ಪುಟ:Kannadigara Karma Kathe.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನಳ ಸಾಹಸ

೨೭೭

ಇಲ್ಲಿಗೆ ಕಳಿಸಿಕೊಟ್ಟನು; ಅಂದಬಳಿಕ ಮಾರ್ಜೀನೆ, ನಿಮ್ಮ ಬಳಿಗೆ ನಾನು ಬಂದದ್ದರಲ್ಲಿ ನನ್ನ ಅಪರಾಧವೇನಿದೆ ನೀನೇ ಹೇಳು ?

ಈ ಮೇರೆಗೆ ನೂರಜಹಾನಳು ತನ್ನ ವೃತ್ತಾಂತವನ್ನೆಲ್ಲ ಹೇಳಿದ್ದನ್ನು ಕೇಳಿ ಮಾರ್ಜೀನೆಯು ಆಶ್ಚರ್ಯಪಟ್ಟು, ಇಂಥ ಸಾಹಸ ಮಾಡಿದ್ದಕ್ಕಾಗಿ ಆಕೆಯು ನೂರಜಹಾನಳಿಗೆ ಬಹಳ ಸಿಟ್ಟುಮಾಡಿದಳು. ನೂರಜಹಾನಳು ಪಟ್ಟ ಕಷ್ಟವನ್ನು ನೆನಿಸಿ ಮಾರ್ಜೀನೆಯು ಬಹಳವಾಗಿ ಮರುಗಿದಳು. ಆಕೆಯು ನೂರಜಹಾನಳಿಗೆ ನಾನು ಮಾಸಾಹೇಬರ ಬಳಿಗೆ ಹೋಗಿ ಅವರ ಸಿಟ್ಟನ್ನು ಇಳಿಸುವೆನು, ಚಿಂತೆಮಾಡಬೇಡ, ಎಂದು ಹೇಳಿ, ಮಾಸಾಹೇಬರ ಬಳಿಗೆ ಹೋಗಿ ಎಲ್ಲ ವೃತ್ತಾಂತವನ್ನು ಹೇಳಿದಳು. ಅದನ್ನು ಕೇಳಿ ಮಾಸಾಹೇಬರು ಬಹಳ ಆಶ್ಚರ್ಯಪಟ್ಟರು. ನೂರಜಹಾನಳ ದುರವಸ್ಥೆಯನ್ನು ಕೇಳಿ ಅವರು ಮರುಗಿದರು. ನೂರಜಹಾನಳು ಕಣ್ಣಿರು ಹಾಕಿದಳೆಂಬದನ್ನು ಕೇಳಿ ಅವರು ಮಾರ್ಜೀನೆಗೆ ಹೋಗು, ನೂರಜಹಾನಳನ್ನು ಕರಕೊಂಡು ಬಾ, ಎಂದು ಹೇಳಿದರು. ಮಾರ್ಜೀನೆಯು ಕೂಡಲೆ ಹೋಗಿ ನೂರಜಹಾನಳನ್ನು ಕರಕೊಂಡು ಮಾಸಾಹೇಬರ ಬಳಿಗೆ ಬಂದಳು, ಮಾಸಾಹೇಬರು ನೂರಜಹಾನಳನ್ನು ಕರೆದು ಆದರಿಸಿದರು. ಸಮದುಃಖಿಗಳಾದ ಅವರಲ್ಲಿ ಪರಸ್ಪರ ಸಖ್ಯವು ಹೆಚ್ಚುತ್ತ ಹೋಯಿತು. ತನ್ನ ಮಗನು ರಾಮರಾಜನನ್ನು ಕೂಡಿಕೊಂಡು ಬಾದಶಹರ ದ್ರೋಹವನ್ನು ಚಿಂತಿಸಿರುವೆನೆಂದು ಮಾಸಾಹೇಬರು ತಿಳಕೊಡಿದ್ದರು; ಆದರೆ ರಾಮರಾಜನ ಘಾತಮಾಡಿ ಬಾದಶಹನ ಹಿತ ಮಾಡುವದಕ್ಕಾಗಿಯೇ ರಣಮಸ್ತಖಾನನು ರಾಮರಾಜನನ್ನು ಕೂಡಿರುವನೆಂದು ನೂರಜಹಾನಳು ಹೇಳಹತ್ತಿದಳು. ಹಿಂದಕ್ಕೆ ನೂರಜಹಾನಳ ಮುಂದೆ ತಮ್ಮ ಮಗನು ಕುಂಜವನದ ಏಕಾಂತದಲ್ಲಿ ಮಾಡಿದ ಪ್ರತಿಜ್ಞೆಯನ್ನು ಮರೆಗೆ ನಿಂತು ಮಾಸಾಹೇಬರು ಕೇಳಿದ್ದರಿಂದ, ನೂರಜಹಾನಳ ಮಾತು ಅವರಿಗೆ ಅಷ್ಟು ಅಶಕ್ಯವಾಗಿ ತೋರಲಿಲ್ಲ. ಹಾಗೆ ಇದ್ದರೂ ಇರಬಹುದೆಂದು ಭಾವಿಸಿ, ಅವರು ಸ್ವಲ್ಪ ಸಮಾಧಾನಪಟ್ಟು, ತಾವು ರಾಮರಾಜನ ಈ ಪ್ರತಿಬಂಧದಿಂದ ಪಾರಾಗಿಹೋಗಲಿಕ್ಕೆ ಹಂಚಿಕೆಯನ್ನು ಯೋಚಿಸಹತ್ತಿದರು. ಧನಮಲ್ಲನನ್ನು ಒಲಿಸಿಕೊಂಡ ಹೊರತು ಯಾವ ಹಂಚಿಕೆಗಳೂ ಕೈಗೂಡವಹಾಗಿದ್ದಿಲ್ಲ. ಧನಮಲ್ಲನ ದುಷ್ಟ ಬುದ್ದಿಯನ್ನು ಮಾಸಾಹೇಬರು ಅರಿತಿದ್ದರೂ, ಕಾರ್ಯವು ಸಾಧಿಸುವವರೆಗೆ ಆತನ ಅನುವರ್‍ತನ ಮಾಡಲೇಬೇಕೆಂದು ತಿಳಿದು, ಅವರು ತಮ್ಮಸಿಟ್ಟನ್ನೆಲ್ಲ ನುಂಗಿಕೊಂಡು ಧನಮಲ್ಲನನ್ನು ರಮಿಸುತ್ತಲಿದ್ದರು. ನೂರಜಹಾನಳೂ ಧನಮಲ್ಲನನ್ನು ಸವಿಮಾತುಗಳಿಂದ ಮೋಹಗೊಳಿಸಹತ್ತಿದಳು. ಆಕೆಯು ಆ