ಪುಟ:Kannadigara Karma Kathe.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಂಪತಿಗಳ ಅಂತವು

೨೯೯

ರಣಮಸ್ತ-ಹೌದು, ಮಾಡುವೆನು, ಆದರೆ ಮೊದಲು ನೂರಜಹಾನಳು ಎಲ್ಲಿ ಇರುತ್ತಾಳೆ ಹೇಳು.

ರಾಮರಾಜ-ನೂರಜಹಾನಳೆ ? ನೂರಜಹಾನಳು ಆ ಕುಂಜವನದಲ್ಲಿರುತ್ತಾಳೆ.

ರಣಮಸ್ತ-ಕುಂಜವನದಲ್ಲಿರುವಳೇ ? ಶಾಭಾಸ್! ಒಳ್ಳೇದಾಯಿತು ಬಹಳ ಒಳ್ಳೇದಾಯಿತು. ಬಹು ಯೋಗ್ಯವಾದ ಸ್ಥಳದಲ್ಲಿ ಆಕೆಯನ್ನು ಇಟ್ಟಿರುವೆ. ಇನ್ನು ಮೇಲೆ ನೀನು ಈ ಜಗತ್ತಿನಲ್ಲಿ ಇರಲವಶ್ಯವಿಲ್ಲ. ಇಲ್ಲಿ ನಿನ್ನ ಕೆಲಸವೇನೂ ಇಲ್ಲ. ನೂರಜಹಾನಳ ಪ್ರಾಪ್ತಿಗಾಗಿ ನಾನು ನಿನ್ನ ಶಿರಚ್ಛೇದ ಮಾಡಲೇಬೇಕಾಗಿರುವದು.

ಈ ಮೇರೆಗೆ ನುಡಿದು ರಣಮಸ್ತಖಾನನು ಒಮ್ಮೆಲೆ ರಾಮರಾಜನ ತಲೆಯಮೇಲಿನ ಮುಂಡಾಸವನ್ನು ಹಾರಿಸಿ, ಆತನ ಚಂಡಿಕೆ ಹಿಡಿದು, ಖಡ್ಗದಿಂದ ಅವನ ರುಂಡವನ್ನು ಮುಂಡದಿಂದ ಬೇರೆ ಮಾಡಿದನು. ಆಗ ಅವನ ರುಂಡವುತಮ್ಮಾ, ರಣಮಸ್ತ ನೀನು.......ಎಂದು ಏನೋ ನುಡಿಯುತ್ತಿತ್ತು. ತಮ್ಮ ಒಡೆಯನ ಈ ಕೃತಿಯನ್ನು ನೋಡಿ ರಣಮಸ್ತನ ಜನರು ಆತನನ್ನು ಬಹಳವಾಗಿ ಶ್ಲಾಘಿಷಿದರು, ರಣಮಸ್ತನು ರಕ್ತಸುರಿಯುತ್ತಿರುವ ರಾಮರಾಜನ ಶಿರಸ್ಸನ್ನು ಕುದುರೆಯ ರಿಕೀಬಿಗೆ ಕಟ್ಟಿ, ತನ್ನ ಜನರೊಡೆನೆ ಕುಂಜವನದ ಕಡೆಗೆ ಸಾಗಿದನು. ರಣಮಸ್ತನಿಗೆ ತುಂಗಭದ್ರೆಯ ಕಾಳಹೊಳೆಯು ಚೆನ್ನಾಗಿ ಗೊತ್ತಿದ್ದರಿಂದ, ಆತನು ಆ ಕಾಳ ಹೊಳೆಯಲ್ಲಿ ಕುದುರೆಯನ್ನು ನೂಕಿದನು. ಆಗ ತುಂಗಭದ್ರೆಯ ಪವಿತ್ರೋದಕದಲ್ಲಿ ರಾಮರಾಜ ರುಂಡದ ರಕ್ತವು ತೊಳೆಯುತ್ತಲಿತ್ತು. ಬರಬರುತ್ತ ಆ ಕೊಲೆಗಡುಕನು ಕುಂಜವನದ ಸನಿಯಕ್ಕೆ ಬಂದನು. ರಣಮಸ್ತನ ಕುದುರೆಯು ಯುದ್ಧದಲ್ಲಿ ಬಹಳವಾಗಿ ದಣಿದಿತ್ತು. ತುಂಗಭದ್ರೆಯನ್ನು ದಾಟುವಾಗಂತು ಅದು ತೀರಹಣ್ಣಾಗಿತ್ತು, ಆದರೆ ನೂರಜಹಾನಳ ಧ್ಯಾನಮಗ್ನನಾದ ರಣಮಸ್ತನು, ಕುದುರೆಯ ಕಡೆಗೆ ನೋಡದೆ ಆದನ್ನು ವೇಗದಿಂದ ಸಾಗಿಸಿಕೊಂಡು ಹೋಗಿ ಕುಂಜವನವನ್ನು ಪ್ರವೇಶಿಸಿದನು.

ಆಗ ಇಳಿಹೊತ್ತಿನ ಸಮಯವಾಗಿತ್ತು. ಸೂರ್ಯಾಸ್ತಕ್ಕೆ ಇನ್ನು ತಾಸುಒಂದೂವರೆ ತಾಸಿನ ಅವಕಾಶವಿರಬಹದು. ಮೆಹೆರ್ಜಾನ-ನೂರಜಹಾನರಲ್ಲಿ ಮೊದಲಿನಂತೆ ಸಖ್ಯವು ಉತ್ಪನ್ನವಾಗಿರಲು, ಅವರು ಆಗ ಪುಷ್ಕರಣಿಯ ದಂಡೆಯ ಮೇಲೆ ಒಬ್ಬರೊಬ್ಬರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತ ಕುಳಿತುಕೊಂಡಿದ್ದರು, ರಣಮಸ್ತನು ಬಾದಶಹನ ಮೇಲೆ ತಿರುಗಿಬಿದ್ದು ರಾಮರಾಜನನ್ನು ಕೂಡಿಕೊಂಡದ್ದಕ್ಕಾಗಿ ಇಬ್ಬರೂ ವ್ಯಸನ ಪಡುತ್ತಲಿದ್ದರು.