ಪುಟ:Kannadigara Karma Kathe.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುದ್ಧಪ್ರಸಂಗವು

೨೯೫

ವೇಗದಿಂದ ಬಂದು, ಮುಸಲ್ಮಾನ ಸೈನ್ಯದ ಎಡಬಲಗಳಲ್ಲಿ ಭಯಂಕರ ರೀತಿಯಿಂದ ಏರಿಹೋದರು. ಮಧ್ಯಭಾಗದಲ್ಲಿಯಂತೂ ರಾಮರಾಜನು ಸ್ವತಃ ಆನೆಯ ಮೇಲೆ ಕುಳಿತು ಕೊಂಡು ಸಂಚರಿಸುತ್ತ ತನ್ನ ದಂಡಾಳುಗಳಿಗೆ ಧೈರ್ಯ ಹೇಳುತ್ತಲಿದ್ದನು. ಆತನ ಅಲೌಕಿಕ ಧೈರ್ಯದಿಂದ ಬಹಳ ಪ್ರಯೋಜನವಾಯಿತು. ಅವನ ಸೈನ್ಯದವರು ಒಳಿತಾಗಿ ಸ್ಪುರಣಗೊಂಡರು, ಶತ್ರುಗಳ ತೋಪುಗಳು ಸುಮ್ಮನಾದವು. ರಾಮರಾಜನು ಶತ್ರುಗಳನ್ನು ಹಿಂದೆ ಸರಿಸುತ್ತ ಹೋದನು. ಶತ್ರುಗಳು ಹಿಂದಕ್ಕೆ ಸರಿಯುತ್ತ ಹೋದಂತೆ ರಾಮರಾಜನು ವಿಲಕ್ಷಣ ರೀತಿಯಿಂದ ಆವೇಶಗೊಂಡನು. ವೃದ್ಧ ರಾಮರಾಜನ ಈಗಿನ ಮಹಾ ಶೌರ್ಯಕ್ಕೆ ಭಾರತೀಯ ವೀರಾಗ್ರಣಿ ಭೀಷ್ಮನ ಶೌರ್ಯವನ್ನು ಹೋಲಿಸಬಹುದು. ಈಗಿನ ಕಾಲದಲ್ಲಿ ರಾಮರಾಜನ ಮನಸ್ಸು ೯೦ ವರ್ಷದ್ದಿತ್ತೆಂದು ಕೆಲವರು ಹೇಳಿರುತ್ತಾರೆ; ಆದರೆ ಇದು ಆತಿಶಯೋಕ್ತಿಯೆಂದು ಭಾವಿಸಿದರೂ, ರಾಮರಾಜನು ಈ ಕಾಲದಲ್ಲಿ ವೃದ್ದಾಪ್ಯದೆಶೆಯನ್ನು ಹೊಂದಿದ್ದನೆಂದು ಹೇಳಲಿಕ್ಕೆ ಬಾಧಕವಿಲ್ಲ. ಉಭಯ ಸೈನಿಕರು ಎದೆಗೆ ಎದೆಯಾನಿಸಿ ಕಾದುತ್ತಲಿದ್ದರು. ಇನ್ನು ಮೇಲೆ ತನಗೆ ಪೂರ್ಣ ಜಯಪ್ರಾಪ್ತಿಯಾಗುವದೆ೦ಬ ನ೦ಬಿಗೆಯು ರಾಮರಾಜನಲ್ಲಿ ಉತ್ಪನ್ನವಾಗತೊಡಗಿತ್ತು; ಮುಸಲ್ಮಾನರು ಇನ್ನು ಓಡಿಹೋಗತಕ್ಕವರು ಅಷ್ಟರಲ್ಲಿ ದುರ್ದೈವದಿಂದ ರಾಮರಾಜನು ಹತ್ತಿಕೊಂಡಿದ್ದ ಆನೆಗೆ ಗಾಯವಾಗಿ ಅದು ದೊಪ್ಪನೆ ನೆಲಕ್ಕೆ ಕುಳಿತಿತು. ಆದರೆ ರಾಮರಾಜನು ಎದೆಗುಂದಲಿಲ್ಲ; ಆತನು ಅಂಬಾರಿಯಿಂದ ಕೆಳಗೆ ಇಳಿದು, ತನ್ನ ಸಲುವಾಗಿ ಒಂದು ಸಿಂಹಾಸನವನ್ನು ಸಿದ್ಧಮಾಡುವದಕ್ಕಾಗಿ ತನ್ನ ಸೈನಿಕರಿಗೆ ಆಜ್ಞಾಪಿಸಿದನು. ಮುಂದೆ ಸ್ವಲ್ಪ ವೇಳೆಯಲ್ಲಿ ಸಿಂಹಾಸನವು ಸಿದ್ಧವಾಗಲು, ರಾಮರಾಜನು ಅದರ ಮೇಲೆ ಕುಳಿತು ಸೈನ್ಯದಲ್ಲಿ ಮಹಾ ಪರಾಕ್ರಮವನ್ನು ಮಾಡಿದವರಿಗೆ ಕೈಗೆ ಬಂದಂತೆ ಉಚಿತಗಳನ್ನು ಕೊಡಹತ್ತಿದನು. ಶತ್ರುಗಳ ತೋಫಖಾನೆಯಲ್ಲಿ ಜೀವವೇನು ಉಳಿದಿರುವದಿಲ್ಲೆಂದು ಆತನು ಸಂಪೂರ್ಣವಾಗಿ ನಂಬಿಕೊಂಡಿದ್ದನು. ರಾಮರಾಜನ ಸೈನಿಕರಾದರೂ ಆವೇಶದಿಂದ ಕಾದುತ್ತಲಿದ್ದರು. ಅಷ್ಟರಲ್ಲಿ ಶತ್ರುಗಳ ಕಡೆಯ ಒಳ್ಳೆ ಜಾಣರಾದ ಗೋಲಂದಾಜಿಗಳು ತಮ್ಮ ತೋಪುಗಳಲ್ಲಿ ತಾಮ್ರದ ದುಡ್ಡುಗಳನ್ನೂ ಚೂರುಗಳನ್ನೂ ತುಂಬಿ ಒಮ್ಮೆಲೆ ಹಾರಿಸಹತ್ತಿದರು. ಇದರಿಂದ ರಾಮರಾಜನ ಸೈನಿಕರು ಅಕಸ್ಮಾತಾಗಿ ಗಾಯ ಪಟ್ಟು ನೆಲಕ್ಕೆ ಉರುಳಹತ್ತಿದರು. ಈ ಸುದ್ದಿಯನ್ನು ರಾಮರಾಜನ ಕಡೆಯ ಜನರು ರಾಮರಾಜನಿಗೆ ಹೇಳಿ, ಇನ್ನು ನೀವು ಬೇಗನೆ ಕುದುರೆಯನ್ನು ಹತ್ತಿ ಹಿಂದಕ್ಕೆ ಸರಿಯಬೇಕೆಂದು ಸೂಚಿಸಿದರು; ಆದರೆ ಹೀಗೆ ಮಾಡುವದರಿಂದ