನು: ಸುತ್ತುಹಾಕಿಕೊಂಡು ಕುಳಿತುಕೊಳ್ಳುವದು ನಿಮ್ಮನ್ನು ; ಹೊತ್ತು ಬಂದಾಗ ಆ ಸರ್ಪವು ತನ್ನ ವೈರಿಯ ಸಮಾಚಾರವನ್ನು ತಕ್ಕೊಳ್ಳುವದು. ನೀವು ಸರ್ಪಕ್ಕೆ ವೈರಿಯಲ್ಲ. ಚಂದನ ಗಿಡವಿದ್ದ ಹಾಗೆ. ಸರ್ಪವು ಚಂದನ ಗಿಡವನ್ನು ಸುತ್ತಿಕೊಳ್ಳುವದಲ್ಲದೆ, ಆ ಗಿಡವನ್ನು ನಾಶ ಮಾಡುವದೆ.

ಧನಮಲ್ಲನ ಈ ಮಾತುಗಳನ್ನು ಕೇಳಿ ಮೆಹೆರ್ಜಾನಳು ಆಶ್ಚಯ್ಯಪಟ್ಟಳು. ಧನಮಲ್ಲನ ಪಾಪಬುದ್ದಿಯು ಕೂಡಲೇ ಆ ಚಾಣಾಕ್ಷಿಯ ಲಕ್ಷದಲ್ಲಿ ಬಂದಿತು. ಈ ದುಷ್ಕನು ತನ್ನ ಯಾವ ವೈರಿಯನ್ನು ಕಡಿದು ನಾಶ ಮಾಡುತ್ತಿರಬಹುದು ?