ಪುಟ:Kannadigara Karma Kathe.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೦

ಕನ್ನಡಿಗರ ಕರ್ಮಕಥೆ

ಹೀಗೆ ಜನರು ಬಂದದ್ದರಿಂದ ಧನಮಲ್ಲನು ಸುಮ್ಮನೆ ಹೊರಟು ಹೋದನು. ಆಗ ಮೆಹೆರ್ಜಾನಳಿಗೆ ದೊಡ್ಡ ಕುತ್ತಿನಿಂದ ಪಾರಾದಂತೆ ಸಮಾಧಾನವಾಯಿತು. ಆಕೆಯು ಮಾರ್ಜಿನೆಗೆ ಮಾರ್ಜಿನೆ, ದುರ್ದೈವಿಗಳಾದ ನಮ್ಮ ಬಳಿಗೆ ವಿಪತ್ತನ್ನನುಭವಿಸುವದಕ್ಕಾಗಿಮತ್ತೆ ಯಾವ ದುರ್ದೈವಿಯು ಬಂದಳು? ರಾಮರಾಜನು ನೋವಿನಮೇಲೆ ಬರೆ ಕೊಟ್ಟಹಾಗೆ ಮಾಡುವದಕ್ಕಾಗಿಯೇ ಒಬ್ಬೊಬ್ಬರಂತೆ ತರುಣ ಸ್ತ್ರೀಯರನ್ನು ಹಿಡಿದು ನನ್ನ ಬಳಿಗೆ ಕಳಿಸುವನೋ ಏನು ? ಎಂದು ನುಡಿಯುತ್ತಿರಲು, ಹೊಸದಾಗಿ ಬಂದ ತರುಣಿಯು ತನ್ನ ಮೋರೆಯ ಮೇಲಿನ ಬುರುಕೆಯನ್ನು ಚೆಲ್ಲಿಕೊಟ್ಟು ಮಾಸಾಹೇಬರ ಎದುರಿಗೆ ನಿಂತುಕೊಂಡಳು. ತನ್ನ ಮಗನ ಸರ್ವಸ್ವದ ನಾಶಕ್ಕೂ, ತನ್ನ ದುಃಖದ ಹೆಚ್ಚಳಕ್ಕೂ ಕಾರಣಳಾದ ನೂರಜಹಾನಳು ಅಕಸ್ಮಕವಾಗಿ ತನ್ನ ಎದುರಿಗೆ ನಿಂತದ್ದನ್ನು ನೋಡಿ ಮೆಹೆರ್ಜಾನಳಿಗೂ, ಮಾರ್ಜಿನೆಗು ಬಹಳ ಆಶ್ಚರ್ಯವಾಯಿತು. ಅತ್ತ ನೂರಜಹಾನಳಾದರೂ ತಾನು ಒಮ್ಮಿಂದೊಮ್ಮೆ ಮಾಸಾಹೇಬರನ್ನು ನೋಡಿ ಆಕೆಯ ಮನಸ್ಸಿಗೆ ಬಹಳ ಸಮಾಧಾನವಾಯಿತು. ತನ್ನನ್ನು ಮದುವೆಯಾಗುವದಕ್ಕಾಗಿ ರಣಮಸ್ತಖಾನನು ಮಾಡಿದ ಭಯಂಕರ ಪ್ರತಿಜ್ಞೆಯನ್ನು ಆತನು ಹ್ಯಾಗೆ ನೆರವೇರಿಸುವನೆಂಬದರ ಆಲೋಚನೆಯೊಂದೇ ನೂರಜಹಾನಳ ಮನಸ್ಸಿನಲ್ಲಿ ಇತ್ತು. ರಣಮಸ್ತಖಾನನು ರಾಮರಾಜನನ್ನು ಕೂಡಿಕೊಂಡಿದ್ದು ತನ್ನ ಪ್ರತಿಜ್ಞೆಯನ್ನು ಪೂರ್ಣಮಾಡುವದಕ್ಕಾಗಿ ಎಂದು ಆಕೆಯು ತಿಳಿದಿದ್ದಳು; ಯಾಕೆಂದರೆ ರಣಮಸ್ತಖಾನನ ಸ್ವಾಭಿಮಾನ-ಸ್ತಜಾತ್ಯಾಭಿಮಾನಗಳ ಪರಿಚಯವೂ ತನ್ನ ಮೇಲಿದ್ದ ಆತನ ಅಕೃತ್ರಿಮ ಪ್ರೇಮದ ಪರಿಚಯವೂ ನೂರಜಹಾನಳಿಗೆ ಇದ್ದವು; ಆದ್ದರಿಂದ ಆಕೆಯು ರಣಮಸ್ತಖಾನನ್ನು ಮನಮುಟ್ಟಿ ಪ್ರೀತಿಸುತ್ತಿದ್ದಳು. ರಣಮಸ್ತಖಾನನ ತಾಯಿಯಾದ್ದರಿಂದ ಮಾಸಾಹೇಬರ ಮೇಲಿನ ನೂರಜಹಾನಳ ವಿಶ್ವಾಸವು ಕಡಿಮೆಯಾಗಿದ್ದಿಲ್ಲ; ಆದರೆ ಮಾಸಾಹೇಬರು ಮಾತ್ರ ನೂರಜಹಾನಳನ್ನು ನೋಡಿ ಹುಬ್ಬು ಗಂಟಿಕ್ಕಿದರು. ತನ್ನ, ಹಾಗು ತನ್ನ ಮಗನ ಸರ್ವಸ್ವದ ನಾಶಕ್ಕೆ ಈಕೆಯೇ ಕಾರಣಳಾದಳೆಂಬ ಕಾರಣದಿಂದ ಮೆಹೆರಜಾನಳ ಮನಸ್ಸಿನಲ್ಲಿ ನೂರಜಹಾನಳ ವಿಷಯವಾಗಿ ತಿರಸ್ಕಾರವು ಉತ್ಪನ್ನವಾಯಿತು. ಮೇಲಾಗಿ ಮತ್ತೊಂದು ಮಾತಿನ ಸಂಶಯವು ಮೆಹೆರಜಾನಳ ಮನಸ್ಸಿನಲ್ಲಿ ಉತ್ಪನ್ನವಾಗಿ, ಆಕೆಯ ಮನಸ್ಸು ಮತ್ತಷ್ಟು ವ್ಯಗ್ರವಾಯಿತು. ರಾಮರಾಜನು ನೂರಜಹಾನಳನ್ನು ಸ್ವಾಧೀನ ಪಡಿಸಿಕೊಂಡು ತನ್ನನ್ನು ಫಲಿಸುವದಕ್ಕಾಗಿಯೇ ಬುದ್ಧಿಪೂರ್ವಕವಾಗಿ ಆಕೆಯನ್ನು ತನ್ನ ಬಳಿಗೆ ಕಳಿಸಿರುವನೆಂದು ಮೆಹೆಜಾನಳು ಕಲ್ಪಿಸಿದಳು; ಆದ್ದರಿಂದ ಆಕೆಯು ನೂರಜಹಾನಳ