ಪುಟ:Kannadigara Karma Kathe.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೨

ಕನ್ನಡಿಗರ ಕರ್ಮಕಥೆ

ಕರೆಯಕಳುಹಿದನು. ರಣಮಸ್ತಖಾನನು ನಿದ್ದೆ ಹತ್ತಿ ಮಲಗಿದ್ದರೂ ಎಬ್ಬಿಸಿ ಕರಕೊಂಡು ಬರಬೇಕೆಂದು ರಾಮರಾಜನು ತನ್ನ ಸೇವಕನಿಗೆ ಹೇಳಿದನು. ಆದರಂತೆ ಸೇವಕನು ಹೋಗಿ ಕರೆಯಲು, ರಣಮಸ್ತನು ಕೂಡಲೆ ರಾಮರಾಜನ ಬಳಿಗೆ ಬಂದ- “ತಾವು ಇಷ್ಟು ಮಧ್ಯರಾತ್ರಿಯಲ್ಲಿಯೇ ಒಮ್ಮಿಂದೊಮ್ಮೆ ಕರೆಸಿದ ಕಾರಣವೇನೆಂದು ರಾಮರಾಜನನ್ನು ಕೇಳಹತ್ತಿದನು. ರಣಮಸ್ತನು ಪ್ರತ್ಯಕ್ಷನಾಗಿ ತನ್ನ ಎದುರಿಗೆ ಬಂದು ನಿಂತದ್ದನ್ನು ನೋಡಿ ರಾಮರಾಜನ ಮನಸ್ಸು ತಿರುಗಿತು. ಇವನ ಜನ್ಮವೃತ್ತಾಂತವನ್ನು ಈಗಲೇ ಹೇಳಿದರೆ ಎಲ್ಲಿ ಕ್ಷುಬ್ದನಾಗುವನೋ ಎಂದು ರಾಯನು ಶಂಕಿಸತೊಡಗಿದನು. ಈಗ ಬೇಡ, ಯುದ್ಧ ಮುಗಿದಬಳಿಕ ಹೇಳೋಣವೆಂದು ಅತನು ನಿಶ್ಚಯಿಸಿ, ಇನ್ನು ರಣಮಸ್ತನ ಸಂಗಡ ಯಾವ ಪ್ರಸಕ್ತಿಯನ್ನು ಕುರಿತು ಮಾತಾಡಬೇಕೆಂದು ರಾಯನು ಎಣಿಕೆ ಹಾಕಹತ್ತಿದನು. ಈ ಸ್ಥಿತಿಯಲ್ಲಿ ಆತನು ಸ್ತಬ್ದವಾಗಿ ಬಹಳ ಹೊತ್ತು ಕುಳಿತುಕೊಳ್ಳಬೇಕಾಯಿತು; ಆದರೂ ಯೋಗ್ಯ ಪ್ರಸಕ್ತಿಯು ಆತನ ಮನಸ್ಸಿಗೆ ಹೊಳೆಯಲೊಲ್ಲರು, ಆಗ ಆತನು ಏನಾದರೂ ಮಾತಾಡಬೇಕೆಂದು ತಿಳಿದು ರಣಮಸ್ತನನ್ನು ಕುರಿತು ರಣಮಸ್ತ, ಆಗಲೇ ನೀನು ಸೈನ್ಯವನ್ನು ಬೇರೆ ಕಡೆಗೆ ಕಳಿಸಬೇಕೆಂದು ಹೇಳಿದೆಯಲ್ಲ, ಆ ಮಾತನ್ನು ಕುರಿತು ನಾನು ಬಹಳವಾಗಿ ಆಲೋಚಿಸಿದೆನು; ಆದರೆ ನಾವು ಈಗ ತಡಮಾಡದೆ ಶತ್ರುಗಳ ಮೇಲೆ ಬೀಳುವದರಲ್ಲಿಯೇ ಲಾಭವಿರುತ್ತದೆಂದು ನನಗೆ ತೋರುತ್ತದೆ. ಶತ್ರುಗಳು ತಮ್ಮ ಸ್ಥಳಬಿಟ್ಟು ಕದಲುವದರೊಳಗೆ ಈ ಕಾರ್ಯವಾಗಲಿಕ್ಕೆ ಬೇಕು, ಅನ್ನಲು ರಣಮಸ್ತನು ವಿಚಾರಮಾಡುವವನಂತೆ ಸುಮ್ಮನೆ ಕುಳಿತು, ಬಳಿಕ ಗಟ್ಟಿಯಾಗಿ ನಕ್ಕು, ರಾಮರಾಜನಿಗೆ-ಸರಕಾರ್‌, ತಾವು ಈಗ ಶತ್ರುಗಳ ಮೇಲೆ ಬಿದ್ದರೆ ಅವರಿಗೆ ಅನುಕೂಲ ಮಾಡಿಕೊಟ್ಟಂತಾಗಬಹುದೆಂದು ನನಗೆ ತೋರುತ್ತದೆ; ಯಾಕೆಂದರೆ ಅದರಿಂದ ಅವರಿಗೆ ಅನಾಯಾಸವಾಗಿ ನೆವಸಿಕ್ಕಂತೆ ಆಗಿ, ಅವರು ಹಿಂದೆಗೆಯುತ್ತ ತಮ್ಮ ಸಂಕೇತದ ಕಾಳಹೊಳೆಯ ಸ್ಥಳದ ಕಡೆಗೆ ಹೋಗಿ ವಿಜಯನಗರದ ಮೇಲೆ ನುಗ್ಗಬಹುದು. ನೀವು ಮುಂದೆ ಸಾಗಿಬರಬಾರದೆಂದು ಕೆಲವು ಶತ್ರು ಸೈನ್ಯವು ನಿಮ್ಮ ಸಂಗಡ ಕಾದುತ್ತ ನಿಲ್ಲಬಹುದು, ನೀವು ಹೇಳುವ ವಿಚಾರವು ಯೋಗ್ಯವಿದ್ದರೂ ನಮ್ಮ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ, ಒಂದು ಭಾಗವನ್ನು ತುಂಗಭದ್ರೆಯ ನಿಟ್ಟಿನ ಕಡೆಗೆ ಕಳಿಸುವದು ನೆಟ್ಟಗೆ ಕಾಣುತ್ತದೆ. ಹಾಗೆ ಮಾಡಿದರೆ ವಿಜಯನಗರದ ಕಡೆಗೆ ಹೋದ ಶತ್ರು ಸೈನ್ಯವು ನಮ್ಮ ಎರಡೂನಿಟ್ಟಿನ ಸೈನ್ಯಗಳ ನಡುವೆಸಿಕ್ಕು ಅದಕ್ಕೆ ತುಂಗಭದ್ರೆಯಲ್ಲಿ ಜಲ ಸಮಾಧಿಯು ದೊರೆಯುವದು. ಇಲ್ಲದಿದ್ದರೆ