ಪುಟ:Kannadigara Karma Kathe.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ಕನ್ನಡಿಗರ ಕರ್ಮಕಥೆ

ತನ್ನ ದಂಡಾಳುಗಳು ಎದೆಗೆಟ್ಟಾರೆಂದು ತಿಳಿದು ಸಾಯುವವರೆಗೆ ಶತ್ರುಗಳಿಗೆ ಬೆನ್ನು ತೋರಿಸಬಾರದೆಂದು ರಾಯನು ನಿಶ್ಚಯಿಸಿ, ತನ್ನ ಸಿಂಹಾಸನವನ್ನು ಬಿಟ್ಟು ಏಳದಾದನು.

ರಾಮರಾಜನ ಈ ನಿಶ್ಚಯವು ಕಡೆತನಕ ತಡೆಯಲಿಲ್ಲ. ತಾಮ್ರದ ದುಡ್ಡುಗಳ ಹಾಗೂ ಚೂರುಗಳ ಹೊಡೆತವನ್ನು ತಾಳಲಾರದೆ, ಹಿಂದೂ ಜನರು ಹಿಂದಕ್ಕೆ ಸರಿಯಹತ್ತಿದರು. ಅವರು ಹಿಂದಕ್ಕೆ ಸರಿಯುತ್ತ ಹೋದಂತೆ ಮುಸಲ್ಮಾನರು ಮುಂದಕ್ಕೆ ಬರಹತ್ತಿದರು. ಅಷ್ಟರಲ್ಲಿ ಹುಸೇನ ನಿಜಾಮಶಹನಿಗೆ, ರಾಮರಾಜನು ಸೈನ್ಯ ಮಧ್ಯದಲ್ಲಿ ಸಿಂಹಾಸನದ ಮೇಲೆ ಕುಳಿತಿರುವೆನೆಂಬ ಸುದ್ದಿಯು ಹತ್ತಿತು. ಕೂಡಲೇ ಆತನು ರಾಮರಾಜನ ತಲೆಯನ್ನು ತಂದು ಕೊಟ್ಟವರಿಗೂ, ಆ ಕಾರ್ಯಕ್ಕಾಗಿ ಸಹಾಯ ಮಾಡಿದವರಿಗೂ ಬಹುದೊಡ್ಡ ಇನಾಮು ಕೊಡುವೆನೆಂದು ಡಂಗುರ ಸಾರಿದನು. ಆಗ ನಿಜಾಮಶಹನ ದಂಡಿನವರು ಆವೇಶದಿಂದ ಹಿಂದುಗಳ ಸೈನ್ಯದ ಮೇಲೆ ನುಗ್ಗಿದರು. ಅಷ್ಟರಲ್ಲಿ ನಿಜಾಮಶಹನ ಆನೆಯು ಬೆದರಿ ರಾಮರಾಜನಿದ್ದ ಕಡೆಗೆ ಓಡಿಬಂದಿತು. ಹಿಂದುಗಳು ನಿಜಾಮಶಹನನ್ನು ಕೊಲ್ಲಬೇಕೆಂದು ಆನೆಯನ್ನು ಮುತ್ತಲು, ಅದು ಮತ್ತಷ್ಟು ಬೆದರಿ ಕರ್ಮಧರ್ಮ ಸಂಯೋಗದಿಂದ ರಾಮರಾಜನು ಕುಳಿತಿರುವಲ್ಲಿಗೆ ಬಂದಿತು. ಕೂಡಲೇ ರಾಮರಾಜನ ಜನರು ರಾಮರಾಜನನ್ನು ಪಲ್ಲಕ್ಕಿಯಲ್ಲಿ ಹಾಕಿಕೊಂಡು ವೇಗದಿಂದ ಹಿಂದಕ್ಕೆ ಓಡಹತ್ತಿದರು. ಹುಸೇನಶಹನ ಆನೆಯು ಪಲ್ಲಕ್ಕಿಯ ಬೆನ್ನುಹತ್ತಿಯೇ ಸಾಗಿತ್ತು.


****